ಬೆಂಗಳೂರಿಗೆ 2027ಕ್ಕೆ ಕುಡಿಯುವ ನೀರಿನ ಸಮಸ್ಯೆ: ಜಲಮಂಡಳಿ ಪ್ಲಾನ್ ಏನು?
ಬೆಂಗಳೂರು, ಮೇ18 : ಬೆಂಗಳೂರು ಸಿಟಿ ದಿನದಿಂದ ದಿನಕ್ಕೆ ವೇಗವಾಗಿ ಬೆಳೆಯುತ್ತಿದೆ. ಬೆಂಗಳೂರಿನ ವೇಗಕ್ಕೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದು ಕಠಿಣವಾಗುತ್ತಿದ್ದರೂ ಜನಸಂಖ್ಯೆ ಮಾತ್ರ ವಿಪರೀತ ಏರಿಕೆ ಕಾಣುತ್ತಿದೆ. ಜನ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಕುಡಿಯವ ನೀರಿನ ಅಭಾವವು ಎದುರಾಗುತ್ತದೆ. ಸಿಲಿಕಾನ್ ಸಿಟಿಗೆ 2027 ಕ್ಕೆ ಕುಡಿಯವ ನೀರಿಗೆ ಕಂಟಕ ಎದುರಾಗುತ್ತಾ..? ಬೆಂಗಳೂರು ಜಲಮಂಡಳಿ ಯಾವ ಯೋಜನೆ ಹಾಕಿಕೊಂಡಿದ್ದಾರೆ ಎಂಬುದರ ವಿವರ ಇಲ್ಲಿದೆ.
ಜನರ ಜೀವನಾಡಿ ನೀರು. ಬೆಂಗಳೂರಿನ ಕುಡಿಯುವ ನೀರಿನ ಮೂಲ ಕಾವೇರಿ. ಕಾವೇರಿಯ ನೀರು 2027-28ನೇ ವರ್ಷಕ್ಕೆ ಸಂಪೂರ್ಣವಾಗಿ ಬೆಂಗಳೂರಿಗೆ ಒದಗಿಸಲು ಅಸಾಧ್ಯ. ಯಾಕಂದರೆ ಬೆಂಗಳೂರಿನ ಜನಸಂಖ್ಯೆ ಸದ್ಯಕ್ಕೆ 1.5 ಕೋಟಿಯಾಗಿದೆ. ಬೆಂಗಳೂರು ಬೆಳೆಯುತ್ತಿರುವುದರಿಂದಾಗಿ ಸಂಪೂರ್ಣ ಬೆಂಗಳೂರಿಗೆ ಕಾವೇರಿ ನೀರು ಪೂರೈಕೆ ಕಷ್ಟವಾಗಲಿದೆ.
ಬೆಂಗಳೂರು ಜನರಿಗೆ ನೀರು ಪೂರೈಕೆ ಕಷ್ಟ ಎಂಬ ಕಾರಣಕ್ಕೆ ದಿನ ಬಿಟ್ಟು ದಿನ ನೀರನ್ನು ಮನೆಗಳಿಗೆ ಪೂರೈಸಲಾಗುತ್ತಿದೆ. ಇಷ್ಟಾಗಿಯೂ ಕಾವೇರಿ ನೀರಿನ ಬವಣೆ ಹೇಳತೀರದಾಗಿದೆ. ಇದರ ನಡುವೆ ಕಾವೇರಿ ನೀರಿನ ಐದನೇ ಹಂತದ ಕಾಮಗಾರಿ ಕೂಡ ಪ್ರಗತಿಯಲ್ಲಿದೆ. ಇಷ್ಟೆಲ್ಲದರ ನಡುವೆ ಕಾವೇರಿ ನೀರಿನ ಐದನೇ ಹಂತ ಮುಕ್ತಾಯವಾದರೂ ಸಹ ನಗರದಲ್ಲಿ ನೀರಿಗೆ ಮತ್ತಷ್ಟು ಅಹಹಾಕಾರ ಉಂಟಾಗುವ ಸಾಧ್ಯತೆಗಳಿವೆ.
ಕಾವೇರಿ ಜಲಾಶಯಗಳಿಂದ ನೀರು ಪೂರೈಕೆ
ಬೆಂಗಳೂರಿಗರ ನೀರಿನ ದಾಹವನ್ನು ನೀಗಲು ಸದ್ಯ 1400 ಎಂಎಲ್ಡಿ ನೀರು ಬೇಕಾಗಿದೆ. ಕಾವೇರಿ ಜಲಾಶಯಗಳಿಂದ ನೀರನ್ನು ಬೆಂಗಳೂರಿಗೆ ಪೂರೈಕೆ ಮಾಡುತ್ತಿರುವುದರಿಂದ ಬೆಂಗಳೂರಿಗರ ಕುಡಿಯುವ ನೀರು ಪೂರೈಕೆಗೆ ಯಾವುದೇ ರೀತಿಯ ತೊಂದರೆ ಉಂಟಾಗುವುದಿಲ್ಲ. ಆದರೆ, 110 ಹಳ್ಳಿಗಳಿಗೆ ನೀರನ್ನು ಪೂರೈಸುವ ಐದನೇ ಹಂತ ಯೋಜನೆ 2023 ಮಾರ್ಚ್ ನಲ್ಲಿ ಮುಗಿಯುವ ಸಾಧ್ಯತೆಯಿದೆ. ಈ ವೇಳೆ ಮತ್ತೆ ಹೆಚ್ಚುವರಿ ನೀರಿನ ಅನಿವಾರ್ಯತೆ ಎದುರಾಗಲಿದೆ.
110 ಹಳ್ಳಿಗಳಿಗೆ ನೀರನ್ನು ಪೂರೈಸುವ ಯೋಜನೆ
ಕಾವೇರಿ ಕುಡಿಯುವ ನೀರಿನ ಯೋಜನೆ ಐದನೇ ಹಂತದ ಕಾಮಗಾರಿ ಪ್ರಗತಿಯಲ್ಲಿದೆ. 110 ಹಳ್ಳಿಗಳಿಗೆ ನೀರನ್ನು ಪೂರೈಸುವ ಯೋಜನೆ ಇದಾಗಿದ್ದು. ಈ ಯೋಜನೆಯಿಂದಾಗಿ 750MLD ನೀರು ಬೆಂಗಳೂರಿಗೆ ಹೆಚ್ಚುವರಿಯಾಗಿ ಬೇಕಾಗಿದೆ. ಆದರೆ ಈ ನೀರನ್ನು ಕಾವೇರಿ ಜಲಾಶಯಗಳಿಂದ ತರಲು ಸಾಧ್ಯವಿಲ್ಲವಾಗಿದೆ. ಒಂದು ವೇಳೆ ಕಾವೇರಿಯ ನೀರನ್ನೇ ಪೂರೈಕೆ ಮಾಡಿದರೇ ಬೆಂಗಳೂರು ಜನಕ್ಕೆ ನೀರಿನ ಅಭಾವ ಎದುರಾಗಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಎಷ್ಟು ಯೋಜನೆಗಳನ್ನು ಕೈಗೆತ್ತಿಕೊಂಡಿದೆ
ಬೆಂಗಳೂರು ಜಲಮಂಡಳಿ ಕುಡಿಯುವ ನೀರಿಗೆ ತೊಂದರೆಯಾಗಲಿದೆ ಎಂಬುದನ್ನು ಮನಗಂಡು ಸರ್ಕಾರಕ್ಕೆ ವರದಿಯನ್ನು ನೀಡಿದೆ. ಇದೇ ಕಾರಣಕ್ಕಾಗಿ ಬೆಂಗಳೂರಿಗೆ ಕಾವೇರಿಯನ್ನು ಹೊರತು ಪಡಿಸಿ ಎಲ್ಲಿಂದ ನೀರನ್ನು ಪೂರೈಸಬಹು ಎಂದು ಅರಿತು ಯೋಜನೆಗಳನ್ನು ಕೈಗೊಂಡಿದೆ. ಪ್ರಮುಖ ಮೂರು ಯೋಜನೆಗಳ ಕಾಮಗಾರಿಯೂ ಪ್ರಗತಿಯಲ್ಲಿವೆ.
*ಶರಾವತಿಯ ಎತ್ತಿನಹೊಳೆ ಯೋಜನೆ.
*ತಿಪ್ಪಗೊಂಡನಹಳ್ಳಿ ಯೋಜನೆ.
*ಹೆಸರಘಟ್ಟ ಯೋಜನೆ.
ಶರಾವತಿಯ ನೀರನ್ನು ತರಲು ಎತ್ತಿನ ಹೊಳೆ ಯೋಜನೆ ಮಾಡಲಾಗುತ್ತಿದೆ. ತಿಪ್ಪಗೊಂಡಹಳ್ಳಿಯ ನೀರನ್ನು ತರಲು ಯೋಜನೆ ಮಾಡಲಾಗಿದೆ. ಇನ್ನು ಸುಮಾರು ಮೂನ್ನೂರು ಎಕರೆ ವಿಸ್ತೀರ್ಣದಲ್ಲಿರುವ ಹೆಸರಘಟ್ಟ ಕೆರೆಯ ಯೋಜನೆ ಸಹ ಪ್ರಗತಿಯಲ್ಲಿದೆ.
ಯೋಜನೆ ಮುಗಿದು ಬೆಂಗಳೂರಿಗೆ ನೀರು ಸಿಗುತ್ತ..?
ಇನ್ನು ಬೆಂಗಳೂರು ಜಲಮಂಡಳಿ ಮುಖ್ಯ ಇಂಜಿನಿಯರ್ ಬಿ ಸುರೇಶ್ ಮಾತನಾಡಿ ""ಕಾವೇರಿ ನೀರಿನ ಐದನೇ ಹಂತದ ಯೋಜನೆಯು 2023 ಮಾರ್ಚ್, ಏಪ್ರಿಲ್ ವೇಳೆಗೆ ಮುಕ್ತಾಯವಾಗಲಿದೆ. ಬೆಂಗಳೂರಿಗೆ ನೀರಿನ ಅಭಾವ ಉಂಟಾಗದಂತೆ ಕ್ರಮ ಕೈಗೊಳ್ಳಲಾಗವುದು. 2027ಕ್ಕೆ ನೀರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಎತ್ತಿನಹೊಳೆ ಯೋಜನೆ, ತಿಪ್ಪಗೊಂಡನಹಳ್ಳಿ ಯೋಜನೆ, ಹೆಸರಘಟ್ಟ ಯೋಜನೆಗಳು ಚಾಲ್ತಿಯಲ್ಲಿವೆ. ಇದರಿಂದಾಗಿಯೂ ನೀರು ಬೆಂಗಳೂರಿಗೆ ಲಭ್ಯವಾಗಲಿದೆ'' ಎಂದು ತಿಳಿಸಿದ್ದಾರೆ.