Breaking: ವಿಧಾನಪರಿಷತ್ತಿನಲ್ಲಿ 'ಪೇಸಿಎಂ' ಪೊಸ್ಟರ್ ಗದ್ದಲ: ಪ್ರತಿಭಟನೆ, ಹೈಡ್ರಾಮಾ
ಬೆಂಗಳೂರು, ಸೆಪ್ಟಂಬರ್ 22: 'ಪೇಸಿಎಂ' ಪೋಸ್ಟರ್ ವಿಚಾರ ಬುಧವಾರ ವಿಧಾನ ಪರಿಷತ್ನಲ್ಲೂ ಸಾಕಷ್ಟು ಸದ್ದು ಮಾಡಿತು. ಬಿಜೆಪಿ ಸದಸ್ಯರಿಂದ ತೀವ್ರ ಆಕ್ರೋಶಕ್ಕೆ ಗುರಿಯಾದ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟಿಸಿ ಹೈಡ್ರಾಮ ಸೃಷ್ಟಿಸಿದರು.
ಎಂದಿನಂತೆ ಬೆಳಗ್ಗೆ ವಿಧಾನ ಪರಿಷತ್ ಕಾರ್ಯಕಲಾಪ ಆರಂಭವಾಯಿತು. ತದನಂತರ ಪ್ರಸ್ತಾಪವಾದ ಭ್ರಷ್ಟಾಚಾರ ಹಾಗೂ ಪೇಸಿಎಂ ಪೋಸ್ಟರ್ ಅಳವಡಿಕೆ ಸಂಬಂಧ ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದರು. ಪ್ರಕರಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಇದು ಖಂಡನಿಯ ಎಂದು ಕಾಂಗ್ರೆಸ್ ಸದಸ್ಯರು ದೂರಿದರು.
ಎಲ್ಲಾ ಶಾಸಕರು ಸೇರಿ 'ಪೇಸಿಎಂ' ಪೋಸ್ಟರ್ ಸರ್ಕಾರಿ ಕಚೇರಿಗಳಲ್ಲಿ ಅಂಟಿಸುತ್ತೇವೆ: ಡಿ.ಕೆ. ಶಿವಕುಮಾರ್
ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ನೇತೃತ್ವದಲ್ಲಿ ಪರಿಷತ್ತಿನ ಸದಸ್ಯ ಪ್ರಕಾಶ್ ರಾಥೋಡ್ ಸೇರಿದಂತೆ ಕಾಂಗ್ರೆಸ್ ಸದಸ್ಯರು ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸಿದರು. ಪೊಲೀಸರು ಪೋಸ್ಟರ್ ಪ್ರಕರಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸಿರುವುದನ್ನು ಖಂಡಿಸಿದರು. ಈ ವೇಳೆ ವಿಧಾನಪರಿಷತ್ ಸದಸ್ಯ ಪ್ರಕಾಶ್ ರಾಥೋಡ್ ಅವರು ಕಲಾಪದಲ್ಲಿ ಕುರ್ಚಿ ಮೇಲೆ ಹತ್ತಿನಿಂತು ಕೂಗಾಡಿದರು. ಸಭಾಪತಿಗಳ ವಿರುದ್ಧ ಕಾಂಗ್ರೆಸ್ ಸದಸ್ಯರು ಘೋಷಣೆ ಕೂಗಿದರು. ಕೆಲ ಹೊತ್ತು ವಿಧಾನಪರಿಷತ್ತಿನ ಕಲಾಪದಲ್ಲಿ ಹೈಡ್ರಾಮವೇ ನಡೆದು ಹೋಯಿತು.
ಇತ್ತ 'ಪೇಸಿಎಂ' ಪೋಸ್ಟರ್ ಕಾಂಗ್ರೆಸ್ನ ಭ್ರಷ್ಟಾಚಾರ ಅಭಿಯಾನಕ್ಕೆ ಗರಂ ಆಗಿದ್ದ ಬಿಜೆಪಿ ಸದಸ್ಯರು ಭ್ರಷ್ಟರಾಮಯ್ಯ, ಗಜನಿ ಎಂದೆಲ್ಲ ಪೊಸ್ಟರ್ಗಳನ್ನು ಪ್ರದರ್ಶಿಸಿದರು. ಕಾಂಗ್ರೆಸ್ ಅವಧಿಯಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿದೆ. ರಾಜ್ಯದ ಆಡಳಿತ ನಡೆಸುವ ಮುಖ್ಯಮಂತ್ರಿಗಳಿಗೆ ಅಪಮಾನ ಮಾಡುವುದು ಖಂಡನೀಯ. ಜನಪ್ರತಿನಿಧಿಗಳಾಗಿ ಈ ರೀತಿಯ ವರ್ತನೆ ಸರಿಯೇ ಎಂದು ಪ್ರಶ್ನಿಸಿದರು. 'ಪೇಸಿಎಂ' ಪೋಸ್ಟರ್ ಕುರಿತು ಆಡಳಿತ ಪಕ್ಷ ಬಿಜೆಪಿ ಹಾಗೂ ಪ್ರತಿ ಪಕ್ಷ ಕಾಂಗ್ರೆಸ್ ಮಧ್ಯದ ಸಂಘರ್ಷ ಮಧ್ಯಾಹ್ನದ ವರೆಗೂ ಮುಂದುವರಿಯಿತು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಚಿತ್ರ ಹೋಲುವ ಕ್ಯೂಆರ್ ಕೋಡ್ ಮಾಡಿ ಅದರ ಮೇಲೆ ಪೇಸಿಎಂ ಎಂದು ಬರೆದು ನಗರದಲ್ಲಿ ಅಂಟಿಸಲಾಗಿತ್ತು. ಈ ಮೂಲಕ ಬಿಜೆಪಿ ಸರ್ಕಾರ 40ಪರ್ಸೆಂಟ್ ಸರ್ಕಾರ ಎಂದಿದ್ದ ಕಾಂಗ್ರೆಸ್ ಬಿಜೆಪಿ ವಿರುದ್ಧ ಭ್ರಷ್ಟಾಚಾರ ಅಭಿಯಾನ ಆರಂಭಿಸಿದೆ. ನನ್ನ ಹಾಗೂ ಕರ್ನಾಟಕ ರಾಜ್ಯಕ್ಕೆ ಅಪಮಾನ ಮಾಡಲು ಕಾಂಗ್ರೆಸ್ ಹೀಗೆ ಮಾಡಿದೆ. ಮಾಧ್ಯಮಗಳೆದರು ಸುಳ್ಳು ಆರೋಪ ಮಾಡುವುದು ಸರಿಯಲ್ಲ. ಸತ್ಯ ಜನರಿಗೆ ಗೊತ್ತಿಗೆ ಎಂದಿರುವ ಬಸವರಾಜ ಬೊಮ್ಮಾಯಿ ಅವರು ಪ್ರಕರಣದ ಸಮಗ್ರ ತನಿಖೆಗೆ ಸೂಚಿಸಿದ್ದರು. ಅದರಂತೆ ಪೊಲೀಸರು ಕೆಲವು ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸಿದ್ದಾರೆ.