ಉದ್ಯಾನಕ್ಕೆ ಸಾಕು ಪ್ರಾಣಿಗಳ ಜೊತೆ ಬರುವವರು ಮಲ ಚೀಲವನ್ನೂ ತರಬೇಕು; ನೋಟೀಸ್
ಬೆಂಗಳೂರು, ಸೆಪ್ಟೆಂಬರ್ 30: ಸಾರ್ವಜನಿಕ ಉದ್ಯಾನಗಳಿಗೆ ಸಾಕು ಪ್ರಾಣಿಗಳನ್ನು ಕರೆದುಕೊಂಡು ಬರುವವರು ತಮ್ಮ ಜೊತೆ ಮಲ ಚೀಲ ತರಬೇಕು ಎಂಬ ನಿಯಮವನ್ನು ಕಡ್ಡಾಯಗೊಳಿಸಲು ಬಿಬಿಎಂಪಿಗೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಮನವಿ ಸಂಬಂಧ ಕರ್ನಾಟಕ ಹೈಕೋರ್ಟ್ ಗುರುವಾರ ಬಿಬಿಎಂಪಿ ಹಾಗೂ ರಾಜ್ಯ ಸರ್ಕಾರಕ್ಕೆ ನೋಟೀಸ್ ನೀಡಿದೆ.
ತಮ್ಮ ಸಾಕು ಪ್ರಾಣಿಗಳೊಂದಿಗೆ, ಅದರಲ್ಲೂ ಸಾಕು ನಾಯಿ ಜೊತೆಗೆ ಸಾರ್ವಜನಿಕ ಉದ್ಯಾನಗಳಿಗೆ ಬರುವ ಅವುಗಳ ಮಾಲೀಕರು ತಮ್ಮೊಂದಿಗೆ ಜೈವಿಕ ವಿಘಟನೀಯ ಮಲ ಚೀಲ (Biodegradable poop bag), ಅಂದರೆ ಸುಲಭವಾಗಿ ಮಣ್ಣಿನಲ್ಲಿ ಕರಗಬಲ್ಲ ಚೀಲವನ್ನು ತರಬೇಕು. ಈ ನಿಯಮವನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಡ್ಡಾಯಗೊಳಿಸಬೇಕು. ಈ ವಿಷಯವಾಗಿ ಹೈಕೋರ್ಟ್ ಬಿಬಿಎಂಪಿಗೆ ನಿರ್ದೇಶನ ನೀಡಬೇಕು ಎಂದು ಕೋರಿದ್ದ ಮನವಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿಗೆ ಕರ್ನಾಟಕ ಹೈಕೋರ್ಟ್ ನೋಟೀಸ್ ಜಾರಿ ಮಾಡಿದೆ.
ನಾಯಿ ಕಂಡರೆ ನಿಮಗೆ ಪ್ರೀತಿಯಾ? ಹಾಗಿದ್ದಲ್ಲಿ ತಪ್ಪದೇ ಇದನ್ನು ನೀವು ತಿಳಿದಿರಬೇಕು!
ಪ್ರಾಣಿಗಳ ಪರ ಕಾರ್ಯನಿರ್ವಹಿಸುತ್ತಿರುವ ಸರ್ಕಾರೇತರ ಸಂಸ್ಥೆ ಕಂಪ್ಯಾಷನ್ ಅನ್ಲಿಮಿಟೆಡ್ ಪ್ಲಸ್ ಆ್ಯಕ್ಷನ್ (ಕ್ಯೂಪಾ) ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿ ವಿಚಾರಣೆಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಹಾಗೂ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ನೇತೃತ್ವದ ವಿಭಾಗೀಯ ಪೀಠ ನಡೆಸಿದೆ.
ಅರ್ಜಿದಾರರ ಪರ ವಕೀಲ ಅಲ್ವಿನ್ ಸೆಬಾಸ್ಟಿಯನ್, 'ಪ್ರಸ್ತುತ ಸಾರ್ವಜನಿಕ ಸ್ಥಳ ಅಥವಾ ಉದ್ಯಾನ ಪ್ರವೇಶಿಸುವ ಸಂಬಂಧ ಬಿಬಿಎಂಪಿಯಿಂದ ಕಡ್ಡಾಯವಾದ ಯಾವುದೇ ನಿಯಮ ಅಥವಾ ಪೂರ್ವ ಷರತ್ತುಗಳು ಇಲ್ಲ. ದಂಡ ವಿಧಿಸಲು ನಿರ್ದಿಷ್ಟ ನಿಯಮ ಕೂಡ ಇಲ್ಲದಿರುವುದರಿಂದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಿನಿಂದ ಪಾಲಿಸುವ ಕುರಿತು ನಿಗಾ ವಹಿಸಲು ಸಾಧ್ಯವಾಗುತ್ತಿಲ್ಲ' ಎಂದು ವಾದಿಸಿದ್ದಾರೆ. ಹೀಗಾಗಿ ನ್ಯಾಯಾಲಯ ನಿರ್ದೇಶನ ನೀಡಬೇಕೆಂದು ಕೋರಿದ್ದಾರೆ.
ಈ ವಾದವನ್ನು ಆಲಿಸಿದ ನ್ಯಾಯಪೀಠವು ಪ್ರತಿವಾದಿಗಳಿಗೆ ನೋಟೀಸ್ ಜಾರಿ ಮಾಡಿ ನವೆಂಬರ್ 8ಕ್ಕೆ ವಿಚಾರಣೆಯನ್ನು ಮುಂದೂಡಿದೆ.
ಹುಷಾರ್..! ನಿಮ್ಮ ಮನೆ ಬೆಕ್ಕು, ನಾಯಿಗೂ ಅಟ್ಯಾಕ್ ಆಗುತ್ತೆ ಡೆಡ್ಲಿ ಕೊರೊನಾ..!
ಸಾಮಾನ್ಯವಾಗಿ ಸಾರ್ವಜನಿಕ ಉದ್ಯಾನಗಳಿಗೆ ಹಲವರು ತಮ್ಮ ಸಾಕು ಪ್ರಾಣಿಗಳೊಂದಿಗೆ, ಹೆಚ್ಚಾಗಿ ನಾಯಿಯನ್ನು ಕರೆದುಕೊಂಡು ಬರುತ್ತಾರೆ. ಆದರೆ ಅವುಗಳು ಉದ್ಯಾನದಲ್ಲೇ ಮಲ ಮೂತ್ರ ವಿಸರ್ಜನೆ ಮಾಡುತ್ತವೆ. ಇದರಿಂದ ಉದ್ಯಾನದಲ್ಲಿ ವಾಯುವಿಹಾರಕ್ಕೆ ಬರುವವರಿಗೆ ಕಿರಿಕಿರಿ, ಸಮಸ್ಯೆ ಉಂಟಾಗುತ್ತಿದೆ. ಆದರೆ ನಾಯಿಗಳಿಗೂ ವಾಯುವಿಹಾರದ ಅವಶ್ಯಕತೆಯಿದ್ದು, ಇದನ್ನು ತಪ್ಪಿಸಲು ಸಾಧ್ಯವಿಲ್ಲ. ಹೀಗಾಗಿ ಈ ಸಮಸ್ಯೆ ತಪ್ಪಿಸಲು ಪಾರ್ಕ್ಗೆ ಪ್ರಾಣಿಗಳೊಂದಿಗೆ ಬರುವವರು ಮಲಚೀಲ ತರುವುದು ಒಳಿತು. ಜೊತೆಗೆ ಎಲ್ಲರಿಗೂ ಶುದ್ಧ ವಾತಾವರಣ ಕಲ್ಪಿಸುವ ಜವಾಬ್ದಾರಿ ಪಾಲಿಕೆಯದ್ದಾಗಿದೆ ಎಂದು ವಕೀಲರು ವಾದಿಸಿದ್ದಾರೆ.
ಇದಕ್ಕೆಲ್ಲ ಪರಿಹಾರವಾಗಿ, ತಮ್ಮ ಸಾಕು ಪ್ರಾಣಿಗಳ ಜೊತೆಗೆ ಬರುವ ಅವುಗಳ ಮಾಲೀಕರು ತಮ್ಮ ಜೊತೆಗೆ ಪ್ರಾಣಿಗಳ ಮಲಮೂತ್ರ ಸಂಗ್ರಹಿಸುವ ಬಯೋಡೀಗ್ರೇಡೆಬಲ್ ಪೂಪ್ ಬ್ಯಾಗ್ ಅನ್ನು ತಮ್ಮ ಜೊತೆ ತರುವುದನ್ನು ಬಿಬಿಎಂಪಿ ಕಡ್ಡಾಯಗೊಳಿಸಬೇಕು ಎಂದು ಮನವಿ ಮಾಡಲಾಗಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಕಸ ಬಿಸಾಡಿದರೆ ದಂಡ ಹಾಕುವ ಅಧಿಕಾರ ಬಿಬಿಎಂಪಿಗೆ ಇದೆ. ಹಾಗೆಯೇ ಸಾಕು ಪ್ರಾಣಿಗಳು ಸಾರ್ವಜನಿಕ ಸ್ಥಳದಲ್ಲಿ ಮಾಡುವ ಮಲ ಮೂತ್ರವನ್ನು ಶುದ್ಧೀಕರಿಸದ ಅವುಗಳ ಮಾಲೀಕರಿಗೆ ಕೂಡ ದಂಡ ಹಾಕಬೇಕಿದೆ.
Recommended Video
ಇದಲ್ಲದೇ, ಸಾಕು ಪ್ರಾಣಿಗಳ ಮಲವನ್ನು ಬಯೋಡೀಗ್ರೇಡೆಬಲ್ ಚೀಲಗಳಲ್ಲಿ ವಿಲೇವಾರಿ ಮಾಡಲು ಪ್ರತ್ಯೇಕ ತೊಟ್ಟಿಗಳನ್ನು ಉದ್ಯಾನಗಳಲ್ಲಿ ನಿರ್ಮಿಸಬೇಕಿದೆ. ಅವುಗಳನ್ನು ಆಗಾಗ್ಗೆ ಸ್ವಚ್ಛಗೊಳಿಸುವ ಜವಾಬ್ದಾರಿಯನ್ನು ಬಿಬಿಎಂಪಿ ನಿರ್ವಹಿಸಬೇಕಿದೆ ಎಂದು ಮನವಿ ಮಾಡಲಾಗಿದೆ.
ಘನತ್ಯಾಜ್ಯ ನಿರ್ವಹಣಾ ಬೈಲಾ 2020 ಹಾಗೂ 2020 ಆಗಸ್ಟ್ 24ರ ರಾಜ್ಯ ಸರ್ಕಾರದ ಸುತ್ತೋಲೆಯನ್ನು ಜಾರಿಗೆ ತರುವಂತೆ ಬಿಬಿಎಂಪಿಗೆ ನಿರ್ದೇಶನ ನೀಡಬೇಕು. ಮಲಚೀಲಗಳನ್ನು ತಮ್ಮೊಂದಿಗೆ ತಂದರೆ ಮಾತ್ರ ಪ್ರಾಣಿಗಳಿಗೆ ಉದ್ಯಾನಕ್ಕೆ ಪ್ರವೇಶ ನೀಡಲು ಅನುಮತಿ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ. ಈ ಎಲ್ಲಾ ವಿಷಯಗಳ ಕುರಿತು ಬಿಬಿಎಂಪಿಗೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಲಾಗಿದೆ.