'ಮುಷ್ಕರ ನಿರತ ವೈದ್ಯರಿಗೆ ಛೀಮಾರಿ ಹಾಕಿ'
ಬೆಳಗಾವಿ, ನವೆಂಬರ್ 15 : ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಮಸೂದೆ ತಿದ್ದುಪಡಿ ಮಂಡನೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಖಾಸಗಿ ವೈದ್ಯರಿಂದ ರಾಜ್ಯಾದ್ಯಂತ ರೋಗಿಗಳು ತೊಂದರೆ ಪಡುವಂತಾಗಿದೆ. ಆದರೆ ಈಗ ಬಂದಿರುವ ಸುದ್ದಿಯೆಂದರೆ ಪ್ರತಿಭಟನೆ ನಡೆಸುತ್ತಿರುವ ವೈದ್ಯರ ವಿರುದ್ಧವೇ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಲಾಗಿದೆ.
ವೈದ್ಯರ ಮುಷ್ಕರಕ್ಕೆ ಕಾರಣವಾಯಿತೇ ಈ ಅಂಶಗಳು
ವಕೀಲ ಅಮೃತೇಶ್ ಎಂಬುವರು ಖಾಸಗಿ ವೈದ್ಯರು ನಡೆಸುತ್ತಿರುವ ಪ್ರತಿಭಟನೆ ಪ್ರಶ್ನಿಸಿ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹೂಡಿದ್ದಾರೆ. ನೆಲಮಂಗಲದ ಆದಿನಾರಾಯಣ ಎಂಬ ಸಾರ್ವಜನಿಕರೂ ಕೂಡ ಇಂದು (ನವೆಂಬರ್ 15) ಸಾರ್ವಜನಿಕ ಹಿತಾಸಕ್ತಿ ಹಾಕಿರುವುದು ವರದಿಯಾಗಿದ್ದು ಮುಷ್ಕರ ಮಾಡುತ್ತಿರುವ ವೈದ್ಯರು ಮತ್ತು ಸರ್ಕಾರಕ್ಕೆ ಛೀಮಾರಿ ಹಾಕಲು ಅರ್ಜಿಯಲ್ಲಿ ಕೋರಲಾಗಿದೆ.
ಚಿತ್ರಗಳು : ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ
ವೈದ್ಯರ ಪ್ರತಿಭಟನೆಯಿಂದಾಗಿ ರೋಗಿಗಳು ಸಾವನ್ನಪ್ಪುತ್ತಿದ್ದಾರೆ, ಈ ವರೆಗೆ ರಾಜ್ಯದ ವಿವಿದೆಡೆ 15 ರೋಗಿಗಳು ಸೂಕ್ತ ಚಿಕಿತ್ಸೆ ಸಿಗದೆ ಅಸುನೀಗಿದ್ದಾರೆ. ವೈದ್ಯರು ಪ್ರತಿಭಟನೆ ಮುಂದುವರೆಸಿದರೆ ಪರಿಸ್ಥಿತಿ ಇನ್ನೂ ಹದಗೆಡಲಿದೆ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಆದಿನಾರಾಯಣ ಉಲ್ಲೇಖ ಮಾಡಿದ್ದಾರೆ.
ಕರ್ತವ್ಯಕ್ಕೆ ಸೇರುವಾಗ ಜನಗಳ ಸೇವೆ ಮಾಡುತ್ತೇವೆಂದು ಪ್ರತಿಜ್ಞೆ ಮಾಡಿದ ವೈದ್ಯರು ಹೀಗೆ ಜವಾಬ್ದಾರಿ ಹೀನವಾಗಿ ವರ್ತಿಸಿದರೆ ಹೇಗೆ ಎಂದು ಆದಿನಾರಾಯಣ ಪ್ರಶ್ನೆ ಮಾಡಿದ್ದಾರೆ.
ಆರೋಗ್ಯ ಎಮರ್ಜೆನ್ಸಿ: ಸತ್ತವರ ಸಂಖ್ಯೆ 15ಕ್ಕೆ ಏರಿಕೆ
ವಿರೋಧ ಪಕ್ಷಗಳು, ಆಸ್ಪತ್ರೆಗಳನ್ನು ನಡೆಸುವ ಕಾರ್ಪೊರೇಟ್ ಸಂಸ್ಥೆಗಳ ಬೆಂಬಲದಿಂದಾಗಿ ಜವಾಬ್ದಾರಿ ಮರೆತು ಪ್ರತಿಭಟನೆ ಮುಂದುವರೆಸುತ್ತಿರುವ ವೈದ್ಯರ ಮಂದೆ ವಿರುದ್ಧ ಸಾರ್ವಜನಿಕರೊಬ್ಬರು ತಿರುಗಿ ಬಿದ್ದಿದ್ದಾರೆ. ಬಹುತೇಕ ಸಾರ್ವನಿಕರೂ ವೈದ್ಯರ ಪ್ರತಿಭಟನೆ ವಿರುದ್ಧ ರೋಸಿಹೋಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವೈದ್ಯರ ವರ್ತನೆ ಬಗ್ಗೆ ಟೀಕೆಗಳು ನಿಧಾನವಾಗಿ ಹೆಚ್ಚಾಗುತ್ತಿವೆ. ಈ ಮಧ್ಯೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿರುವುದು ಆಶಾದಯಕ ಬೆಳವಣಿಗೆ ಎನ್ನಬಹುದಾಗಿದೆ.
ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಾಲಯ ಪರಿಗಣಿಸಿ ಸರ್ಕಾರ ವೈದ್ಯರ ಮಧ್ಯೆ ಪ್ರವೇಶ ಮಾಡಿ ಸಮಸ್ಯೆ ಬಗೆಹರಿಸಿ ರಾಜ್ಯದ ಜನರ ಸಮಸ್ಯೆ ಇತ್ಯರ್ಥ ಪಡಿಸುತ್ತದೆಯೆ ಕಾದು ನೋಡಬೇಕು. ವೈದ್ಯರ ಮುಷ್ಕರದಿಂದ ಹೈರಾಣಾಗುತ್ತಿರುವ ಸಾರ್ವಜನಿಕರದ್ದಂತೂ ಇದೇ ಆಶಯ.