ಕೋವಿಡ್ ತುರ್ತು ಸೇವೆಗೆ ಜನ ಸ್ನೇಹಿ ತಪಾಸಣಾ ಕೇಂದ್ರ ಆರಂಭ
ಬೆಂಗಳೂರು, ಮೇ. 14: ರಾಜ್ಯ ಸರ್ಕಾರ ಮತ್ತು ಬೆಂಗಳೂರು ಮಹಾ ನಗರ ಪಾಲಿಕೆಗೆ ಕೆಟ್ಟ ಮೇಲೆ ಬುದ್ದಿ ಬಂತಂತೆ ಕಾಣುತ್ತಿದೆ. ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಹೊಸ ಯೋಜನೆಯನ್ನು ಬಿಬಿಎಂಪಿ ಘೋಷಣೆ ಮಾಡಿದೆ. ವಾರ್ಡ್ ಮಟ್ಟದಲ್ಲಿ ಟ್ರಾಯಾಜಿಂಗ್ ಸೆಂಟರ್ ರಚಿಸಿರುವ ಬೆಂಗಳೂರು ಮಹಾ ನಗರ ಪಾಲಿಕೆ ಸದ್ಯಕ್ಕೆ 26 ಕೇಂದ್ರಗಳನ್ನು ಬೆಂಗಳೂರಿನಲ್ಲಿ ಸ್ಥಾಪಿಸಿದೆ.
ಕೊರೊನಾ ಸೋಂಕಿತರು ಈ ಕೇಂದ್ರಕ್ಕೆ ಹೋದರೆ ಸಾಕು, ಅಲ್ಲಿಯೇ ತಸಾಸಣೆ ನಡೆಸಿ, ಅಗತ್ಯ ಇರುವ ಚಿಕಿತ್ಸೆಗೆ ಯಾವ ಆಸ್ಪತ್ರೆಗೆ ದಾಖಲಾಗಬೇಕು ಎಂಬುದರ ಬಗ್ಗೆ ಕೇಂದ್ರದಿಂದಲೇ ಶಿಫಾರಸು ಮಾಡಿ ಚಿಕಿತ್ಸೆ ಕಲ್ಪಿಸಲಾಗುತ್ತದೆ. ಇಂತಹ ಜನ ಸ್ನೇಹಿ ಯೋಜನೆಯನ್ನು ಬೆಂಗಳೂರು ಮಹಾನಗರ ಪಾಲಿಕೆ ಮುಖ್ಯ ಆಯುಕ್ತ ಗೌರವ ಗುಪ್ತಾ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ವಲಯಕ್ಕೊಂದು ವಾರ್ ರೂಮ್ ರಚಿಸಿ, ಬಿಯು ನಂಬರ್, ಎಸ್ಆರ್ಎಫ್ ನಂಬರ್ ಹೆಸರಿನಲ್ಲಿ ಕೊರೊನಾ ಸೋಂಕಿತರನ್ನು ಸಾಯುವಂತೆ ಮಾಡಿದ್ದ ಬೆಂಗಳೂರು ಮಹಾ ನಗರ ಪಾಲಿಕೆ ಕೊನೆಗೂ ಎಚ್ಚೆತ್ತುಕೊಂಡಿದೆ. ಟ್ರಯಾಜಿಂಗ್ ಕೇಂದ್ರಗಳನ್ನು ಸ್ಥಾಪಿಸುವ ಮೂಲಕ ಕೊರೊನಾ ಸೋಂಕಿತರಿಗೆ ಅಗತ್ಯ ಚಿಕಿತ್ಸೆ ಬಗ್ಗೆ ಪರಿಶೀಲಿಸಿ ಆನಂತರ ಆಸ್ಪತ್ರೆಗೆ ದಾಖಲಿಸಲು ಕ್ರಮ ಜರುಗಿಸಲಾಗುತ್ತದೆ.
ಕೊರೊನಾ ಸೋಂಕಿತರನ್ನು ತಪಾಸಣೆ ನಡೆಸುವ ಜತೆಗೆ, ಅವರಿಗೆ ಹೋಮ್ ಕ್ವಾರೆಂಟೈನ್, ಸಾಮಾನ್ಯ ಚಿಕಿತ್ಸೆ, ಐಸಿಯು ಅಗತ್ಯತೆ ಬಗ್ಗೆ ವೈದ್ಯರು ಪರಿಶೀಲನೆ ನಡೆಸುತ್ತಾರೆ. ಅಗತ್ಯಕ್ಕೆ ತಕ್ಕಂತೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತದೆ. ಸದ್ಯದ ಮಟ್ಟಿಗೆ ಬೆಂಗಳೂರಿನಲ್ಲಿ 26 ಟ್ರಯಾಜಿಂಗ್ ಕೇಂದ್ರಗಳನ್ನು ಪ್ರಾರಂಭಿಸಲಾಗಿದ್ದು, ಮುಂದಿನ ದಿನಗಳಲ್ಲಿ ವಾರ್ಡ್ ಮಟ್ಟದಲ್ಲಿ ಕೊರೊನಾ ತಪಾಸಣಾ ಕೇಂದ್ರಗಳನ್ನು ಪ್ರಾರಂಭಿಸಲಾಗುತ್ತಿದೆ ಎಂದು ಗೌರವ ಗುಪ್ತಾ ತಿಳಿಸಿದ್ದಾರೆ.
Recommended Video
ಕೊರೊನಾ ಪಾಸಿಟಿವ್ ಬಂದರೆ ಜನರು ಇನ್ನು ಮುಂದೆ ನೇರವಾಗಿ ಆಸ್ಪತ್ರೆಗೆ ಹೋಗುವ ಅಗತ್ಯವಿಲ್ಲ. ಪ್ರತಿಯೊಬ್ಬರು ಟ್ರಯಾಜಿಂಗ್ ಸೆಂಟರ್ಗೆ ಹೋಗಲು ಸೂಚಿಸಿಲಾಗಿದೆ. ಅಲ್ಲಿ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿ ತಪಾಸಣೆ ನಡೆಸುತ್ತಾರೆ. ಅಲ್ಲಿ ಯಾವ ರೀತಿಯ ಟ್ರೀಟ್ ಮೆಂಟ್ ಬೇಕು ಎಂಬುದನ್ನು ವೈದ್ಯರು ನಿರ್ಧರಿಸುತ್ತಾರೆ. ಆನಂತರ ಅವರಿಗೆ ಸೂಕ್ತ ಚಿಕಿತ್ಸೆಗೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ಗೌರವ ಗುಪ್ತ ತಿಳಿಸಿದ್ದಾರೆ.