ನಾಸಿಕ್ನಲ್ಲಿರುವ ಪತ್ನಿ, ಮಗು ಹಾಜರುಪಡಿಸಲು ಹೈಕೋರ್ಟ್ ಆದೇಶ
ಬೆಂಗಳೂರು,ಆ.4. ಬೆಂಗಳೂರಿನಿಂದ ಮಗುವನ್ನು ಕರೆದೊಯ್ದು ಮಹಾರಾಷ್ಟ್ರದ ನಾಸಿಕ್ನಲ್ಲಿ ನೆಲೆಸಿರುವ ಪತ್ನಿ ಹಾಗೂ ಆ ಮಗುವನ್ನು ಕೋರ್ಟ್ ಮುಂದೆ ಹಾಜರುಪಡಿಸುವಂತೆ ನ್ಯಾಯಾಲಯ ಆದೇಶಿಸಿದೆ.
ಪತಿ ಸಲ್ಲಿಸಿರುವ ಹೇಬಿಯಸ್ ಕಾರ್ಪಸ್ ಅರ್ಜಿ ಪರಿಗಣಿಸಿರುವ ಹೈಕೋರ್ಟ್, ನಾಸಿಕ್ ಪೊಲೀಸ್ ಆಯುಕ್ತರ ಮೂಲಕ ಆ.18ರಂದು ಮಗು ಮತ್ತು ತಾಯಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ರಾಜ್ಯ ಸರ್ಕಾರ ಮತ್ತು ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಿದೆ. ಪತಿ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾ.ಬಿ.ವೀರಪ್ಪ ಅವರಿದ್ದ ವಿಭಾಗೀಯಪೀಠ ಈ ಆದೇಶ ನೀಡಿದೆ.
ಪತ್ನಿ ತನ್ನ ಅಪ್ರಾಪ್ತ ಮಗುವನ್ನು ಅಕ್ರಮವಾಗಿ ಕರೆದೊಯ್ದು ನಾಸಿಕ್ನಲ್ಲಿ ನೆಲೆಸಿದ್ದಾರೆ ಎಂದು ಆರೋಪಿಸಿ ನಗರದ ಕರಿಯಮ್ಮನ ಅಗ್ರಹಾರ ಬಡಾವಣೆಯ ಪತಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು.
ಅರ್ಜಿಯನ್ನು ಈ ಹಿಂದೆ ವಿಚಾರಣೆ ನಡೆಸಿದ್ದ ಹೈಕೋರ್ಟ್, ಮಗುವನ್ನು ಹಾಜರುಪಡಿಸಲು ಸೂಕ್ತ ಕಾಲಾವಕಾಶ ನೀಡಿದ ಹೊರತಾಗಿಯೂ ತಾನು ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದೇನೆಂದು ಸುಳ್ಳು ಮಾಹಿತಿ ನೀಡಿ ಹೈಕೋರ್ಟ್ಗೆ ದಿಕ್ಕು ತಪ್ಪಿಸಿದ್ದಕ್ಕೆ ಪತ್ನಿ ವಿರುದ್ಧ ಬೇಸರ ವ್ಯಕ್ತಪಡಿಸಿತು.
ವಿಭಾಗೀಯಪೀಠ, ಸಾಕಷ್ಟು ಕಾಲಾವಕಾಶ ನೀಡಿದ್ದರೂ ನ್ಯಾಯಾಲಯ ಆದೇಶವನ್ನು ಪಾಲಿಸದೆ ಅರ್ಜಿದಾರನ ಪತ್ನಿ ಮಗುವನ್ನು ಕೋರ್ಟ್ಗೆ ಹಾಜರುಪಡಿಸಿಲ್ಲ. ಇನ್ನೂ ಜು.28ರಂದು ಪ್ರಮಾಣ ಪತ್ರ ಸಲ್ಲಿಸಿ, ತಾನು ಅನಾರೋಗ್ಯದಿಂದ ಬಳಲುತ್ತಿದ್ದೇನೆ. ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಹಾಸಿಗೆ ಹಿಡಿದಿದ್ದೇನೆ ಎಂದು ಸುಳ್ಳು ಮಾಹಿತಿ ನೀಡಿ ಪೊಲೀಸರು ಮಗುವನ್ನು ಕೋರ್ಟ್ ಹಾಜರುಪಡಿಸುವುದನ್ನು ತಪ್ಪಿಸಿದ್ದಾರೆ ಎಂದು ಅಸಮಾಧಾನ ಹೊರಹಾಕಿತು.
ಜೋಪಾನವಾಗಿ ಕರೆತರಲು ಸೂಚನೆ:
ಅಲ್ಲದೆ, ನ್ಯಾಯಾಲಯಕ್ಕೆ ಹಾಜರುಪಡಿಸುವ ಪ್ರಕ್ರಿಯೆಯಲ್ಲಿ ಮಗುವಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಪೊಲೀಸರು ಮಫ್ತಿಯಲ್ಲಿ ಹೋಗಬೇಕು. ಮಹಿಳಾ ಪೊಲೀಸ್ ಸಿಬ್ಬಂದಿ ಹಾಗೂ ಅಧಿಕಾರಿಗಳನ್ನು ಕರೆದೊಯ್ಯಬೇಕು. ಮಗುವಿನೊಂದಿಗೆ ಸೌಮ್ಯವಾಗಿ ಮಾತನಾಡಬೇಕು. ಮಗು ಮತ್ತು ತಾಯಿಯನ್ನು ಅಪರಾಧಿಗಳಂತೆ ಪರಿಗಣಿಸಬಾರದು ಎಂದು ಹೇಳಿದೆ.
ಮಗುವಿನ ಮನಸ್ಸು ಮೇಲೆ ಯಾವುದೇ ದುಷ್ಪರಿಣಾಮ ಬೀರದಂತೆ ನಡೆದುಕೊಂಡು ಪ್ರಶಾಂತ ಮನಸ್ಥಿತಿಯಲ್ಲಿ ಕೋರ್ಟ್ಗೆ ಕರೆತರಬೇಕು. ಈ ವೇಳೆ ಎಲ್ಲಾ ಆರೈಕೆ ಮಾಡಬೇಕು. ಬಹಳ ವಿಚಿತ್ರ ಪರಿಸ್ಥಿತಿಯಲ್ಲಿ ಮಗುವಿನ ಕ್ಷೇಮಾಭಿವೃದ್ಧಿ ದೃಷ್ಟಿಯಲ್ಲಿಕೊಟ್ಟುಕೊಂಡು ಈ ಆದೇಶ ಮಾಡಲಾಗುತ್ತದೆ ಎಂದು ನ್ಯಾಯಪೀಠ ಕಾಳಜಿ ವ್ಯಕ್ತಪಡಿಸಿದೆ.
ಕೋರ್ಟ್ ಗೆ ಹಾಜರಾಗಲು ಕಷ್ಟ:
ಅಲ್ಲದೆ, ಇಂದು ಅರ್ಜಿ ಮತ್ತೆ ವಿಚಾರಣೆ ಬಂದಾಗ ಕೋರ್ಟ್ ಸೂಚನೆ ನೀಡಿದ್ದರೂ ಮಗುವನ್ನು ಹಾಜಪಡಿಸಿಲ್ಲ. ಮೇಲಾಗಿ ಮಗುವಿನ ಶಾಲೆಯಲ್ಲಿ ಪೋಷಕರಿಗೆ ಸಭೆಯಿದ್ದು, ಅದಕ್ಕೆ ಹಾಜರಾಗಬೇಕಿದೆ. ಹಾಗಾಗಿ, ನ್ಯಾಯಾಲಯಕ್ಕೆ ಹಾಜರಾಗಲು ಕಷ್ಟವಿದೆ. ಹಾಗಾಗಿ ನ್ಯಾಯಾಲಯದಿಂದ 15 ದಿನ ಕಾಲಾವಕಾಶ ಪಡೆಯಬೇಕು ವಾಟ್ಸ್ ಆ್ಯಪ್ ಸಂದೇಶ ಕಳುಹಿಸಿದ್ದಾರೆ. ಈ ಸಂದೇಶವನ್ನು ಸರ್ಕಾರಿ ಅಭಿಯೋಜಕರು ತೇಜೇಸ್ ಕೋರ್ಟ್ ಮುಂದೆ ಪ್ರಸ್ತುತಪಡಿಸಿದ್ದಾರೆ.
ಅಂದರೆ ಅರ್ಜಿದಾರರ ಪತ್ನಿಗೆ ನ್ಯಾಯಾಲಯದ ಆದೇಶಕ್ಕಿಂತ ಶಾಲೆಯ ಪೋಷಕರ ಸಭೆಗೆ ಹಾಜರಾಗುವುದೇ ಮುಖ್ಯವಾಗಿದೆ. ಈ ಧೋರಣೆ ಸರಿಯಲ್ಲ. ಆದ್ದರಿಂದ ಪ್ರತಿವಾದಿಗಳಾದ ರಾಜ್ಯ ಗೃಹ ಇಲಾಖೆ,ನಗರ ಪೊಲೀಸ್ ಆಯುಕ್ತರು, ಮಾರತಹಳ್ಳಿ ಪೊಲೀಸ್ ಠಾಣಾ ಇನ್ಸ್ಪೆಕ್ಟರ್ ಮತ್ತು ವೈಟ್ ಫೀಲ್ಡ್ ವಿಭಾಗದ ಆಯುಕ್ತರು ನಾಸಿಕ್ ಪೊಲೀಸ್ ಆಯುಕ್ತರ ಮೂಲಕ ಮಗು ಮತ್ತು ತಾಯಿಯನ್ನು ಆ.೧೮ರಂದು ಕೋರ್ಟ್ ಹಾಜರುಪಡಿಸಬೇಕು ಎಂದು ನಿರ್ದೇಶಿಸಿದ್ದಾರೆ.