ಬೆಂಗಳೂರಿನಲ್ಲಿ ರಸ್ತೆ ಗುಂಡಿಗೆ ಬಿದ್ದರೂ ದುಡ್ಡೇ ದುಡ್ಡು!
ಬೆಂಗಳೂರು, ಜನವರಿ.25: ಸಿಲಿಕಾನ್ ಸಿಟಿಯಲ್ಲಿ ರಸ್ತೆ ಹಾಗೂ ಪಾಥೋಲ್ ಗಳ ಹಾವಳಿ ಮೊದಲಿನಿಂದಲೂ ಇದ್ದೇ ಇದೆ. ಇನ್ಮುಂದೆ ನಗರದಲ್ಲಿ ರಸ್ತೆ ಗುಂಡಿಗೆ ಬಿದ್ದು ಗಾಯಗೊಂಡವರಿಗೆ ಬೆಂಗಳೂರು ಬೃಹತ್ ಮಹಾನಗರ ಪಾಲಿಕೆ (ಬಿಬಿಎಂಪಿ)ಯೇ ಪರಿಹಾರವನ್ನು ನೀಡಲಿದೆ.
ಬೆಂಗಳೂರಿನಲ್ಲಿ ರಸ್ತೆ ಹಾಗೂ ಗುಂಡಿಗಳ ನಿರ್ವಹಣೆಯಲ್ಲಿ ಬಿಬಿಎಂಪಿ ನಿರ್ಲಕ್ಷ್ಯ ತೋರುತ್ತಿರುವ ಬಗ್ಗೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಕೆಯಾಗಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ನಗರದಲ್ಲಿ ರಸ್ತೆ ಗುಂಡಿಗೆ ಬೀಳುವ ಪ್ರಕರಣಗಳು ಹೆಚ್ಚಾಗುತ್ತಿವೆ. ಹೀಗೆ ಬಿದ್ದು ಗಾಯಗೊಂಡ ಪ್ರಯಾಣಿಕರಿಗೆ ಬಿಬಿಎಂಪಿಯೇ ಪರಿಹಾರ ನೀಡಬೇಕು ಎಂದು ಆದೇಶ ಹೊರಡಿಸಿತ್ತು.
ರಸ್ತೆಗುಂಡಿ ಮುಚ್ಚಲು ಬಿಬಿಎಂಪಿ ಬಳಿ ಹೊಸ ಬಗೆಯ ಯಂತ್ರ
ಹೈಕೋರ್ಟ್ ನೀಡಿದ್ದ ಆದೇಶವನ್ನು ಪಾಲಿಸಲು ಬಿಬಿಎಂಪಿ ಇದೀಗ ಸಜ್ಜಾಗಿದೆ. ಸಿಲಿಕಾನ್ ಸಿಟಿಯಲ್ಲಿ ಓಡಾಡುವ ಪ್ರಯಾಣಿಕರು ರಸ್ತೆ ಹಾಗೂ ಗುಂಡಿಗಳಲ್ಲಿ ಬಿದ್ದು ಗಾಯಗೊಂಡರೆ ಅಂಥವರ ಪಾಲಿಕೆಯೇ ಪರಿಹಾರ ನೀಡಲಿದೆ. ಆದರೆ, ಅದಕ್ಕಾಗಿ ಕೆಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ.
ಸಿಸಿ ಕ್ಯಾಮರಾ ದೃಶ್ಯ ಅಥವಾ ನೇರಸಾಕ್ಷಿ
ಬೆಂಗಳೂರಿನಲ್ಲಿ ರಸ್ತೆ ಗುಂಡಿಗೆ ಬಿದ್ದ ಪ್ರಯಾಣಿಕರು ಅದಕ್ಕೆ ಪೂರಕವಾದ ಸಾಕ್ಷಿಯನ್ನು ಬಿಬಿಎಂಪಿ ಅಧಿಕಾರಿಗಳಿಗೆ ಸಲ್ಲಿಸಬೇಕು. ಅಪಘಾತಕ್ಕೆ ಸಂಬಂಧಿಸಿದಂತೆ ನೇರಸಾಕ್ಷಿ ಅಥವಾ ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ದಾಖಲೆಗಳ ಜೊತೆಗೆ ಬಿಬಿಎಂಪಿಗೆ ನೀಡಬೇಕು. ಹಾಗಿದ್ದಲ್ಲಿ ಮಾತ್ರ ಅಪಘಾತದಲ್ಲಿ ಗಾಯಗೊಂಡವರು ಅಥವಾ ಮೃತಪಟ್ಟವರಿಗೆ ಪರಿಹಾರ ನೀಡಲಾಗುತ್ತದೆ.
ಪರಿಹಾರ ಬೇಕೇ, ವೈದ್ಯಕೀಯ ಪ್ರಮಾಣಪತ್ರ ನೀಡಿ
ಬೆಂಗಳೂರಿನಲ್ಲಿ ಅಪಘಾತ ಸಂಭವಿಸಿದ್ದಕ್ಕೆ ಸಿಸಿ ಕ್ಯಾಮರಾ ದೃಶ್ಯಾವಳಿಗಳು ಆಯ್ತು. ಇದರ ಜೊತೆಗೆ ವ್ಯಕ್ತಿಯು ಗಾಯಗೊಂಡ ಬಗ್ಗೆ ವೈದ್ಯಕೀಯ ಪ್ರಮಾಣಪತ್ರ ನೀಡಬೇಕು. ಇಲ್ಲವೇ ವಾಹನಗಳಿಗೆ ಧಕ್ಕೆ ಆಗಿದ್ದಲ್ಲಿ ಆಟೋಮೊಬೈಲ್ ಸರ್ವಿಸ್ ಸೆಂಟರ್ ನಿಂದ ಪ್ರಮಾಣಪತ್ರವನ್ನು ನೀಡಬೇಕಾಗುತ್ತದೆ. ಇದನ್ನು ಪರಿಶೀಲಿಸಿದ ನಂತರವೇ ಬಿಬಿಎಂಪಿಯು ಪರಿಹಾರವನ್ನು ನೀಡುತ್ತದೆ.
ಪಾಲಿಕೆ ಅಧಿಕಾರಿಗಳಿಗೆ ರಸ್ತೆ ನಿರ್ವಹಣೆ ಬಗ್ಗೆ ಸೂಚನೆ
ಇನ್ನು, ಬೆಂಗಳೂರಿನ ಆಯಾ ವಾರ್ಡ್ ಗಳಲ್ಲಿ ರಸ್ತೆ ಹಾಗೂ ಫುತ್ ಪಾತ್ ಗಳನ್ನು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡುವಂತೆ ಅಧಿಕಾರಿಗಳಿಗೆ ಬಿಬಿಎಂಪಿ ಖಡಕ್ ಸಂದೇಶ ರವಾನಿಸಿದೆ. ಬಿಬಿಎಂಪಿಯ ಮುಖ್ಯ ಇಂಜಿನಿಯರ್, ಕಾರ್ಯನಿರ್ವಾಹಕ ಇಂಜಿನಿಯರ್, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸೇರಿದಂತೆ ವಾರ್ಡ್ ಇಂಜಿನಿಯರ್ಸ್ ಗೆ ಸೂಚನೆ ನೀಡಲಾಗಿದೆ.
ಬೆಂಗಳೂರು ಪಾಲಿಕೆಗೆ ಬಿಸಿ ಮುಟ್ಟಿಸಿದ್ದ ಹೈಕೋರ್ಟ್
ಕಳೆದ ಜುಲೈ.31, 2019ರಲ್ಲಿ ಬೆಂಗಳೂರಿನ ರಸ್ತೆ-ಗುಂಡಿಗಳ ನಿರ್ವಹಣೆಗೆ ಸಂಬಂಧಿಸಿದಂತೆ ಬಿಬಿಎಂಪಿಗೆ ಹೈಕೋರ್ಟ್ ತರಾಟೆ ತೆಗದುಕೊಂಡಿತ್ತು. ನಗರದಲ್ಲಿ ಸರಿಯಾದ ರೀತಿ ರಸ್ತೆ ಹಾಗೂ ಗುಂಡಿಗಳನ್ನು ನಿರ್ವಹಣೆ ಮಾಡಬೇಕು. ಜೊತೆಗೆ ರಸ್ತೆ ಗುಂಡಿಗೆ ಬಿದ್ದು ಗಾಯಗೊಂಡವರಿಗೆ ಬಿಬಿಎಂಪಿಯೇ ಪರಿಹಾರ ನೀಡಬೇಕು ಎಂದು ಹೈಕೋರ್ಟ್ ಆದೇಶ ಹೊರಡಿಸಿತ್ತು.