ಕಾಡಿಗೆ ಅಟ್ಟುವ ವೇಳೆ ಆನೆ ತುಳಿದು ತಿರುವರಂಗ ಗ್ರಾಮದ ವ್ಯಕ್ತಿ ಸಾವು
ಹೊಸಕೋಟೆ (ಬೆಂಗಳೂರು ಗ್ರಾಮಾಂತರ), ಅಗಸ್ಟ್ 14: ಕಾಡಿನಿಂದ ನಾಡಿಗೆ ಬಂದ ಆನೆಗಳನ್ನು ಅರಣ್ಯ ಸಿಬ್ಬಂದಿ ಕಾಡಿಗೆ ಅಟ್ಟುವ ಸಂದರ್ಭದಲ್ಲಿ ವ್ಯಕ್ತಿಯ ಮೇಲೆ ದಾಳಿ ನಡೆಸಿ, ತುಳಿದು ಸಾಯಿಸಿರುವಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆಯ ತಿರುವರಂಗ ಗ್ರಾಮದಲ್ಲಿ ನಡೆದಿದೆ.
ಕಳೆದ ಎರಡು ತಿಂಗಳಿನಿಂದ ಕರ್ನಾಟಕ- ತಮಿಳುನಾಡಿನ ಗಡಿ ಭಾಗದ ಸುತ್ತಮುತ್ತಲಿನ ಗ್ರಾಮಗಳ ಕಡೆ ಓಡಾಡಿಕೊಂಡಿದ್ದ ಆನೆಗಳು ಬುಧವಾರ ಮುಂಜಾನೆ ಕರ್ನಾಟಕಕ್ಕೆ ಪ್ರವೇಶಿಸಿದ್ದವು. ಸರ್ಜಾಪುರ, ಮುಗಳೂರು ಮಾರ್ಗವಾಗಿ ಕಾಡಿಗೆ ಅಟ್ಟುವ ಸಂದರ್ಭದಲ್ಲಿ ತಿರುವರಂಗ ಗ್ರಾಮದ ಬಳಿ ಆನೆಗಳನ್ನು ನೋಡಲು ಬಂದ ಅಣ್ಣಯ್ಯಪ್ಪ (40) ಎಂಬಾತನ ಮೇಲೆ ದಾಳಿ ನಡೆಸಿ, ತುಳಿದು ಸಾಯಿಸಿದೆ.
ಕಾಡಂಚಿನ ಗ್ರಾಮಗಳಿಗೆ ಲಗ್ಗೆಯಿಡುತ್ತಿರುವ ಕಾಡಾನೆಗಳು, ಭಯದಲ್ಲಿ ಜನರು!
ಇನ್ನು ಈ ಎರಡು ಆನೆಗಳು ತಮಿಳುನಾಡಿನ ಅರಣ್ಯದ ಆನೆಗಳಾಗಿದ್ದು, ಈಗಾಗಲೇ ತಮಿಳುನಾಡಿನ ಏಳು ಜನರನ್ನು ಬಲಿ ತೆಗೆದುಕೊಂಡಿವೆ. ಈ ಆನೆಗಳನ್ನು ಬುಧವಾರ ಅರಣ್ಯ ಸಿಬ್ಬಂದಿ ಕಾಡಿಗೆ ಓಡಿಸಲು ಬೆಳಗ್ಗೆಯಿಂದ ಪ್ರಯತ್ನ ಮಾಡುತ್ತಿರುವ ಸಂದರ್ಭದಲ್ಲಿ ಗ್ರಾಮದ ಜನರು ಆನೆಗಳನ್ನು ನೋಡಲು ತಂಡೋಪತಂಡವಾಗಿ ಆಗಮಿಸುತ್ತಿದ್ದರು.
ಅರಣ್ಯ ಸಿಬ್ಬಂದಿ ಎಷ್ಟೋ ಬಾರಿ ಕೇಳಿಕೊಂಡರೂ ಮಾತು ಕೇಳದ ಗ್ರಾಮದ ಜನರು ಹಿಂಬಾಲಿಸಿದ್ದರಿಂದ ಆನೆಗಳು ಜನರಿದ್ದ ಕಡೆ ದಾಳಿ ನಡೆಸಿ, ಅಣ್ಣಯ್ಯಪ್ಪ ಎಂಬ ವ್ಯಕ್ತಿಯನ್ನು ಬಲಿ ತೆಗೆದುಕೊಂಡಿದೆ. ಹೊಸಕೋಟೆ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ, ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಈ ಭಾಗದಲ್ಲಿ ಆನೆ- ಮಾನವ ಸಂಘರ್ಷ ಇದ್ದು, ಈ ರೀತಿ ದಾಳಿಗಳು ಆಗಾಗ ವರದಿ ಆಗುತ್ತಿವೆ. ಅರಣ್ಯ ಇಲಾಖೆಯಿಂದ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ. ಆನೆಗಳು ಪದೇಪದೇ ಸಂಚರಿಸುವ ಮಾರ್ಗಗಳನ್ನು ಗುರುತು ಮಾಡಿ, ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವ ಅಗತ್ಯ ಇದೆ.