KSRTCಗೆ ಯಾಮಾರಿಸುತ್ತಿರುವ ಗುತ್ತಿಗೆದಾರರು; ದಾಖಲೆ ಬಹಿರಂಗ
ಬೆಂಗಳೂರು, ಫೆಬ್ರವರಿ 6: ಬೆಂಗಳೂರಿನಿಂದ ಉತ್ತರ ಕರ್ನಾಟಕದ ಕಡೆಗೆ ಸಂಚರಿಸುವವರಿಗೆ ಅನುಕೂಲ ಆಗಲಿ ಎಂದು ಕೆಎಸ್ಆರ್ಟಿಸಿ ಪೀಣ್ಯದಲ್ಲಿ ದೊಡ್ಡ ಬಸ್ ಟರ್ಮಿನಲ್ ಸ್ಥಾಪಿಸಿತ್ತು.
ಆದರೆ, ಈ ಬಸ್ ಟರ್ಮಿನಲ್ನಿಂದ ಸಂಚರಿಸಲು ಉತ್ತರದ ಪ್ರಯಾಣಿಕರು ನಿರಾಸಕ್ತಿ ತೋರಿಸಿದ್ದರಿಂದ ಪುನಃ ಕೆಂಪೇಗೌಡ ಕೇಂದ್ರ ಬಸ್ ನಿಲ್ದಾಣದಿಂದಲೇ ಬಸ್ಗಳನ್ನು ಓಡಿಸಲು ಪ್ರಾರಂಭಿಸಿತ್ತು. ಸದ್ಯ ಉತ್ತರದ ಕಡೆ ಹೋಗುವ ಬಸ್ಗಳು ಎಂಟ್ರಿ ರಿಜಿಸ್ಟರ್ ಮಾಡಲು ಮಾತ್ರ ನಿಲ್ದಾಣದ ಒಳ ಹೋಗಿ ಬರುತ್ತವೆ.
ಕೆಎಸ್ಆರ್ಟಿಸಿಗೆ ನಷ್ಟ; 126 ಬಸ್ ಸಂಚಾರ ಸ್ಥಗಿತ
40 ಕೋಟಿ ರುಪಾಯಿ ವೆಚ್ಚ ಮಾಡಿ ಬಸ್ ನಿಲ್ದಾಣ ನಿರ್ಮಿಸಲಾಗಿತ್ತು. ಆದರೆ, ಈಗ ಪೀಣ್ಯ ಬಸವೇಶ್ವರ ಬಸ್ ನಿಲ್ದಾಣ ಬಿಕೋ ಎನ್ನುತ್ತಿದ್ದು, ಅಲ್ಲಿನ 96 ಮಳಿಗೆಗಳಿಂದ ಕೆಎಸ್ಆರ್ಟಿಸಿಗೆ ಬರಬೇಕಾಗಿರುವ ಲಕ್ಷಾಂತರ ರುಪಾಯಿ ಬಾಡಿಗೆ ಕೂಡ ಸರಿಯಾಗಿ ಸಂದಾಯವಾಗುತ್ತಿಲ್ಲ ಎಂಬ ಮಾಹಿತಿ ಬಹಿರಂಗವಾಗಿದೆ.
55 ಲಕ್ಷ ರುಪಾಯಿ ಬಾಕಿ ಬರಬೇಕಿದೆ
ಆರ್ ಟಿ ಐ ಕಾರ್ಯಕರ್ತ ಎನ್ ಶ್ರೀನಿವಾಸ್ ಅವರು ಪೀಣ್ಯ ಬಸವೇಶ್ವರ ಬಸ್ ನಿಲ್ದಾಣದಲ್ಲಿ ಮಳಿಗೆಗಳಿಂದ ನಿಗಮಕ್ಕೆ ಬರಬೇಕಾಗಿರುವ ಬಾಕಿ ಮೊತ್ತದ ಬಗ್ಗೆ ಮಾಹಿತಿ ಕೇಳಿದ್ದರು. ಇದಕ್ಕೆ ಉತ್ತರ ನೀಡಿರುವ ಕೆಎಸ್ಆರ್ಟಿಸಿ, ಪೀಣ್ಯ ಬಸ್ ನಿಲ್ದಾಣದ ಏಕೈಕ ಗುತ್ತಿಗೆದಾರರಿಂದ ನಿಗಮಕ್ಕೆ 1/11/2017 ರಿಂದ 1,85,36577 ರುಪಾಯಿ ಸಂದಾಯವಾಗಿದ್ದು, 55,80,487 ರುಪಾಯಿ ಕಳೆದ ಏಳು ತಿಂಗಳಿನಿಂದ ಬಾಕಿ ಇದೆ ಎಂದು ಮಾಹಿತಿ ನೀಡಿದೆ.
ಬಿಕೋ ಎನ್ನುತ್ತಿರುವ ನಿಲ್ದಾಣ
ಈ ಕುರಿತು ಒನ್ಇಂಡಿಯಾ ಕನ್ನಡದೊಂದಿಗೆ ಮಾತನಾಡಿದ ಆರ್ಟಿಐ ಕಾರ್ಯಕರ್ತ ಎನ್ ಶ್ರೀನಿವಾಸ ಅವರು, ''ದೂರದೃಷ್ಠಿಯಿಲ್ಲದೇ ಕೆಎಸ್ಆರ್ಟಿಸಿ, ಪೀಣ್ಯದಲ್ಲಿ ಬಸ್ ಟರ್ಮಿನಲ್ ಸ್ಥಾಪಿಸಿತು. ಆದರೆ, ಬಳಕೆಯಿಲ್ಲದೇ ಈಗ ಪೀಣ್ಯ ಬಸ್ ನಿಲ್ದಾಣ ಬಿಕೋ ಎನ್ನುತ್ತಿದೆ' ಎಂದರು.
ಬಂದ್, ಮುಷ್ಕರ : ಕೆಎಸ್ಆರ್ಟಿಸಿ, ಬಿಎಂಟಿಸಿಯ ನಷ್ಟದ ಲೆಕ್ಕ
ಬಾಕಿ ಹಣ ವಸೂಲು ಮಾಡಲಿ
''2017 ರಿಂದ ಬಸ್ ನಿಲ್ದಾಣದ ಮಳಿಗೆಗಳನ್ನು ಒಬ್ಬ ಗುತ್ತಿಗೆದಾರರಿಗೆ ಮಾತ್ರ ನೀಡಲಾಗಿದೆ. ಅವರಿಂದ ೫೫ ಲಕ್ಷ ರುಪಾಯಿ ಬಾಕಿ ಉಳಿಸಿಕೊಂಡಿರುವುದು ಕೆಎಸ್ಆರ್ಟಿಸಿ ಅಧಿಕಾರಿಗಳ ವೈಪಲ್ಯತೆಯನ್ನು ಎತ್ತಿ ತೋರಿಸುತ್ತದೆ. ಕೂಡಲೇ ಬಾಕಿ ಹಣವನ್ನು ನಿಗಮ ವಸೂಲು ಮಾಡಬೇಕು'' ಎಂದು ಅವರು ಒತ್ತಾಯಿಸಿದರು.
ವಿಫಲವಾದ ಯೋಜನೆ
2014 ರಲ್ಲಿ ಸುಮಾರು 40 ಕೋಟಿ ರುಪಾಯಿ ವೆಚ್ಚದಲ್ಲಿ ಪೀಣ್ಯ ಬಸವೇಶ್ವರ ಬಸ್ ನಿಲ್ದಾಣವನ್ನು ನಿರ್ಮಿಸಲಾಗಿತ್ತು. ಆದರೆ, ಇಲ್ಲಿಂದ ಪ್ರಯಾಣಿಕರು ಬಸ್ ಹತ್ತಿ ಇಳಿಯಲು ಮನಸ್ಸು ಮಾಡದ್ದರಿಂದ ಯೋಜನೆ ವಿಫಲವಾಯಿತು. ಸದ್ಯ ನಿಲ್ದಾಣದ ನಿಯಂತ್ರಕರ ಸಹಿ ಹಾಕಿಸಿಕೊಳ್ಳಲು ಮಾತ್ರ ಬಸ್ಗಳು 1 ಕಿಲೋ ಮಿಟರ್ ಬಂದು ಹೋಗುತ್ತವೆ. ಇದು ಕೆಎಸ್ಆರ್ಟಿಸಿಗೆ ಹೊರೆಯಾಗಿ ಪರಿಣಮಿಸಿದೆ.