ನಿಷೇಧಾಜ್ಞೆ ಹೇರಿದ ಬೆಂಗಳೂರು ಪೊಲೀಸರಿಗೆ ನೆಟ್ಟಿಗರ ತರಹೇವಾರಿ ಪ್ರಶ್ನೆಗಳು
ಬೆಂಗಳೂರು, ಡಿಸೆಂಬರ್ 18: ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನೆಯ ಬಿಸಿ ರಾಜ್ಯಕ್ಕೂ ತಗಲುವ ಸಾಧ್ಯತೆ ಇರುವ ಕಾರಣ ಮುನ್ನೆಚ್ಚರಿಕಾ ಕ್ರಮವಾಗಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ನಿಷೇಧಾಜ್ಞೆ ಜಾರಿಯಾಗಿದೆ.
ಬೆಂಗಳೂರಿನಲ್ಲಿ (ಡಿಸೆಂಬರ್ 18) ಇಂದಿನಿಂದಲೇ 144 ಸೆಕ್ಷನ್ ಜಾರಿಯಾಗಿದ್ದು, ಡಿಸೆಂಬರ್ 21 ರ ರಾತ್ರಿ 12 ರ ವರೆಗೆ ನಿಷೇಧಾಜ್ಞೆ ಜಾರಿಯಲ್ಲಿರಲಿದೆ. ಈ ಬಗ್ಗೆ ಫೇಸ್ಬುಕ್, ಟ್ವಿಟ್ಟರ್ ನಲ್ಲಿ ಬೆಂಗಳೂರು ಪೊಲೀಸರು ಪೋಸ್ಟ್ ಹಾಕಿದ್ದಾರೆ.
Sec.144 has been imposed throughout the city. Education, banks and markets will remain functional. All transport services will be available tomorrow as usual. Don't be in panic. @CPBlr
— BengaluruCityPolice (@BlrCityPolice) December 18, 2019
ಬೆಂಗಳೂರು ಪೊಲೀಸರ ಪೋಸ್ಟ್ಗೆ ನೆಟ್ಟಿಗರು ಭಿನ್ನ ರೀತಿಯ ಕಮೆಂಟ್ಗಳನ್ನು ಹಾಕಿದ್ದಾರೆ. ಕೆಲವರು ತಮಾಷೆಯ ಪ್ರಶ್ನೆಗಳನ್ನೂ ಕೇಳಿದ್ದಾರೆ. ಕೆಲವರು ಗಂಭೀರ ಪ್ರಶ್ನೆಗಳನ್ನು ಪೊಲೀಸರಿಗೆ ಕೇಳಿದ್ದಾರೆ.
ನಿಷೇಧಾಜ್ಞೆ ಜಾರಿಯಾದರೆ ಎಣ್ಣೆ (ಮದ್ಯ) ಸಿಗುತ್ತದೆಯೋ ಇಲ್ಲವೋ ಎಂಬುದು ವ್ಯಕ್ತಿಯೊಬ್ಬನ ಚಿಂತೆ. ಸುನಿಲ್ ಎಂಬಾತನೊಬ್ಬ, 'ನೀವು ಏನು ಬೇಕಾದರೂ ಮಾಡಿಕೊಳ್ಳಿ, ಬಾರ್, ಪಬ್ಗಳನ್ನು ಮಾತ್ರ ಬಂದ್ ಮಾಡಬೇಡಿ' ಎಂದು ಮನವಿ ಮಾಡಿದ್ದಾನೆ. ಇದಕ್ಕೆ ಪ್ರತಿಕ್ರಿಯಿಸಿರುವ ಪೊಲೀಸರು, 'ಎಲ್ಲವೂ ಸಾಮಾನ್ಯದಂತೆ ನಡೆಯಲಿದೆ' ಎಂದಿದ್ದಾರೆ.
ಮತ್ತೊಬ್ಬ 'ನನಗೆ ರಜೆ ಬೇಕಿದೆ, ನಿಷೇಧಾಜ್ಞೆಯಿಂದ ನನ್ನ ಸಂಸ್ಥೆ ರಜೆ ಕೊಡುತ್ತಾ?' ಎಂದು ಬೆಂಗಳೂರು ಪೊಲೀಸರನ್ನು ಪ್ರಶ್ನಿಸಿದ್ದಾನೆ.
ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ನಿಷೇಧಾಜ್ಞೆ ಜಾರಿ
20 ನೇ ತಾರೀಖು ವಿಟಿಯು ಪರೀಕ್ಷೆಗಳಿವೆ. ಅದು ಮುಂದೂಡಲ್ಪಡುತ್ತದೆಯೇ? ಎಂದು ವಿದ್ಯಾರ್ಥಿಯೊಬ್ಬ ಕೇಳಿದ್ದಾನೆ. ಪರೀಕ್ಷೆಗಳಾವುವು ಮುಂದೂಡಲಾಗುವುದಿಲ್ಲ ಎಂದು ಪೊಲೀಸರೇ ಉತ್ತರಿಸಿದ್ದಾರೆ.
ಯಾವುದೇ ಹಿಂಸೆ ಇಲ್ಲದಿದ್ದರೂ ಏಕಾ-ಏಕಿ ಹೀಗೆ ನಿಷೇಧಾಜ್ಞೆ ಜಾರಿ ಮಾಡಿರುವ ಉದ್ದೇಶವೇನು? ಶಾಂತಿಯುತವಾಗಿ ಪ್ರತಿಭಟಿಸುವ ಹಕ್ಕೂ ಇಲ್ಲವಾ? ಎಂದು ಹಲವರು ಬೆಂಗಳೂರು ಪೊಲೀಸರನ್ನು ಪ್ರಶ್ನಿಸಿದ್ದಾರೆ. ಕೆಲವರು ಪೊಲೀಸರಿಗೆ ಧನ್ಯವಾದಗಳನ್ನೂ ಅರ್ಪಿಸಿದ್ದಾರೆ.