ಬೆಂಗಳೂರು ಪೆರಿಫೆರಲ್ ರಸ್ತೆ ಟೆಂಡರ್ ರದ್ದು: ಎಎಪಿ ಆರೋಪವೇನು?
ಬೆಂಗಳೂರು ಜೂ.22: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು 74 ಕಿ.ಮೀ. ಉದ್ದದ ಪೆರಿಫೆರಲ್ ಹೊರ ವರ್ತುಲ ರಸ್ತೆಯ ಗುತ್ತಿಗೆ ಪ್ರಕ್ರಿಯೆ ರದ್ದುಪಡಿಸಿದೆ. ಈ ಮೂಲಕ ಬಿಡಿಎ ತನ್ನ ಆಪ್ತರಿಗೆ ಟೆಂಡರ್ ನೀಡಿ ಭಾರೀ ಪ್ರಮಾಣದಲ್ಲಿ ಅಕ್ರಮ ಎಸಗುವ ದುರುದ್ದೇಶ ಹೊಂದಿದೆ ಎಂದು ಎಎಪಿ ಆರೋಪಿಸಿದೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಎಪಿ ಬೆಂಗಳೂರು ನಗರಾಧ್ಯಕ್ಷ ಮೋಹನ್ ದಾಸರಿ, "ಬೆಳೆಯುತ್ತಿರುವ ಬೆಂಗಳೂರಿನಲ್ಲಿ ವಾಹನಗಳ ಓಡಾಟ ಸಂಖ್ಯೆಯು ದಿನೇ ದಿನೇ ಹೆಚ್ಚುತ್ತಿದೆ. ಈ ಸಂಚಾದ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ತುಮಕೂರು ರಸ್ತೆಯಿಂದ ಹೊಸೂರು ರಸ್ತೆ ಸಂಪರ್ಕಿಸುವ 74 ಕಿ. ಮೀ. ಉದ್ದದ ಪೆರಿಫೆರಲ್ ಹೊರ ವರ್ತುಲ ರಸ್ತೆ ನಿರ್ಮಾಣಕ್ಕಾಗಿ ಬಿಡಿಎ ಮೊದಲು ಟೆಂಡರ್ ಆಹ್ವಾನಿಸಿತ್ತು" ಎಂದರು.
"ವಿವಿಧ ಕಂಪನಿಗಳು ಪಾಲ್ಗೊಳ್ಳುವ ಮೊದಲೇ ಟೆಂಡರ್ ಪ್ರಕ್ರಿಯೆಯನ್ನು ರದ್ದುಗೊಳಿಸಿರುವುದು ಅನುಮಾನಗಳಿಗೆ ಕಾರಣವಾಗಿದೆ. ರಿಂಗ್ ರಸ್ತೆ ಕಾಮಗಾರಿಗಾಗಿ ಒಟ್ಟು 2,560 ಎಕರೆ ಜಮೀನನ್ನು ಭೂಸ್ವಾಧೀನ ಮಾಡಿಕೊಳ್ಳಬೇಕಿದೆ. ಆದರೆ ರಾಜ್ಯ ಸರ್ಕಾರ 15 ವರ್ಷಗಳ ಹಿಂದೆಯೇ 1,180 ಎಕರೆ ಜಮೀನನ್ನು ಭೂಸ್ವಾಧೀನ ಪಡಿಸಿಕೊಂಡು ಅಂತಿಮ ಅಧಿಸೂಚನೆ ಹೊರಡಿಸಿತ್ತು. ಅದರ ಹೊರತು ಕಾಮಗಾರಿಗೆ ಅಗತ್ಯವಿರುವ ಬಾಕಿ ಭೂಮಿಯನ್ನು ಬಿಡಿಎ ಸ್ವಾಧೀನಪಡಿಸಿಕೊಂಡು ಅಂತಿಮ ಅಧಿಸೂಚನೆ ಪ್ರಕಟಿಸಿಲ್ಲ" ಎಂದರು.
ಕ್ರಮ ಕೈಗೊಳ್ಳದ ಸರ್ಕಾರ; "ರಾಜ್ಯದಲ್ಲಿ ಅಧಿಕಾರ ಅನುಭವಿಸಿದ ಜೆಡಿಎಸ್, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಈ ಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣವನ್ನು ದಂಧೆಯನ್ನಾಗಿ ಮಾಡಿಕೊಂಡಿವೆ. ಸುಮಾರು 15 ವರ್ಷದ ಹಿಂದಿನ ಈ ರಸ್ತೆ ನಿರ್ಮಾಣ ಯೋಜನೆ ಈವರೆಗೆ ಸಣ್ಣ ಪ್ರಮಾಣದಲ್ಲಿಯೂ ಪ್ರಗತಿ ಕಂಡಿಲ್ಲ. ಎಂದೋ ಪೂರ್ಣಗೊಳ್ಳಬೇಕಿದ್ದ ಯೋಜನೆಯು ಇನ್ನೂ ಆರಂಭವೇ ಆಗಿಲ್ಲ" ಎಂದು ದೂರಿದರು.
"ಇತ್ತ ಯೋಜನೆಗಾಗಿ ಸ್ವಾಧೀನ ಪಡಿಸಿಕೊಳ್ಳುವ ಜಮೀನಿನ ಮಾಲೀಕರಿಗೆ ಪರಿಹಾರ ನೀಡುವ ಸಂಬಂಧ ನಿಯಮಾವಳಿ ರೂಪಿಸುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಈ ಹಿಂದೆಯೆ ಬಿಡಿಎ ಪತ್ರ ಬರೆದಿತ್ತು. ಆದರೆ ಈವರೆಗೂ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೇ ನಿರ್ಲಕ್ಷಿಸುತ್ತಿದೆ" ಎಂದು ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದರು.
ಸೂಕ್ತ ಪರಿಹಾರ ನೀಡಲು ಮೀನಮೇಷ; "ಇನ್ನೇನು ಟೆಂಡರ್ ಪ್ರಕ್ರಿಯೆ ನಡೆದು ರಸ್ತೆ ಕಾಮಗಾರಿ ಆರಂಭವಾಗಲಿದೆ ಎಂದು ಭಾವಿಸಿದ್ದವರಿಗೆ ಇದೀಗ ಆ ನಿರೀಕ್ಷೆಯು ಹುಸಿಯಾಗಿದೆ. ಕರೆದಿದ್ದ ಟೆಂಡರ್ ಪ್ರಕ್ರಿಯೆಯನ್ನು ರದ್ದುಗೊಳಿಸಿದೆ. ಭೂಮಿ ಸ್ವಾಧೀನ ಪಡೆದ ಸರ್ಕಾರ ಮಾಲೀಕರಿಗೆ ಮಾರುಕಟ್ಟೆ ಬೆಲೆಗಿಂತ ಹೆಚ್ಚಿನ ಪರಿಹಾರ ನೀಡಬೇಕಿದೆ. ಆದರೆ ಅದಕ್ಕೂ ಮೀನಮೀಷ ಎಣಿಸುತ್ತಿದೆ. 15 ವರ್ಷಗಳ ಹಿಂದೆ 3,000 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಬೇಕಿದ್ದ ಯೋಜನೆ ಈಗ 20,000 ಕೋಟಿ ರೂ. ಹಣ ಭರಿಸಿದರೂ ಯೋಜನೆ ಪೂರ್ಣಗೊಳ್ಳುವುದು ಅನುಮಾನ" ಎಂದು ಯೋಜನೆ ಬಗ್ಗೆ ವಿವರಣೆ ನೀಡಿದರು.
"ರಸ್ತೆ ನಿರ್ಮಾಣದ ಗುತ್ತಿಗೆ ಪಡೆಯುವ ಉದ್ಯಮಿಗಳಿಗೆ ಲಾಭ ಮಾಡಿಕೊಟ್ಟು ಕಮೀಷನ್ ಪಡೆಯುವುದೊಂದೇ ಸರ್ಕಾರದ ಗುರಿಯಾಗಿದ್ದು, ಜಮೀನು ನೀಡುವ ರೈತರ ಹಿತ ಮುಖ್ಯವಾಗಿಲ್ಲ. ರೈತರಿಗೆ ಶೀಘ್ರವೇ ಉತ್ತಮ ಪರಿಹಾರದ ಮೊತ್ತ ಪಾವತಿಸಬೇಕು. ಇಲ್ಲದಿದ್ದರೆ ಆಮ್ ಆದ್ಮಿ ಪಕ್ಷ ಸಂತ್ರಸ್ತ ರೈತರ ಪರವಾಗಿ ನಿಲ್ಲಲಿದೆ" ಎಂದು ಎಚ್ಚರಿಸಿದರು.
Recommended Video