Pay CM ಕ್ಯೂ ಆರ್ ಕೋಡ್ ಸ್ಟಿಕ್ಕರ್- ಬಿಬಿಎಂಪಿ ಮುಖ್ಯ ಆಯುಕ್ತರ ವಿರುದ್ಧ ಸಿಎಂ ಗರಂ
ಬೆಂಗಳೂರು, ಸೆಪ್ಟೆಂಬರ್ 21: ರಾಜಧಾನಿ ಬೆಂಗಳೂರಿನಲ್ಲಿ ಕಾಂಗ್ರೆಸ್ ಪಕ್ಷ 'ಪೇ ಸಿಎಂ' ಎಂಬ ಅಭಿಯಾನವನ್ನು ಮಾಡುತ್ತಿದೆ. ಪೇ ಸಿಎಂ ಎಂಬ ಕ್ಯೂ ಆರ್ ಕೋಡ್ ಸ್ಟಿಕ್ಕರ್ ಅನ್ನು ಬಸ್ ನಿಲ್ದಾಣಗಳು ಸೇರಿದಂತೆ ಹಲವೆಡೆ ಅಂಟಿಸಲಾಗಿದೆ. ಇದರಿಂದ ಸಿಎಂ ಬೊಮ್ಮಾಯಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ಗೆ ಕರೆಮಾಡಿ ಸ್ಟಿಕ್ಕರ್ ಅಂಟಿಸಲು ಅನುಮತಿ ನೀಡಿದ್ದು ಯಾರು ಎಂದು ಕೆಂಡಾಮಂಡಲರಾಗಿದ್ದಾರೆ.
40 ಪರ್ಸೆಂಟ್ ಕಮಿಷನ್ ವಿಚಾರದಲ್ಲಿ ಬಿಜೆಪಿ ವಿರುದ್ಧ ಕರ್ನಾಟಕ ಕಾಂಗ್ರೆಸ್ ಪ್ರಚಾರ ಆರಂಭಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ರಾಜ್ಯ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಅಭಿಯಾನ ಆರಂಭಿದೆ. ಅಭಿಯಾನಕ್ಕಾಗಿ '40 ಪರ್ಸೆಂಟ್ ಸರ್ಕಾರ, ಬಿಜೆಪಿ ಎಂದರೆ ಭ್ರಷ್ಟಾಚಾರ' ಹೆಸರಿನಲ್ಲಿ ಕಾಂಗ್ರೆಸ್ ವಿಶೇಷ ಹಾಡನ್ನು ಬಿಡುಗಡೆ ಮಾಡಲಾಗಿದೆ.
PayCM Campaign : ಬೆಂಗಳೂರಿನಲ್ಲಿ 'ಪೇ ಸಿಎಂ' ಭಿತ್ತಿಪತ್ರ ಮತ್ತು ಕ್ಯೂ ಆರ್ ಕೋಡ್ ಅಂಟಿಸಿ ಕಾಂಗ್ರೆಸ್ ಪ್ರತಿಭಟನೆ
ಕಾಂಗ್ರೆಸ್ ಮತ್ತೊಂದು ವಿಶಿಷ್ಟ ಅಭಿಯಾನವನ್ನು ಮಾಡುತ್ತಿದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಕೆರಳುವಂತೆ ಮಾಡಿದೆ. ಬಸವರಾಜ ಬೊಮ್ಮಾಯಿಯನ್ನು ಹೋಲುವ ಕ್ಯೂಆರ್ ಕೋಡ್ನ ಚಿತ್ರವನ್ನು ಬೆಂಗಳೂರಿನಲ್ಲಿ ಅಂಟಿಸಿ ಪ್ರತಿಭಟನೆ ನಡೆಸಿದೆ. ಈ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದರೇ ಕಾಂಗ್ರೆಸ್ನ '40 ಪಸೆಂಟ್ ಸರ್ಕಾರ' ವೆಬ್ಸೈಟ್ಗೆ ಹೋಗಲಿದೆ. ಈ ಪೋಸ್ಟ್ಗಳನ್ನು ಅಂಟಿಸಿರುವುದು ತಮ್ಮ ಗಮನಕ್ಕೆ ಬಂದಿಲ್ಲವೇ ಎಂದು ಸಿಎಂ ಬಿಬಿಎಂಪಿ ಆಯುಕ್ತರ ಮೇಲೆ ಹರಿಹಾಯ್ದಿದ್ದಾರೆ.
ಬಿಬಿಎಂಪಿಯಿಂದ ಪೋಸ್ಟರ್ ತೆರವು
ಕಾಂಗ್ರೆಸ್ ಪಕ್ಷ ತನ್ನ ವಿಶಿಷ್ಟ ಪ್ರತಿಭಟನೆಯಿಂದ ಬೆಂಗಳೂರಿನಾದ್ಯಂತ pay cm ಎಂಬ ಕ್ಯೂ ಆರ್ ಕೋಟ್ ಮಾದರಿಯ ಪೋಸ್ಟರ್ ಹಾಕಿದ್ದರು. ಈ ವಿಚಾರ ಸಿಎಂ ಗಮನಕ್ಕೆ ಬರುತ್ತಿದ್ದಂತೆ ಸಿಎ ಬಿಬಿಎಂಪಿಯ ಮುಖ್ಯ ಆಯುಕ್ತರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬೆಂಗಳೂರಿನಲ್ಲಿ ಪೋಸ್ಟರ್ ಅಂಟಿಸಲು ಅನುಮತಿಯನ್ನು ನೀಡಿದ್ದು ಯಾರು? ತಮ್ಮ ಗಮನಕ್ಕೆ ಬಾರದಂತೆ ಪೋಸ್ಟರ್ ಹಾಕಲಾಗಿದೆಯೇ ಎಂದು ಪ್ರಶ್ನಿಸಿದ್ದಾರೆ. ಮುಖ್ಯ ಆಯುಕ್ತರು ತಮ್ಮ ಗಮನಕ್ಕೆ ಬಾರದೇ ನಡೆದ ಅಚಾತುರ್ಯ ಎಂಜು ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ. ಇದರಿಂದ ಬಿಬಿಎಂಪಿ ಮುಖ್ಯ ಆಯುಕ್ತರು ತಮ್ಮ ಸಿಬ್ಬಂದಿಗೆ ಹೇಳಿ ಪೋಸ್ಟರ್ ಗಳನ್ನು ತೆರೆವುಗೊಳಿಸಿದ್ದಾರೆ.
ಸಿಎಂ ಬೊಮ್ಮಾಯಿ ಮುಖಚಹರೆಯಿರುವ ಕ್ಯೂ ಆರ್ ಕೋಡ್
ಕಾಂಗ್ರೆಸ್ ರಸ್ತೆ ರಸ್ತೆಗಳಲ್ಲಿ ಅಂಟಿಸಿರುವ ಪೇ ಸಿಎಂ ಕ್ಯೂರ್ ಕೋಡ್ ಬಳ ವಿಶಿಷ್ಟವಾಗಿದೆ. ಕಾಂಗ್ರೆಸ್ನ ಈ ಅಭಿಯಾನದಿಂದ ಸರ್ಕಾರ ಮತ್ತು ಬಿಜೆಪಿಗೆ ಬಹಳ ಮುಜುಗರ ಉಂಟಾಗಿದೆ. ಸಿಎಂ ಬೊಮ್ಮಾಯಿ ಮುಖಚಹರೆಯಿರುವ ಕ್ಯೂ ಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿದರೇ 40 ಪಸೆಂಟ್ ಸರ್ಕಾರ' ವೆಬ್ಸೈಟ್ ರಾಜ್ಯದ ಭ್ರಷ್ಟ ಅಧಿಕಾರಿಗಳ ವಿರುದ್ಧ ದೂರುಗಳನ್ನು ಸ್ವೀಕರಿಸಲು ಸ್ಥಾಪಿಸಲಾಗಿದೆ ಎಂದು ತೋರಿಸುತ್ತದೆ. ನಗರದಲ್ಲಿ ಅಂಟಿಸಲಾಗಿರುವ ಪೋಸ್ಟರ್ಗಳ ಬಗ್ಗೆ ಕಾಂಗ್ರೆಸ್ ಅಧಿಕೃತವಾಗಿ ಹೇಳಿಕೆ ನೀಡಿಲ್ಲ. ಆದರೆ, ಕ್ಯೂಆರ್ ಕೋಡ್ ಸ್ಕ್ಯಾನ್ ವೆಬ್ಸೈಟ್ಗೆ ಹೋಗುವ ಕಾರಣ ಕಾಂಗ್ರೆಸ್ನ ಅಭಿಯಾನವೇ ಎಂದು ಹೇಳಲಾಗುತ್ತಿದೆ.
ಭ್ರಷ್ಟಾಚಾರದ ಬಗ್ಗೆ ಯುಜನತೆಯ ವಿಡಿಯೋ ಸರಣಿ
ಕರ್ನಾಟಕ ಕಾಂಗ್ರೆಸ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ನಲ್ಲಿ ಸಾಲು ಸಾಲು ವಿಡಿಯೋಗಳನ್ನು ಹಂಚಿಕೊಳ್ಳಲಾಗುತ್ತಿದೆ. ಯುವಜನತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡುವ, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುವ ವಿಡಿಯೋಗಳನ್ನು ಹಂಚಿಕೊಂಡಿದೆ.
"ದುಡಿದು ಬದುಕು ಕಟ್ಟಿಕೊಳ್ಳುವ ವಯಸ್ಸಿನಲ್ಲಿ ಯುವಸಮುದಾಯ ಒಪ್ಪೊತ್ತಿನ ಊಟಕ್ಕಾಗಿ ಪರದಾಡುತ್ತಿರುವುದು ಶೋಚನೀಯ. ಅಭ್ಯರ್ಥಿಗಳು "ಮೂರು ನಾಲ್ಕು ಅನ್ನ ಹಾಕು" ಎಂಬ ಉಚಿತ ಊಟಕ್ಕೆ ವಾಟ್ಸಾಪ್ ಗ್ರೂಪ್ ಮಾಡಿಕೊಂಡಿದ್ದಾರೆ. ಆದರೆ '40 ಪಸೆಂಟ್ ಸರ್ಕಾರ' "ಐದು ಆರು ಲಂಚ ತಾರೋ" ಎನ್ನುತ್ತಿದೆ! ಈ ಅಭ್ಯರ್ಥಿಗಳಿಗೆ ಉತ್ತರವೇನು ಬಸವರಾಜ ಬೊಮ್ಮಾಯಿ ಅವರೇ?" ಎಂದು ಪ್ರಶ್ನಿಸಿದೆ.
ಸಿಎಂ ತೆರಳಿದ ಕಡೆಗಳಲ್ಲಿ 40% ಹಾವಳಿ
ಬಿಬಿಎಂಪಿ ಸೇರಿದಂತೆ ಸರ್ಕಾರದ ವಲಯದಲ್ಲಿ ಕೆಲಸವಾಗಬೇಕಾದರೆ 40% ಲಂಚವನ್ನು ನೀಡಬೇಕು ಎಂಬ ವಿಚಾರದಲ್ಲಿ ಆರೋಪ ಪ್ರತ್ಯಾರೋಪಗಳು ಕೇಳಿಬರುತ್ತಿದೆ. ಆದರೆ ಸಿಎಂ ಬಸವರಾಜ ಬೊಮ್ಮಾಯಿ ಹೋಗುವ ಎಲ್ಲೆಡೆ 40 % ಭೂತ ಸುತ್ತಿಕೊಳ್ಳುತ್ತಿದ್ದು, ಕಾಂಗ್ರೆಸ್ ನೆರೆಯ ರಾಜ್ಯಗಳಲ್ಲು ಪ್ರತಿಭಟಿಸುತ್ತಿದೆ. ಇದರಿಂದಾಗಿ ಸಿಎಂಗೆ ಭಾರಿ ಮುಜುಗರ ಉಂಟಾಗುವಂತೆಯಾಗಿದೆ. ಉರಿವ ಬೆಂಕಿಗೆ ತುಪ್ಪ ಸುರಿದಂತೆ ಕಾಂಗ್ರೆಸ್ ಕ್ಯೂರ್ ಆರ್ ಕೋಡ್ನ ಅಭಿಯಾನ ಸಿಎಂಗೆ ಆಕ್ರೋಶಗೊಳ್ಳುವಂತೆ ಮಾಡಿದೆ.