ಮನೆ ಬಾಗಿಲಿಗೆ ಶಾಲೆ: ಕರೋನಾ ಬಂದ್ರೆ ಹೇಗೆ ?
ಬೆಂಗಳೂರು, ಜನವರಿ 22: ರಾಜ್ಯದಲ್ಲಿ ಇನ್ನೂ ಪೂರ್ಣ ಪ್ರಮಾಣದಲ್ಲಿ ಶಾಲೆಗಳು ತೆಗೆದಿಲ್ಲ. ಕಾರಣ ಇಷ್ಟೇ ಕೋವಿಡ್ ಭಯ. ಇದೀಗ ಬಿಎಂಟಿಸಿಯ ಹಳೇ ಬಸ್ ಗಳಲ್ಲಿ ಮೊಬೈಲ್ ಶಾಲೆ ತೆರೆಯಲು ಬಿಬಿಎಂಪಿ ಮುಂದಾಗಿದೆ. ಅಂದ್ರೆ ಬಸ್ ನಲ್ಲಿ ಶಾಲೆ ನಡೆಸಿದ್ರೆ ಮಕ್ಕಳಿಗೆ ಕರೋನಾ ಬರಲ್ಲವೇ ?
ಬಿಬಿಎಂಪಿ ಮೊಬೈಲ್ ಶಾಲೆಯ ಯೋಜನೆ ಸಾರ್ವಜನಿಕ ಚರ್ಚೆಗೆ ಕಾರಣವಾಗಿದೆ. ಕರೋನಾ ಸಂಕಷ್ಟ ವೇಳೆ ಮನೆಗೆ ಸೀಲ್ ಡೌನ್ ಮಾಡಲು ಲಕ್ಷ ಲಕ್ಷ ವೆಚ್ಚ ಮಾಡಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿತ್ತು. ಇದೀಗ ಮತ್ತೆ ಮೊಬೈಲ್ ಶಾಲೆ ಯೋಜನೆ ಬಗ್ಗೆಯೂ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.
ಬಿಎಂಟಿಸಿ ಗುಜರಿಗೆ ಹಾಕುತ್ತಿದ್ದ ಬಸ್ ಗಳನ್ನು ಖರೀದಿಸಿ ಮೊಬೈಲ್ ಶಾಲೆ ಮಾಡುವುದಾಗಿ ಪ್ರಕಟಿಸಿದೆ. ಶಿಕ್ಷಣ ವಂಚಿತ ಮಕ್ಕಳು ಹೆಚ್ಚಾಗಿರುವ ಪ್ರದೇಶಕ್ಕೆ ಮೊಬೈಲ್ ಬಸ್ ಕಳಿಸುವುದಾಗಿ ಪ್ರಕಟಿಸಿದೆ. ಇದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಬಿಬಿಎಂಪಿ ಸಾರ್ವಜನಿಕ ದುಡ್ಡನ್ನು ದುಂದು ವೆಚ್ಚ ಮಾಡಲು ಹೊರಟಿದೆ. ಇನ್ನೆರಡು ತಿಂಗಳಲ್ಲಿ ಶಾಲೆಗಳು ತೆರೆದರೆ ಎಲ್ಲಾ ಮಕ್ಕಳು ಶಾಲೆಗೆ ಹೋಗುತ್ತಾರೆ. ಸ್ಲಂ, ಕೊಳಗೇರಿ ಶಿಕ್ಷಣ ವಂಚಿತ ಮಕ್ಕಳಿಗೆ ಸಾ-ಶಿಕ್ಷಣ ಕೊಡಿಸುವ ಸ್ವಯಂ ಸೇವಾ ಸಂಸ್ಥೆಗಳು ನಿರಂತರವಾಗಿ ಕಾರ್ಯೋನ್ಮುಖವಾಗಿವೆ. ಆದರೂ ಬಿಬಿಎಂಪಿ ಅಧಿಕಾರಿಗಳು ಬಡ ಮಕ್ಕಳ ಹೆಸರಿನಲ್ಲಿ ಯೋಜನೆ ರೂಪಿಸಿ ಹಣ ಲೂಟಿಗೆ ಹೊರಟಿದ್ದಾರೆ ಎಂದು ಆರ್ಟಿಐ ಕಾರ್ಯಕರ್ತ ಸಾಯಿದತ್ತಾ ಪ್ರಶ್ನಿಸಿದ್ದಾರೆ.
ಬಿಬಿಎಂಪಿ ವತಿಯಿಂದ ನಡೆಯುತ್ತಿರುವ ಶಾಲೆಗಳಿಗೆ ಮೂಲ ಸೌಲಭ್ಯ ಇಲ್ಲದೇ ಸೊರಗುತ್ತಿವೆ. ಇಂತಹ ಶಾಲಾ ಮಕ್ಕಳಿಗೆ ಮೂಲ ಸೌಕರ್ಯ ಕಲ್ಪಿಸದೇ ಕಳಪೆ ಗುಣಮಟ್ಟದ ಟ್ಯಾಬ್ ನೀಡಿ ಈ ಹಿಂದೆ ಬಿಬಿಎಂಪಿ ವಿವಾದಕ್ಕೆ ನಾಂದಿ ಹಾಡಿತ್ತು. ಇದೀಗ ಬಿಎಂಟಿಸಿಯ ಗುಜರಿ ಬಸ್ ಗಳನ್ನು ಖರೀದಿಸಿ ಮೊಬೈಲ್ ಶಾಲೆ ನಿರ್ಮಿಸಲು ಹೊರಟಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಬಿಎಂಟಿಸಿ ಒಂದ್ ಬಸ್ ಗೆ ನಾಲ್ಕು ಲಕ್ಷ ರೂಪಾಯಿ ವೆಚ್ಚ ಮಾಡಲಾಗುತ್ತಿದೆ. ಐವತ್ತು ಬಸ್ ಖರೀದಿಸಿದರೂ ಎರಡು ಕೋಟಿ ರೂಪಾಯಿ ವೆಚ್ಚ ಆಗಲಿದೆ. ಆ ಬಸ್ ಗಳನ್ನು ಮೊಬೈಲ್ ಶಾಲೆಗಳನ್ನಾಗಿ ಪರಿವರ್ತಿಸಲು ಅದಕ್ಕಿಂತೂ ಹೆಚ್ಚು ಮೊತ್ತ ವ್ಯಯಿಸಬೇಕು. ಇದರ ಬದಲಿಗೆ ಇರುವ ಶಾಲೆಗಳಿಗೆ ಮೂಲ ಸೌಲಭ್ಯ ಕಲ್ಪಿಸಿದರೆ ಬಿಬಿಎಂಪಿ ಶಾಲೆಗಳಲ್ಲಿ ಓದುತ್ತಿರುವ ಬಡ ಮಕ್ಕಳಿಗೆ ನೆರವಾಗಲಿದೆ ಎಂದು ಬಿಬಿಎಂಪಿ ಶಾಲೆಯ ಮುಖ್ಯೋಪಾಧ್ಯಾಯರು ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Recommended Video