ಫೋನ್ ಕದ್ದಾಲಿಕೆ: ಎಸಿಪಿ ರಾಮಚಂದ್ರಪ್ಪ ತನಿಖೆ ನಡೆಸಿದ ಸಿಬಿಐ
ಬೆಂಗಳೂರು, ಸೆಪ್ಟೆಂಬರ್ 29: ಫೋನ್ ಕದ್ದಾಲಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಪೊಲೀಸರು ಎಸಿಪಿ ರಾಮಚಂದ್ರಪ್ಪ ಅವರ ವಿಚಾರಣೆ ನಡೆಸಿದ್ದಾರೆ.
ಈಗಾಗಲೇ ಫೋನ್ ಕದ್ದಾಲಿಕೆ ಕುರಿತು ಸಾಕಷ್ಟು ಸಾಕಷ್ಟು ವಿವಾದಗಳು ಸೃಷ್ಟಿಯಾಗಿವೆ. ಹಾಗೆಯೇ ಫೋನ್ ಕದ್ದಾಲಿಕೆ ಕುರಿತು ಎಡಿಜಿಪಿ ಅಲೋಕ್ ಕುಮಾರ್ ಅವರನ್ನು ಸತತ ಎಂಟು ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿತ್ತು.
ಕುಮಾರಕೃಪಾ ಅತಿಥಿಗೃಹದ ಸಿಬಿಐ ಕಚೇರಿಯಲ್ಲಿ ಅಧಿಕಾರಿಗಳ ಮುಂದೆ ಎಸಿಪಿ ರಾಮಚಂದ್ರಪ್ಪ ವಿಚಾರಣೆಗೆ ಹಾಜರಾಗಿದ್ದರು. ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಸಿಬಿಐ ಅಧಿಕಾರಿಗಳು ಎಸಿಪಿ ರಾಮಚಂದ್ರಪ್ಪನವರಿಗೆ ಸಮನ್ಸ್ ನೀಡಿದ್ದರು.
ಫೋನ್ ಕದ್ದಾಲಿಕೆ ನಡೆದ ವೇಳೆ ಸಿಸಿಬಿ ಟೆಕ್ನಿಕಲ್ ಸೆಲ್ ನ ಎಸಿಪಿಯಾಗಿದ್ದ ರಾಮಚಂದ್ರಪ್ಪನವರಿಗೂ ಸಿಬಿಐ ತನಿಖೆಯ ಬಿಸಿ ತಟ್ಟಿದೆ. ಇದೀಗ ಅವರ ವಿಚಾರಣೆ ಮುಗಿದಿದ್ದು, ಕೆಲವು ದಾಖಲೆಗಳ ಸಮೇತ ವಿಚಾರಣೆ ನಡೆಸಲಾಗಿದೆ. ಮತ್ತೆ ವಿಚಾರಣೆಗೆ ಕರೆದಾಗ ಬರುವಂತೆ ಸಿಬಿಐ ಅಧಿಕಾರಿಗಳು ಸೂಚಿಸಿದ್ದಾರೆ.
ಫೋನ್ ಟ್ಯಾಪಿಂಗ್: ಎಡಿಜಿಪಿ ಅಲೋಕ್ ಕುಮಾರ್ ವರ್ಗಾವಣೆ
ಈ ಬಗ್ಗೆ ಸಮಗ್ರ ತನಿಖೆ ನಡೆಸಲು ಈಗಿನ ಬಿಜೆಪಿ ಸರ್ಕಾರ ಸಿಬಿಐಗೆ ವಹಿಸಿತ್ತು. ಈ ಹಿನ್ನೆಲೆಯಲ್ಲಿ ಎಚ್ಡಿ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರದ ಅವಧಿಯಲ್ಲಿ ಪೊಲೀಸ್ ಆಯುಕ್ತರಾಗಿದ್ದ ಅಲೋಕ್ ಕುಮಾರ್ ಅವರ ಮನೆಯ ಮೇಲೂ ಸಿಬಿಐ ದಾಳಿ ನಡೆಸಲಾಗಿತ್ತು. 3 ದಿನಗಳ ಕಾಲ ಅಲೋಕ್ ಕುಮಾರ್ ಅವರ ವಿಚಾರಣೆ ನಡೆಸಲಾಗಿತ್ತು.
ಮೂರು ದಿನಗಳಿಂದ ಕೆಎಸ್ಆರ್ಪಿ ಎಡಿಜಿಪಿ ಅಲೋಕ್ ಕುಮಾರ್ ಅವರ ವಿಚಾರಣೆ ನಡೆಸಿದ್ದ ಸಿಬಿಐ ಅಧಿಕಾರಿಗಳು ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ದಾಖಲೆಗಳನ್ನು ಕಲೆಹಾಕಿದ್ದರು.
ಅಲೋಕ್ ಕುಮಾರ್ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದಾಗ ಬಿಜೆಪಿ ಆಪರೇಷನ್ ಕಮಲ ನಡೆಸಿ ಕಾಂಗ್ರೆಸ್-ಜೆಡಿಎಸ್ ಶಾಸಕರನ್ನು ಸೆಳೆಯಲು ಪ್ರಯತ್ನಿಸಿತ್ತು.
ಈ ಹಿನ್ನೆಲೆಯಲ್ಲಿ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಸರ್ಕಾರ ಕೆಲವು ರಾಜಕಾರಣಿಗಳು, ಮಠಾಧೀಶರು, ರಾಜಕಾರಣಿಗಳ ಆಪ್ತರ ಫೋನ್ ಕದ್ದಾಲಿಕೆ ಮಾಡಿಸಿತ್ತು ಎಂಬ ಆರೋಪ ಕೇಳಿಬಂದಿತ್ತು.