ಜನಸ್ನೇಹಿಯಾದ ತೀರ್ಮಾನ ಕೈಗೊಂಡ ರವಿ ಚನ್ನಣ್ಣನವರ್
ಬೆಂಗಳೂರು, ಸೆಪ್ಟೆಂಬರ್ 11 : ಸಂಚಾರಿ ನಿಯಮ ಉಲ್ಲಂಘನೆಗೆ ಭಾರಿ ಮೊತ್ತದ ದಂಡ ವಿಧಿಸುವ ಮೋಟಾರು ವಾಹನ ತಿದ್ದುಪಡಿ ಕಾಯ್ದೆ 2019 ಜಾರಿಗೆ ಬಂದಿದೆ. ಬೈಕ್, ಕಾರುಗಳಿಗೆ ಅಗತ್ಯ ದಾಖಲೆಗಳು ಇಲ್ಲದವರು ಈಗ ಅದನ್ನು ಮಾಡಿಸಲು ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ್ ಜನಸ್ನೇಹಿಯಾದ ತೀರ್ಮಾನವನ್ನು ಕೈಗೊಂಡಿದ್ದಾರೆ. ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಡಿಎಲ್ ಪಡೆಯಲು ಕ್ಯಾಂಪ್ ಆಯೋಜನೆ ಮಾಡುತ್ತಿದ್ದಾರೆ.
ಸಂಚಾರಿ ನಿಯಮ ಉಲ್ಲಂಘನೆ; ರಾಜ್ಯ ಸರ್ಕಾರದಿಂದ ದಂಡ ಮೊತ್ತ ಕಡಿತ
ಗ್ರಾಮಾಂತರ ಪ್ರದೇಶದಲ್ಲಿ ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ವಾಹನ ಓಡಿವವರು ಸಂಖ್ಯೆ ಹೆಚ್ಚಾಗಿದೆ. ಆದ್ದರಿಂದ, ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಸೆಪ್ಟೆಂಬರ್ 15ರಿಂದ ಡಿಎಲ್ ಕ್ಯಾಂಪ್ ಆಯೋಜನೆ ಮಾಡುತ್ತಿದ್ದಾರೆ. ಸಾರಿಗೆ ಇಲಾಖೆ ಸಹ ಇದಕ್ಕೆ ಒಪ್ಪಿಗೆ ಕೊಟ್ಟಿದೆ.
ದಂಡ ಮೊತ್ತ ಹೆಚ್ಚಳ; ಪೆಟ್ರೋಲ್ ಸ್ಥಗಿತಗೊಳಿಸುವ ಎಚ್ಚರಿಕೆ
ಮೋಟಾರು ವಾಹನ ತಿದ್ದುಪಡಿ ಕಾಯ್ದೆ 2019ರ ಪ್ರಕಾರ ಡಿಎಲ್ ಇಲ್ಲದೇ ವಾಹನ ಚಾಲನೆ ಮಾಡಿದರೆ 5000 ರೂ. ದಂಡವನ್ನು ವಿಧಿಸಲಾಗುತ್ತದೆ. ಗ್ರಾಮೀಣ ಪ್ರದೇಶದ ಜನರಿಗೆ ಹೊರೆಯಾಗಬಾರದು ಎಂಬ ಕಾರಣಕ್ಕೆ ಡಿಎಲ್ ಕ್ಯಾಂಪ್ ಆಯೋಜನೆ ಮಾಡಲಾಗುತ್ತಿದೆ.
ಸಂಚಾರಿ ನಿಯಮ ಉಲ್ಲಂಘನೆಯ ದಂಡ ಕಡಿಮೆ ಮಾಡಿ: ಸಿದ್ದರಾಮಯ್ಯ
ರವಿ ಡಿ. ಚನ್ನಣ್ಣನವರ್ ಹೇಳುವುದೇನು?
"ಚಾಲನಾ ಪರವಾನಗಿ ಇಲ್ಲದ ವಾಹನ ಚಾಲಕರು ಸೂಕ್ತ ದಾಖಲೆಗಳೊಂದಿಗೆ ಡಿಎಲ್ ಕ್ಯಾಂಪ್ಗೆ ಆಗಮಿಸಿದರೆ ಸ್ಥಳದಲ್ಲಿಯೇ ಚಾಲನಾ ಪರವಾನಗಿ ವಿತರಿಸಲು ಕ್ರಮ ಕೈಗೊಳ್ಳಲಾಗುತ್ತದೆ" ಎಂದು ಎಸ್ಪಿ ರವಿ ಡಿ. ಚನ್ನಣ್ಣನವರ್ ಹೇಳಿದ್ದಾರೆ.
ಆನೇಕಲ್ನಲ್ಲಿಯೂ ಕ್ಯಾಂಪ್
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ, ದೇವನಹಳ್ಳಿ, ನೆಲಮಂಗಳಲ ಮತ್ತು ದೊಡ್ಡಬಳ್ಳಾಪುರ ತಾಲೂಕುಗಳಲ್ಲಿ ಡಿಎಲ್ ಕ್ಯಾಂಪ್ ಆಯೋಜನೆ ಮಾಡಲಾಗಿದೆ. ಆನೇಕಲ್ ತಾಲೂಕಿನಲ್ಲಿಯೂ ಸೆ.15ರಿಂದ ಡಿಎಲ್ ಕ್ಯಾಂಪ್ ಆಯೋಜನೆ ಮಾಡಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.
ಜನರಲ್ಲಿ ಜಾಗೃತಿ ಮೂಡಿಸಲಾಗುತ್ತದೆ
ಸಂಚಾರಿ ನಿಯಮ ಪಾಲನೆ ಬಗ್ಗೆ ಜಾಗೃತಿ ಮೂಡಿಸಲು ಶಾಲಾಕಾಲೇಜುಗಳಲ್ಲಿ ಸೆಮಿನಾರ್ ಆಯೋಜನೆ ಮಾಡಲಾಗುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಚಾಲನಾ ಪರವಾನಗಿ ಇಲ್ಲದೆ ವಾಹನ ಚಲಾಯಿಸುವವರ ಸಂಖ್ಯೆ ಹೆಚ್ಚಾಗಿದ್ದರಿಂದ ಡಿಎಲ್ ಪಡೆಯುವ ಪ್ರಕ್ರಿಯೆ ಸರಳಗೊಳಿಸಲು ಕ್ಯಾಂಪ್ ಆಯೋಜನೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ದಲ್ಲಾಳಿಗಳ ಹಾವಳಿಗೆ ತಡೆ
ಡಿಎಲ್ ಕ್ಯಾಂಪ್ ಆಯೋಜನೆ ಮಾಡುವುದರಿಂದ ದಲ್ಲಾಳಿಗಳ ಕಾಟದಿಂದ ಜನರಿಗೆ ಮುಕ್ತಿ ಸಿಗಲಿದೆ ಮತ್ತು ಆರ್ಟಿಓ ಕಛೇರಿಗೆ ಜನರು ಅಲೆದಾಟ ಮಾಡುವುದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.