ಬೆಂಗಳೂರಲ್ಲಿ ಪ್ರಯಾಣಿಕರ ಪರದಾಟ: ಎಲ್ಲಿ ಹೋಯ್ತು 3,500 BMTC ಬಸ್.?
ಬೆಂಗಳೂರು, ಮೇ 26: ಲಾಕ್ ಡೌನ್ ನಿಯಮಗಳು ಸಡಿಲಗೊಂಡ ಬಳಿಕ ಬೆಂಗಳೂರಿನಲ್ಲಿ ಬಿ.ಎಂ.ಟಿ.ಸಿ ಬಸ್ ಸಂಚಾರ ಪುನರಾರಂಭಗೊಂಡಿತು. ಬಿ.ಎಂ.ಟಿ.ಸಿ ಬಸ್ ಗಳು ಬೆಂಗಳೂರಿನ ರಸ್ತೆಗಳಿಗೆ ಇಳಿದರೂ, ಅದರಲ್ಲಿ ಪ್ರಯಾಣ ಮಾಡಲು ಮಾತ್ರ ಹೆಚ್ಚು ಜನ ಮನಸ್ಸು ಮಾಡುತ್ತಿರಲಿಲ್ಲ. ಅದಕ್ಕೆ ಕಾರಣ ಒಂದು 'ಕೊರೊನಾ ವೈರಸ್' ಆದರೆ, ಮತ್ತೊಂದು 'ದುಬಾರಿ ಟಿಕೆಟ್ ದರ'.
Recommended Video
ದಿನದ ಪಾಸ್ ದರದ ಬಗ್ಗೆ ವ್ಯಾಪಕ ಟೀಕೆ ಕೇಳಿಬಂದ್ಮೇಲೆ, ದರ ತಗ್ಗಿಸಲು ಬಿ.ಎಂ.ಟಿ.ಸಿ ಮುಂದಾಗಿದೆ. ಜೊತೆಗೆ ''ಇಂದಿನಿಂದ (ಮೇ 26) 3,500 ಬಸ್ ಗಳು ಬೆಂಗಳೂರಿನಲ್ಲಿ ಸಂಚರಿಸಲಿವೆ'' ಎಂದು ಬಿ.ಎಂ.ಟಿ.ಸಿ ಘೋಷಿಸಿತ್ತು.
ಪ್ರಯಾಣಿಕರ ವಿರೋಧ: ದಿನದ ಪಾಸ್ ದರ ಇಳಿಸಲು ಹೊರಟ ಬಿಎಂಟಿಸಿ
ಆದರೆ, ಇಂದು ಬೆಳಗ್ಗೆ ಮೆಜೆಸ್ಟಿಕ್ ನಲ್ಲಿ ಬಿ.ಎಂ.ಟಿ.ಸಿ ಬಸ್ ಗಳೇ ಕಾಣ್ತಿರ್ಲಿಲ್ಲ. ಬಸ್ ಗಳಿಗಾಗಿ ಕಾದು ಕಾದು ಪ್ರಯಾಣಿಕರು ಸುಸ್ತಾಗಿದ್ದರು. ಕೆಲ ಪ್ರಯಾಣಿಕರು ತಮ್ಮ ಆಕ್ರೋಶವನ್ನು ಹೊರಹಾಕಿದ್ಮೇಲೆ, ಬಸ್ ಗಳು ರಸ್ತೆಗಿಳಿದವು.
ಇಂದು 3,500 ಬಸ್ ಸಂಚಾರ
''ಇಂದು 3,500 ಬಸ್ ಬಿಡಲಾಗಿದೆ. ಪ್ರಯಾಣಿಕರ ಗಮನದಲ್ಲಿಟ್ಟುಕೊಂಡು ಹೆಚ್ಚು ಬಸ್ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ 7 ರವರೆಗೂ ಕರ್ಫ್ಯೂ ಜಾರಿಯಲ್ಲಿರುತ್ತದೆ. ಸರ್ಕಾರದ ಆದೇಶವನ್ನ ನಾವೂ, ನಮ್ಮ ಸಿಬ್ಬಂದಿಗಳೂ ಪಾಲಿಸಬೇಕು. ಹೀಗಾಗಿ, ಕಂಡಕ್ಟರ್ ಮತ್ತು ಡ್ರೈವರ್ ಸಹ ಬೆಳಗ್ಗೆ 7 ರ ನಂತರ ಬರ್ತಾರೆ. ಪ್ರಯಾಣಿಕರು ಸಾಮಾಜಿಕ ಅಂತರ ಪಾಲಿಸಬೇಕು. ನಿರ್ವಾಹಕರು, ಚಾಲಕರೊಂದಿಗೆ ಪ್ರಯಾಣಿಕರು ಸಹಕರಿಸಬೇಕು'' ಎಂದು ಬಿ.ಎಂ.ಟಿ.ಸಿ CTM ರಾಜೇಶ್ ಹೇಳಿದ್ದರು.
ಕಾದು ಕಾದು ಸುಸ್ತಾದ ಪ್ರಯಾಣಿಕರು
ಮೆಜೆಸ್ಟಿಕ್ ನ ಬಿ.ಎಂ.ಟಿ.ಸಿ ಬಸ್ ನಿಲ್ದಾಣದಲ್ಲಿ ಇಂದು ಬೆಳಗ್ಗಿನಿಂದಲೂ ಜನವೋ ಜನ. ಬೆಳಗ್ಗೆ 7 ರಿಂದ ಕಾಯುತ್ತಿದ್ರೂ ಹಲವು ಮಾರ್ಗಗಳಿಗೆ ಬಸ್ ಇಲ್ಲ. ಹೊಸಕೋಟೆ, ಆನೇಕಲ್, ಬೊಮ್ಮನಹಳ್ಳಿ, ಮಾರತ್ತಹಳ್ಳಿ, ಕೆ.ಆರ್.ಪುರದ ಹಲವು ಭಾಗಗಳಿಗೆ ಬಸ್ ಗಳ ಸಂಖ್ಯೆ ಕಡಿಮೆ ಇದೆ. ಹೀಗಾಗಿ, ಬಸ್ ಗಾಗಿ ಕಾದು ಕಾದು ಸುಸ್ತಾದ ಪ್ರಯಾಣಿಕರು ಬಿ.ಎಂ.ಟಿ.ಸಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಎಲ್ಲಿ ಹೋಯ್ತು 3,500 ಬಿ.ಎಂ.ಟಿ.ಸಿ ಬಸ್..?
ಇಂದು 3,500 ಬಸ್ ಗಳು ಸಂಚಾರ ನಡೆಸಲಿವೆ ಅಂತ ಬಿ.ಎಂ.ಟಿ.ಸಿ ಹೇಳಿತ್ತು. ಆದರೆ, ಗಂಟೆಗೊಂದರಂತೆ ಬಿ.ಎಂ.ಟಿ.ಸಿ ಬಸ್ ಬರುತ್ತಿದೆ. '"ಸಾಮಾಜಿಕ ಅಂತರ ಅಂತಾರೆ. ಆದ್ರೆ ಬಸ್ ಸಂಖ್ಯೆ ಕಡಿಮೆ ಇದೆ. ದೂರದೂರಿಗೆ ಹೋಗ್ಬೇಕು ಅಂದ್ರೆ ಏನ್ ಮಾಡ್ಬೇಕು.? ಬಸ್ ಬಂದ ಕೂಡಲೆ ಹತ್ತಲು ಪ್ರಯಾಣಿಕರು ಮುಗಿಬೀಳ್ತಿದ್ದಾರೆ. ಒಂದು ಸೀಟ್ ನಲ್ಲಿ ಇಬ್ಬರು ಕುಳಿತು ಪ್ರಯಾಣ ಮಾಡುತ್ತಿದ್ದಾರೆ. ಒಂದು ಬಸ್ ನಲ್ಲಿ 45 ಕ್ಕೂ ಹೆಚ್ಚು ಮಂದಿ ಪ್ರಯಾಣ ಮಾಡುತ್ತಿದ್ದಾರೆ'' ಎಂದು ಕೆಲ ಪ್ರಯಾಣಿಕರು ತಮ್ಮ ಅಸಮಾಧಾನವನ್ನು ಹೊರಹಾಕಿದರು.
ಎಚ್ಚೆತ್ತ ಅಧಿಕಾರಿಗಳು
ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಆಕ್ರೋಶ ಹೊರಹಾಕುತ್ತಿದ್ದಂತೆಯೇ, ಸ್ಥಳಕ್ಕೆ ದೌಡಾಯಿಸಿದ ಬಿ.ಎಂ.ಟಿ.ಸಿ ಹಿರಿಯ ಅಧಿಕಾರಿಗಳು, ಎಲ್ಲಾ ರೂಟ್ ಗಳಿಗೂ ಬಸ್ ವ್ಯವಸ್ಥೆ ಮಾಡಿದರು. 10 ಗಂಟೆಯ ಬಳಿಕ ಮೆಜೆಸ್ಟಿಕ್ ನಲ್ಲಿ ಬಸ್ ಗಳ ಸಂಖ್ಯೆ ಏರಿಕೆ ಆಯ್ತು.
ಸಾಮಾಜಿಕ ಅಂತರ ಇಲ್ಲ
ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಸಾಮಾಜಿಕ ಅಂತರ ಅಂತೂ ಇಲ್ಲವೇ ಇಲ್ಲ. ಬಸ್ ಬಂತು ಎಂಬ ಆತುರದಲ್ಲಿ ಪ್ರಯಾಣಿಕರು ಸಾಮಾಜಿಕ ಅಂತರವನ್ನೇ ಮರೆತುಬಿಡುತ್ತಿದ್ದಾರೆ. ಇನ್ನೂ, ಬಸ್ ಸ್ಟ್ಯಾಂಡ್ ನಲ್ಲಿ ಸ್ಯಾನಿಟೈಸರ್ ವ್ಯವಸ್ಥೆ ಕೂಡ ಇಲ್ಲವಾಗಿದೆ.