ಪ್ರಾಧ್ಯಾಪಕರ ನೇಮಕಾತಿಯಲ್ಲಿ ದೈಹಿಕ ಶಿಕ್ಷಕರಿಗೆ ಮೀಸಲು ನೀಡುವಂತೆ ಆಗ್ರಹ
ಬೆಂಗಳೂರು, ಫೆಬ್ರವರಿ 21: ಸಹಾಯಕ ಪ್ರಾಧ್ಯಾಪಕರ ನೇಮಕಾತಿ 2020ರ ಅಧಿಸೂಚನೆಯಲ್ಲಿ ದೈಹಿಕ ಶಿಕ್ಷಣ ನಿರ್ದೇಶಕರ ಹುದ್ದೆಗಳ ನೇಮಕಾತಿ ಸೇರ್ಪಡೆ ಮಾಡುವಂತೆ ಒತ್ತಾಯಿಸಿ ಸಹಾಯಕ ಪ್ರಾಧ್ಯಾಪಕ ನಿರುದ್ಯೋಗಿ ಅರ್ಹ ದೈಹಿಕ ಶಿಕ್ಷಣ ಅಭ್ಯರ್ಥಿಗಳು ಉನ್ನತ ಶಿಕ್ಷಣ ಸಚಿವ ಅಶ್ವಥ್ಥ ನಾರಾಯಣ್ ಮುಖಾಂತರ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.
ಪಿಟ್ ಇಂಡಿಯಾ ಆಂದೋಲನ, ಅಂತರಾಷ್ಟ್ರೀಯ ಯೋಗ, ದಿನ ಖೇಲೋ ಇಂಡಿಯಾ ಅಂತಹ ಕಾರ್ಯಕ್ರಮ ಮೂಲಕ ದೇಶಾದ್ಯಂತ ಕ್ರೀಡೆ ಹಾಗೂ ದೈಹಿಕ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡುತ್ತಿರುವುದು ಸ್ವಾಗತಾರ್ಹವಾಗಿದೆ. ಆರೋಗ್ಯವಂತ ದೇಶ ನಿರ್ಮಾಣದಲ್ಲಿ ದೈಹಿಕ ಶಿಕ್ಷಣದ ಪಾತ್ರ ಪ್ರಮುಖವಾಗಿದ್ದು,ಶಿಕ್ಷಣದಲ್ಲಿ ಹಾಗೂ ಪ್ರತಿಯೊಂದು ಹಂತದಲ್ಲಿಯೂ ಬೌದ್ಧಿಕ ಮಟ್ಟದ ಜೊತೆಗೆ ದೈಹಿಕ ಸದೃಡತೆಯನ್ನು ಪಡೆಯುವುದು ಅವಶ್ಯಕವಾಗಿದೆ.
ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸಹಾಯಕ ಪ್ರಾಧ್ಯಾಪಕರ ನೇಮಕಾತಿ 2020ರ ಅಧಿಸೂಚನೆಯಲ್ಲಿ ದೈಹಿಕ ಶಿಕ್ಷಣ ನಿರ್ದೇಶಕರ ಹುದ್ದೆಗಳ ನೇಮಕಾತಿ ಸೇರ್ಪಡೆ ಮಾಡುವ ಮೂಲಕ ಸಹಾಯಕ ಪ್ರಾಧ್ಯಾಪಕ ನಿರುದ್ಯೋಗಿ ಅರ್ಹ ದೈಹಿಕ ಶಿಕ್ಷಣ ಅಭ್ಯರ್ಥಿಗಳ ಹಿತಾಸಕ್ತಿ ಕಾಪಾಡಬೇಕೆಂದು ಮನವಿ ಮೂಲಕ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.
ರಾಜ್ಯದ ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಕ್ರೀಡೆಗಳಿಗೆ ಒತ್ತು ನೀಡಲಾಗುತ್ತಿದ್ದರೂ ಅದು ಇನ್ನು ಹೆಚ್ಚು ಪರಿಣಾಮಕಾರಿಯಾಗಬೇಕಾಗಿದೆ. ಅದೇ ರೀತಿ ಉನ್ನತ ಶಿಕ್ಷಣದ ಮಹತ್ವವನ್ನು ಯುವ ಜನತೆಗೆ ತಲುಪಿಸುವಲ್ಲಿ ಸಚಿವಾಲಯ ಇದೀಗ ರಾಜ್ಯದ ವಿವಿಧ ಕಾಲೇಜುಗಳಲ್ಲಿ ಒಟ್ಟು 310 ಪ್ರಾಂಶುಪಾಲರು 1242 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಿದ್ದು,ಸಹಾಯಕ ಪ್ರಾಧ್ಯಾಪಕ ನಿರುದ್ಯೋಗಿ ಅರ್ಹ ದೈಹಿಕ ಶಿಕ್ಷಣ ಅಭ್ಯರ್ಥಿಗಳನ್ನು ಕೂಡ ಪರಿಗಣಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ವಿನಂತಿಸಿದರು.