ಗ್ರಾಮಸ್ಥರ ನಿದ್ದೆ ಕಸಿದ ಮೀಸಗಾನಹಳ್ಳಿ ಸುತ್ತಮುತ್ತಲ ಚಿರತೆ ಓಡಾಟ
ದೇವನಹಳ್ಳಿ, ಜನವರಿ 30: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಮೀಸಗಾನಹಳ್ಳಿ ಬಳಿ 6 ತಿಂಗಳಿಂದ ಚಿರತೆ ಕಾಣಿಸಿಕೊಳ್ಳುತ್ತಿದ್ದು, ಸುತ್ತಮುತ್ತಲಿನ ಗ್ರಾಮಸ್ಥರಲ್ಲೂ ಆತಂಕ ಸೃಷ್ಟಿ ಆಗಿದೆ.
ಮೀಸಗಾನಹಳ್ಳಿ ಗ್ರಾಮವು ನಂದಿಬೆಟ್ಟ ಗಿರಿ ಶ್ರೇಣಿಗಳ ತಪ್ಪಲಿನಲ್ಲಿರುವ ಕಾರಣ ಕಾಡು ಪ್ರಾಣಿಗಳು ಹೆಚ್ಚಾಗಿ ಅಡ್ಡಾಡುತ್ತವೆ. ಆದರೆ ಇಲ್ಲಿನ ಗ್ರಾಮಸ್ಥರಿಗೆ ಯಾವುದೇ ತೊಂದರೆಯನ್ನು ಕೊಟ್ಟಿರಲಿಲ್ಲ. ಆದರೆ 6 ತಿಂಗಳಿನಿಂದ ಚಿರತೆ ಕಾಟ ಹೆಚ್ಚಾಗಿದ್ದು, ಗ್ರಾಮಕ್ಕೆ ದಾಳಿಯಿಡುತ್ತಿದೆ.
ಊರೊಳಗೆ ಚಿರತೆ ಬಂದರೆ...ಸಂಜಯ್ ಗುಬ್ಬಿ ಏನಂತಾರೆ?
ಗ್ರಾಮದಲ್ಲಿನ ಮೇಕೆ ಹಾಗೂ ಬೀದಿ ನಾಯಿಗಳನ್ನು ಎಳೆದೊಯ್ಯುತ್ತಿದೆ. ತುಮಕೂರಿನಲ್ಲಿ ಮನೆಯೊಂದಕ್ಕೆ ಚಿರತೆ ನುಗ್ಗಿದ ಘಟನೆ ನಡೆಯುವ ಮುನ್ನಾ ದಿನವೇ ಮೀಸಗಾನಹಳ್ಳಿಯಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಗ್ರಾಮದ ಜನತೆ ನೆಮ್ಮದಿ ಹಾಳಾಗಿದೆ. 6 ತಿಂಗಳ ಹಿಂದೆ ಚಿರತೆ ಕಾಣಿಸಿದಾಗ ಅರಣ್ಯ ಇಲಾಖೆಯವರು ಬೋನು ಇಟ್ಟರೂ ಯಾವುದೇ ಪ್ರಯೋಜನವಾಗಿಲ್ಲ.
ಒಂದೇ ಬೋನು ಇಟ್ಟಿದ್ದರಿಂದ ಚಿರತೆ ಸಿಗುತ್ತಿಲ್ಲ. ಎರಡು- ಮೂರು ಬೋನುಗಳು ಇಡಬೇಕಿದೆ ಎಂದು ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ. ಒಟ್ಟಾರೆ ಚಿರತೆಯ ಭಯ 6 ಗ್ರಾಮಗಳ ಗ್ರಾಮಸ್ಥರ ನಿದ್ದೆಗೆಡಿಸಿದ್ದು, ಯಾವಾಗ ಚಿರತೆ ದಾಳಿ ಮಾಡುತ್ತದೋ ಎಂಬ ಭೀತಿಯಲ್ಲಿ ಜನರಿದ್ದಾರೆ.