ಬೆಂಗಳೂರಲ್ಲಿ ಮುಂಗಾರು ಪೂರ್ವ ಮಳೆ ಆರ್ಭಟಕ್ಕೆ ಪಾದಚಾರಿ ಬಲಿ
ಬೆಂಗಳೂರು, ಮೇ 27: ಬೆಂಗಳೂರಲ್ಲಿ ಮುಂಗಾರು ಪೂರ್ವ ಆಭಟಕ್ಕೆ ಪಾದಚಾರಿಯೊಬ್ಬರು ಬಲಿಯಾಗಿದ್ದಾರೆ. ತುಂಡರಿಸಿ ಬಿದ್ದಿದ್ದ ತಂತಿಯನ್ನು ತುಳಿದು ವ್ಯಕ್ತಿಯೊಬ್ಬಯ ಸಾವನ್ನಪ್ಪಿದ್ದಾರೆ.
ಮಳೆಗೆ ಕಾಕ್ಸ್ಟೌನ್ನ ರಾಮಚಂದ್ರಪ್ಪ ಗಾರ್ಡನ್ನಲ್ಲಿ ತೆಂಗಿನ ಮರವೊಂದು ವಿದ್ಯುತ್ ತಂತಿ ಮೇಲೆ ಬಿದ್ದಿತ್ತು, ಮರದ ಭಾರಕ್ಕೆ ತಂತಿ ಕೆಳಕ್ಕೆ ಬಿದ್ದಿತ್ತು, ಅದನ್ನು ಅರಿಯದ ಸ್ಥಳೀಯ ನಿವಾಸಿ ಸತೀಶ್ (35) ವಿದ್ಯುತ್ ಪ್ರವಹಿಸುತ್ತಿದ್ದ ತಂತಿ ತುಳಿದಿದ್ದಾರೆ. ಅದರಿಂದ ಶಾಕ್ ಹೊಡೆದು ಸತೀಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಇನ್ನು ಎರಡು -ಮೂರು ದಿನ ಮಳೆ, ಬೆಂಗಳೂರಿಗರಿಗೆ ಎಚ್ಚರ! ಎಚ್ಚರ!
ಈ ವರ್ಷದ ಮಳೆಗೆ ನಾಲ್ವರು ಸಾವನ್ನಪ್ಪಿದ್ದಾರೆ. ಏ.17ರಂದು ಹೆಬ್ಬಾಳದ ಲುಂಬಿನಿ ಗಾರ್ಡನ್ ಬಳಿ ಬೈಕ್ ಮೇಲೆ ತೆರಳುತ್ತಿದ್ದ ಕಿರಣ್ ತಲೆ ಮೇಲೆ ಮರದ ಕೊಂಬೆ ಬಿದ್ದು, ಸ್ಥಳದಲ್ಲೇ ಸಾವಿಗೀಡಾಗಿದ್ದರು. ಅದಾದ ನಂತರ ಏ.30 ರಂದು ಗರುಡಾಚಾರ್ ಪಾಳ್ಯ ವಾರ್ಡ್ ನಲ್ಲಿನ ಗೋಶಾಲೆ ಗೋಡೆ ಕುಸಿದು ಪಾದಚಾರಿ ಶಿವಕೈಲಾಸ ರೆಡ್ಡಿ ಮೃತಪಟ್ಟಿದ್ದರು.
ಶನಿವಾರ ಮತ್ತು ಭಾನುವಾರ ಆರ್ಭಟಿಸಿದ ಮುಂಗಾರು ಪೂರ್ವ ಮಳೆಗೆ ಬೆಂಗಳೂರು ತತ್ತರಿಸಿದೆ. ಶನಿವಾರ ಒಂದೇ ದಿನ 56 ಮರ ಬಿದ್ದರೆ ಭಾನುವಾರ 18 ಕ್ಕೂ ಹೆಚ್ಚು ಮರಗಳು ಧರೆಗುರುಳಿವೆ. 600 ಕ್ಕೂ ಅಧಿಕ ಕೊಂಬೆಗಳು ಬಿದ್ದಿವೆ. ಅದರ ಜತೆಗೆ ತುಂಡರಿಸಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.
ಬೆಂಗಳೂರಲ್ಲಿ ಭಾರಿ ಮಳೆ, ಗಾಳಿ : ಧರೆಗುರುಳಿದ ಮರಗಳು
ಗಾಳಿ ಒತ್ತಡ ಕಡಿಮೆ ಮತ್ತು ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಾದ ಪರಿಣಾಮ ಶನಿವಾರ ರಾತ್ರಿ ಗಾಳಿ ಸಹಿತ ಭಾರಿ ಮಳೆಯಾಗಿದೆ. ಬಿಬಿಎಂಪಿ ಸಿಬ್ಬಂದಿ ರಾತ್ರಿಯಿಡೀ ಮರ ಮತ್ತು ಕೊಂಬೆ ತೆರವು ಕಾರ್ಯಾಚರಣೆಯಲ್ಲಿ ತೊಡಗಿದ್ದರು. ಭಾನುವಾರ 44 ಮರ ಮತ್ತು 359 ಕೊಂಬೆಗಳನ್ನು ತೆರವುಗೊಳಿಸಲಾಗಿದೆ.
ಮೃತ ಸತೀಶ್ ಮನೆಗೆ ಮೇಯರ್ ಗಂಗಾಂಬಿಕೆ ಮತ್ತು ಅಧಿಕಾರಿಗಳು ಭಾನುವಾರ ಭೇಟಿ ನೀಡಿ ಕುಟುಂಬದ ವರಿಗೆ ಸಾಂತ್ವನ ಹೇಳಿದರು. ಜತೆಗೆ ಬಿಬಿಎಂಪಿಯಿಂದ ಮೃತರ ಕುಟುಂಬದವರಿಗೆ 5 ಲಕ್ಷ ರೂ. ಪರಿಹಾರ ನೀಡುವುದಾಗಿ ತಿಳಿಸಿದ್ದಾರೆ.