4ನೇ ಹಂತದ ಕ್ಯಾನ್ಸರಿನಿಂದ 4 ವರ್ಷದ ಮಗುವಿಗೆ ಮುಕ್ತಿ
Recommended Video
ಬೆಂಗಳೂರು , ಜನವರಿ 17: ನಾಲ್ಕನೇ ಹಂತದ ಕ್ಯಾನ್ಸರ್ ನಿಂದ ಬಳಲುವ ರೋಗಿಗಳು ಗುಣಮುಖರಾಗುವ ಸಾಧ್ಯತೆಯೇ ಕಡಿಮೆ. ಇಷ್ಟು ಮಾತ್ರವಲ್ಲದೇ ಕೆಲ ನಿರ್ದಿಷ್ಟ ವೈದ್ಯಕೀಯ ವಿಧಾನಗಳಿಗೆ ಅನುಮೋದನೆ ನೀಡಲು ನಿಮ್ಮ ನಂಬಿಕೆಗಳು ಅಡ್ಡಬಂದರೆ, ಅಂಥ ರೋಗಿಗಳು ಗುಣಮುಖರಾಗುವುದು ಮತ್ತಷ್ಟು ಕಷ್ಟಕರ. ತಾಂಜಾನಿಯಾದ ಮಾಸ್ಟರ್ ಇತ್ತಾಯಿ ಜೇಮ್ಸ್ ಮೊಶಿ ಪ್ರಕರಣ ಇಂಥದ್ದು.
ನಾಲ್ಕನೇ ಹಂತದ ಕ್ಯಾನ್ಸರ್ನಿಂದ (ನ್ಯೂರೊಬ್ಲಾಸ್ಟಮಾ) ಬಳಲುತ್ತಿದ್ದ ಈತನಿಗೆ ನಾರಾಯಣ ಹೆಲ್ತ್ ಸಿಟಿಯ ಮಕ್ಕಳ ಹೆಮಟಾಲಜಿ ಮತ್ತು ಗ್ರಂಥಿ ವಿಭಾಗ ಯಶಸ್ವಿಯಾಗಿ ಚಿಕಿತ್ಸೆ ನೀಡಿದೆ. ಈ ಮಗುವನ್ನು ರಕ್ತರಹಿತ ಅಸ್ಥಿಮಜ್ಜೆ ಕಸಿ ವಿಧಾನದ ಮೂಲಕ ರಕ್ಷಿಸಲಾಗಿದೆ. ಈ ಪ್ರಕರಣವು ನಾರಾಯಣ ಹೆಲ್ತ್ ಸಿಟಿಗೆ ರಕ್ತರಹಿತ ಮಕ್ಕಳ ಅಸ್ಥಿಮಜ್ಜೆ ಕಸಿಯನ್ನು ಯಶಸ್ವಿಯಾಗಿ ನಿರ್ವಹಿಸಿದ ಕರ್ನಾಟಕದ ಮೊಟ್ಟಮೊದಲ ಆಸ್ಪತ್ರೆ ಎಂಬ ಹೆಗ್ಗಳಿಕೆಯನ್ನು ತಂದುಕೊಟ್ಟಿದೆ.
ಆಂಧ್ರದ ವ್ಯಕ್ತಿಗೆ ಮರು ಜೀವ ನೀಡಿದ ಹಾಸನದ ವ್ಯಕ್ತಿಯ ಹೃದಯ
ತಾಂಜಾನಿಯಾ ಮೂಲದ ಮಾಸ್ಟರ್ ಇತ್ತಯಿ ಜೇಮ್ಸ್ ಮೊಶಿ ನ್ಯೂರೊಬ್ಲಾಸ್ಟೊಮಾ ಎಂಬ ವಿಶಿಷ್ಟ ಬಗೆಯ ಕ್ಯಾನ್ಸರ್ನಿಂದ ಬಳಲುತ್ತಿದ್ದ. ಹೊಟ್ಟೆಯ ಭಾಗದ ಮೇಧೋಜೀರಕ ಗ್ರಂಥಿಯಲ್ಲಿ ಈ ಸಮಸ್ಯೆ ಕಾಣಿಸಿಕೊಂಡು ನಾಲ್ಕನೇ ಹಂತದ ಕ್ಯಾನ್ಸರ್ ಆಗಿ ಪರಿವರ್ತನೆಯಾಗಿತ್ತು. ಮಗು ಹಾಗೂ ಕುಟುಂಬ ಜೆಹೋವನ ಸಾಕ್ಷಿಯ ಅನುಯಾಯಿಗಳಾಗಿರುವುದರಿಂದ ರಕ್ತದ ಮರುಪೂರಣಕ್ಕೆ ಮನಸ್ಸು ಹೊಂದಿರಲಿಲ್ಲ. ವಾಸ್ತವವಾಗಿ ಇದು ಅಸ್ಥಿಮಜ್ಜೆ ಕಸಿಯ ಪ್ರಮುಖ ಆಯಾಮವಾಗಿದೆ. ಈ ಪ್ರಕರಣದ ಸಂಕೀರ್ಣತೆಯ ಹಿನ್ನೆಲೆಯಲ್ಲಿ, ಆತ ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಯಿಂದ ಮಗುವನ್ನು ನಾರಾಯಣ ಹೆಲ್ತಿಸಿಟಿಗೆ ಚಿಕಿತ್ಸೆಗಾಗಿ ಕರೆ ತರಲಾಯಿತು.
ಡಾ.ಸುನಿಲ್ ಭಟ್ ನೇತೃತ್ವದ ತಂಡ
ಡಾ.ಸುನಿಲ್ ಭಟ್ ನೇತೃತ್ವದ ಹೆಮಟಾಲಜಿ ಮತ್ತು ಗಂಥಿಶಾಸ್ತ್ರ ತಜ್ಞರ ತಂಡ, ವಿಸ್ತೃತವಾದ ತಪಾಸಣೆಗಳನ್ನು ನಡೆಸಿ, ಆಟೊಲೋಗಸ್ ಅಸ್ಥಿಮಜ್ಜೆ ಕಸಿಗೆ ಸಲಹೆ ಮಾಡಿತು. ಅಟೊಲೊಗಸ್ ಅಸ್ಥಿಮಜ್ಜೆ ಕಸಿಯಲ್ಲಿ ರೋಗಿಯ ದೇಹದ ಆರೋಗ್ಯಕರ ರಕ್ತಕೋಶದ ಕಣಗಳನ್ನು ಹೊರತೆಗೆದು, ಅತ್ಯಧಿಕ ಪ್ರಮಾಣದ ಕಿಮೋಥೆರಪಿ ಬಳಿಕ ಮತ್ತೆ ರೋಗಿಗೆ ನೀಡಲಾಗುತ್ತದೆ. ರೋಗಿಯ ಆರೋಗ್ಯ ಮೌಲ್ಯಮಾಪನ ನಡೆಸಿದ ಬಳಿಕ ನಾರಾಯಣ ಹೆಲ್ತ್ ಸಿಟಿಯ ತಜ್ಞರು, ಮಗುವಿಗೆ ಚಿಕಿತ್ಸೆ ನೀಡಲು ವಿಸ್ತೃತವಾದ ಕಾರ್ಯಯೋಜನೆಯನ್ನು ರೂಪಿಸಿದರು.
5-6 ಬಾಟಲಿ ರಕ್ತ ಪೂರಣ ಅಗತ್ಯ
ಸಾಮಾನ್ಯವಾಗಿ ರೋಗಿಯ ಅಸ್ಥಿಮಜ್ಜೆ ಕಸಿಗೆ ಕನಿಷ್ಠ 5-6 ಬಾಟಲಿ ರಕ್ತ ಪೂರಣ ಅಗತ್ಯವಾಗುತ್ತದೆ ಹಾಗೂ ಅಷ್ಟೇ ಪ್ರಮಾಣದ ರಕ್ತ ರಕ್ತಕಣಗಳು ಪೂರಣಕ್ಕೆ ಬೇಕಾಗುತ್ತದೆ. ಆದರೆ ಈ ಪ್ರಕರಣದಲ್ಲಿ ಯಾವುದೇ ಮರುಪೂರಣ ಇಲ್ಲದೇ ಅಸ್ಥಿಮಜ್ಜೆ ಕಸಿ ನೆರವೇರಿಸಲಾಗಿದೆ. ಆದರೆ ರೋಗಿಯ ಹಾಗೂ ರೋಗಿಯ ಪೋಷಕರ ಧಾರ್ಮಿಕ ಭಾವನೆಗಳನ್ನು ಗೌರವಿಸಿ, ಮೂರು ವಾರ ಮುಂಚಿತವಾಗಿಯೇ ಆತನಿಗೆ ಸೂಕ್ತ ಔಷಧಿ ನೀಡಲು ಆರಂಭಿಸುವ ಮೂಲಕ ಭಿನ್ನ ಚಿಕಿತ್ಸೆಯನ್ನು ನೀಡುವ ಕಾರ್ಯಯೋಜನೆಯನ್ನು ಹಾಕಿಕೊಂಡರು.
ಇದರ ಅನ್ವಯ ಆತನ ರಕ್ತದ ಮಟ್ಟವನ್ನು ಹೆಚ್ಚಿಸಲು ನೆರವಾಗುವ ಔಷಧಿಯನ್ನು ನೀಡಲಾಯಿತು. ರಕ್ತ ಈ ಚಿಕಿತ್ಸೆಗೆ ಧನಾತ್ಮಕವಾಗಿ ಸ್ಪಂದಿಸಲು ಆರಂಭಿಸಿದ ಬಳಿಕ ಮತ್ತು ರೋಗಿಯ ರಕ್ತದ ಮಟ್ಟ ಗರಿಷ್ಠ ಪ್ರಮಾಣವನ್ನು ತಲುಪಿದ ಮೇಲೆ ಈ ಚಿಕಿತ್ಸಾ ವಿಧಾನಕ್ಕೆ ಮುಂದಾದರು. ಮೊಟ್ಟಮೊದಲನೆಯದಾಗಿ, ಶಸ್ತ್ರಚಿಕಿತ್ಸೆ ಮೂಲಕ ಅವರು ಕ್ಯಾನ್ಸರ್ಕಾರಕ ಟ್ಯೂಮರ್ಗಳನ್ನು ಹೊರತೆಗೆದರು. ಈ ಶಸ್ತ್ರಚಿಕಿತ್ಸೆ ಬಳಿಕ ಅಸ್ಥಿಮಜ್ಜೆ ಕಸಿ ನೆರವೇರಿಸಲಾಯಿತು.
ಹೆಲ್ತ್ ಸಿಟಿಯ ಮಜೂಂದರ್ ಶಾ
ಈ ಪ್ರಕರಣದ ಬಗ್ಗೆ ವಿವರ ನೀಡಿದ ನಾರಾಯಣ ಹೆಲ್ತ್ ಸಿಟಿಯ ಮಜೂಂದರ್ ಶಾ ಕ್ಯಾನ್ಸರ್ ಕೇಂದ್ರದ ಮಕ್ಕಳ ಗಂಥಿಶಾಸ್ತ್ರ, ಹೆಮಟಾಲಜಿ ಮತ್ತು ಅಸ್ಥಿಮಜ್ಜೆ ಕಸಿ ತಜ್ಞ ಹಾಗೂ ಕ್ಲಿನಿಕಲ್ ಮುಖ್ಯಸ್ಥ ಡಾ.ಸುನಿಲ್ ಭಟ್, "ಸಾಮಾನ್ಯವಾಗಿ ಅಸ್ಥಿಮಜ್ಜೆ ಕಸಿ ಎನ್ನುವುದು ಸಂಕೀರ್ಣ ಪ್ರಕ್ರಿಯೆ. ಮಾಸ್ಟರ್ ಇತ್ತಾಯಿ ಜೇಮ್ಸ್ ಮೊಶಿ ಪ್ರಕರಣವು ಅತ್ಯಂತ ಅಪಾಯ ಸಾಧ್ಯತೆಯ ಪ್ರಕರಣವಾಗಿತ್ತು. ಏಕೆಂದರೆ ಆತನಿಗೆ ಸಂಗ್ರಹಿಸಲಾದ ರಕ್ತದ ಉತ್ಪನ್ನಗಳನ್ನು ಬಳಸುವಂತಿರಲಿಲ್ಲ".
ರಕ್ತದ ಉತ್ಪಾದನೆ ಗರಿಷ್ಠ ಪ್ರಮಾಣ
ಆತನ ಚಿಕಿತ್ಸೆಗೆ ಅಗತ್ಯ ರಕ್ತವನ್ನು ಪಡೆಯಲು ಆತನ ದೇಹವನ್ನೇ ಅಲವಂಬಿಸಬೇಕಾದ ಸ್ಥಿತಿ ಇತ್ತು. ವಾಸ್ತವವಾಗಿ ಔಷಧ ನೀಡಿಕೆಯ ಹೊರತಾಗಿಯೂ, ಹಲವು ಬಾರಿ ರಕ್ತದ ಉತ್ಪಾದನೆ ಗರಿಷ್ಠ ಪ್ರಮಾಣವನ್ನು ತಲುಪಿರಲಿಲ್ಲ. ಇಷ್ಟು ಮಾತ್ರವಲ್ಲದೇ, ರಕ್ತದ ಕಣಗಳ ಕನಿಷ್ಠ ಉತ್ಪಾದನೆಯ ಹಿನ್ನೆಲೆಯಲ್ಲಿ, ಅಧಿಕ ಪ್ರಮಾಣದ ರಕ್ತಸ್ರಾವವಾಗುವ ಅಪಾಯ ಇತ್ತು. ಇದು ಮಗುವಿನ ಅಸ್ತಿತ್ವಕ್ಕೇ ಸಂಚಕಾರ ತರುವ ಸಾಧ್ಯತೆ ಇತ್ತು. ರಕ್ತದ ಬೆಂಬಲವಿಲ್ಲದೇ ಅಸ್ಥಿಮಜ್ಜೆ ಕಸಿಯ ಯಶಸ್ಸಿನ ದರ ತೀರಾ ಕಡಿಮೆ ಹಾಗೂ ಹಲವು ಮಂದಿ ವೈದ್ಯರು ಈ ಪ್ರಯತ್ನವನ್ನೂ ಮಾಡುವುದಿಲ್ಲ. ಆದಾಗ್ಯೂ ನಮ್ಮ ತಜ್ಞರ ತಂಡದ ನೆರವಿನೊಂದಿಗೆ, ನಾವು ಈ ಪ್ರಕರಣದಲ್ಲಿ ಅಸ್ಥಿಮಜ್ಜೆ ಕಸಿಯನ್ನು ಯಶಸ್ವಿಯಾಗಿ ನಿರ್ವಹಿಸುವುದು ಸಾಧ್ಯವಾಯಿತು" ಎಂದು ಹೇಳಿದರು.
ಕೇವಲ 4-6 ವಾರಗಳ ಅವಧಿಯಲ್ಲಿ ಮಗುವಿನ ದೇಹ ಚೇತರಿಸಿಕೊಂಡಿದ್ದು, ಇದೀಗ ಮಗುವನ್ನು ಬಿಡುಗಡೆ ಮಾಡಲಾಗಿದೆ. ಇದೀಗ ಮಗುವಿನ ಅನುಸರಣೆ ಕಾರ್ಯ ಮುಂದುವರಿದಿದೆ.
ಮಗುವಿನ ಪುನಶ್ಚೇತನದ ಬಗ್ಗೆ ಸಂತಸ
ಮಗುವಿನ ಪುನಶ್ಚೇತನದ ಬಗ್ಗೆ ಸಂತಸ ವ್ಯಕ್ತಪಡಿಸಿದ ಜೇಮ್ಸ್ ಮೊಶಿ, "ನಾವು ಎಲ್ಲ ಆಸೆಯನ್ನು ಕೈಬಿಟ್ಟಿದ್ದೆವು. ನಾವು ವಾಪಾಸು ಹೋಗುವ ಯೋಚನೆ ಮಾಡಿದ್ದೆವು. ಡಾ. ಸುನಿಲ್ ಭಟ್ ಮತ್ತು ಅವರ ತಂಡದ ವಿಶ್ವಾಸ ನಮ್ಮಲ್ಲಿ ಧನಾತ್ಮಕ ಭಾವನೆ ಮೂಡಲು ಕಾರಣವಾಯಿತು. ಅವರ ಪ್ರಾಮಾಣಿಕತೆಯನ್ನು ನಾವು ನಿಜವಾಗಿಯೂ ಶ್ಲಾಘಿಸುತ್ತೇವೆ. ಆರಂಭದಲ್ಲೇ ಅವರು ಈ ವಿಧಾನದ ಸಂಕೀರ್ಣತೆಯ ಬಗ್ಗೆ ವಿವರ ನೀಡಿದ್ದರು. ಇದರ ಜತೆಗೆ ಅವರು ತಾಳ್ಮೆಯಿಂದ ಭಾವನಾತ್ಮಕವಾಗಿ ನಮ್ಮ ಕಷ್ಟದ ಸಮಯದಲ್ಲಿ ನಮ್ಮೊಂದಿಗೆ ಇದ್ದರು" ಎಂದು ಬಣ್ಣಿಸಿದ್ದಾರೆ.
ನಾರಾಯಣ ಹೆಲ್ತ್ ಸಿಟಿಯ ಮಜೂಂದರ್ ಶಾ ಕ್ಯಾನ್ಸರ್ ಸೆಂಟರ್ ನ ಅಸ್ಥಿಮಜ್ಜೆ ಕಸಿ ಘಟಕವು ವಿಶ್ವಾದ್ಯಂತ ಅಟೋಲೊಗಸ್ ಮತ್ತು ಅಲೋಜನಿಕ್ ರೆಫರಲ್ ಸೆಂಟರ್ ಆಗಿ ಪರಿಗಣಿಸಲ್ಪಟ್ಟಿದೆ. ಈ ಘಟಕವು ಈಗಾಗಲೆ 1200ಕ್ಕೂ ಹೆಚ್ಚು ಅಂಗಾಂಶ ಕಸಿಯನ್ನು ಯಶಸ್ವಿಯಾಗಿ ನಿರ್ವಹಿಸಿದೆ. ಇದರಲ್ಲಿ ಹಾಪ್ಲೋ ಐಡೆಂಟಿಕಲ್ (ಅರೆ ಹೊಂದಾಣಿಕೆಯಾಗುವ) ಹಾಗೂ ಸಂಬಂಧಿತವಲ್ಲದ ಕಸಿ ಪ್ರಕ್ರಿಯೆಯಂಥ ಸಂಕೀರ್ಣ ಕಸಿ ಪ್ರಕ್ರಿಯೆಯೂ ಸೇರಿದೆ.
ಬೆಂಗಳೂರಿನ ನಾರಾಯಣ ಹೆಲ್ತ್ ಸಿಟಿ ಬಗ್ಗೆ
ನಾರಾಯಣ ಹೆಲ್ತ್ ಸಿಟಿ ಬೆಂಗಳೂರಿನ ಬೊಮ್ಮಸಂದ್ರದಲ್ಲಿದ್ದು, ಇದರಲ್ಲಿ ಹೃದ್ರೋಗ ಚಿಕಿತ್ಸೆ ಮತ್ತು ಹೃದ್ರೋಗ ಶಸ್ತ್ರಚಿಕಿತ್ಸೆಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾದ ನಾರಾಯಣ ಹೃದ್ರೋಗ ವಿಜ್ಞಾನ ಕೇಂದ್ರ (ಎನ್ಐಸಿಎಸ್), ಕ್ಯಾನ್ಸರ್ ಚಿಕಿತ್ಸೆ, ನರರೋಗ ಮತ್ತು ನರಶಸ್ತ್ರಚಿಕಿತ್ಸೆ, ಮೂತ್ರಶಾಸ್ತ್ರ, ಮೂತ್ರನಾಳ ಶಾಸ್ತ್ರ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಾದ ಮಜೂಂದರ್ ಶಾ ವೈದ್ಯಕೀಯ ಕೇಂದ್ರ (ಎಂಎಸ್ಎಂಸಿ) ಇದೆ. ಜತೆಗೆ ದೇಶದಲ್ಲೇ ಅತಿದೊಡ್ಡ ಅಸ್ಥಿಮಜ್ಜೆ ಕಸಿ ಕೇಂದ್ರವೂ ಇಲ್ಲಿದೆ. ಎನ್ಎಚ್ ಹೆಲ್ತ್ ಸಿಟಿ ಅಂಗಾಂಶ ಕೋಶ ಬ್ಯಾಂಕನ್ನು ಕೂಡಾ ನಿರ್ವಹಿಸುತ್ತಿದೆ.