ಮೆಟ್ರೋ ಸ್ಮಾರ್ಟ್ ಕಾರ್ಡ್ ರಿಯಾಯಿತಿ ಕಡಿತ; ಪ್ರಯಾಣಿಕರು ಏನಂದ್ರು?
ಬೆಂಗಳೂರು, ಜನವರಿ 10: ಸಿಲಿಕಾನ್ ಸಿಟಿ ಬೆಂಗಳೂರಿನ ಸಂಚಾರ ಸಮಸ್ಯೆಯನ್ನು ತಗ್ಗಿಸಲು ವರವಾಗಿ ಬಂದಿರುವ ನಮ್ಮ ಮೆಟ್ರೋ ರೈಲನ್ನು ಪ್ರಯಾಣಿಕರು ಅಪ್ಪಿಕೊಂಡಿದ್ದಾರೆ. ಇದಕ್ಕೆ ಕಾರಣ ನಮ್ಮ ಮೆಟ್ರೋ ಅಂತಾರಾಷ್ಟ್ರೀಯ ಗುಣಮಟ್ಟದ ಸೇವೆಯನ್ನು ಪ್ರಯಾಣಿಕರಿಗೆ ನೀಡುತ್ತಿದೆ.
ಹೊಸ ವರ್ಷಕ್ಕೆ ಪ್ರಯಾಣಿಕರಿಗೆ ಆಘಾತ ನೀಡಿದ ನಮ್ಮ ಮೆಟ್ರೋ
ಬಹುತೇಕ ಬಡ ಮತ್ತು ಮಧ್ಯಮ ವರ್ಗದ ಜನ ತಮ್ಮ ದೈನಂದಿನ ಪ್ರಯಾಣಕ್ಕಾಗಿ ಮೆಟ್ರೋ ಅವಲಂಬಿಸಿದ್ದಾರೆ. ಮಹಾನಗರ ಸಾರಿಗೆಗೆ (ಬಿಎಂಟಿಸಿ) ಹೋಲಿಸಿದರೆ, ನಮ್ಮ ಮೆಟ್ರೋ ಪ್ರಯಾಣ ದರ ತುಸು ದುಬಾರಿ. ಈಗ ಮತ್ತೆ ಪ್ರತಿನಿತ್ಯ ಮೆಟ್ರೋದಲ್ಲಿ ಸಂಚರಿಸುವವರ ಅನುಕೂಲಕ್ಕೆ ಜಾರಿಗೆ ತಂದಿರುವ ಮೆಟ್ರೋ ಸ್ಮಾರ್ಟ್ ಕಾರ್ಡ್ನ ಶೇಕಡಾ ರಿಯಾಯಿತಿಯನ್ನು ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿಮಿಟೆಡ್ (ಬಿಎಂಆರ್ಸಿಎಲ್) ಕಡಿತಗೊಳಿಸಿದೆ. ಇದು ಮೆಟ್ರೋ ಪ್ರಯಾಣಿಕರಿಗೆ ಬೇಸರ ತರಿಸಿದೆ. ಹಲವರು ಇದಕ್ಕೆ ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದಾರೆ.
ಏನಿದು ಸ್ಮಾರ್ಟ್ ಕಾರ್ಡ್?
ನಮ್ಮ ಮೆಟ್ರೋ ಜನಪ್ರಿಯವಾದ ನಂತರ ಬೆಂಗಳೂರಿನಲ್ಲಿ ದೈನಂದಿನ ಕೆಲಸಗಳಿಗೆ ಅಡ್ಡಾಡುವ ಪ್ರಯಾಣಿಕರು ಮೆಟ್ರೋ ರೈಲು ಹೆಚ್ಚು ನೆಚ್ಚಿಕೊಂಡರು. ಹೀಗಾಗಿ ಟಿಕೆಟ್ ಕೌಂಟರ್ನಲ್ಲಿ ಜನಸಂದಣಿ ತಪ್ಪಿಸಲು ಮೆಟ್ರೋ ಕಾರ್ಡ್ ಜಾರಿಗೆ ಬಂತು. ಇದಕ್ಕೆ ಪ್ರಯಾಣಿಕ ಕನಿಷ್ಠ 50 ರುಪಾಯಿ ನಿಶ್ಚಿತ ಮೊತ್ತ ಪಾವತಿಸಿ, ಕಾರ್ಡ್ ಪಡೆಯಬೇಕು. ತನಗೆ ಎಷ್ಟು ಬೇಕೋ ಅಷ್ಟು ಮೊತ್ತವನ್ನು ರಿಚಾರ್ಜ್ ಮಾಡಿಸಿ, ಆ ಮೊತ್ತ ಮುಗಿಯುವವರೆಗೂ ಬಳಸಬಹುದು. ಸದ್ಯ ಶೇ 62 ರಷ್ಟು ಪ್ರಯಾಣಿಕರು ಮೆಟ್ರೋ ಸ್ಮಾರ್ಟ್ ಕಾರ್ಡ್ ಹೊಂದಿದ್ದಾರೆ.
ರಿಯಾಯಿತಿ ಕಡಿತ
ಮೆಟ್ರೋ ಸ್ಮಾರ್ಟ್ ಕಾರ್ಡ್ ಬಂದ ಮೇಲೆ ಕಾರ್ಡ್ ಪಡೆದು ಪ್ರಯಾಣಿಸುವವರಿಗೆ ಹಾಗೂ ಟಿಕೆಟ್ (ಕಾಯಿನ್) ತೆಗೆದುಕೊಂಡು ಪ್ರಯಾಣಿಸುವವರ ನಡುವೆ ವ್ಯತ್ಯಾಸ ಆಯಿತು. ಕಾರ್ಡ್ದಾರರಿಗೆ ಶೇ 15 ರಷ್ಟು ರಿಯಾಯಿತಿ ದೊರೆಯುತ್ತಿತ್ತು. ಆದರೆ ಕಳೆದ ಬುಧವಾರ ಬಿಎಂಆರ್ಸಿಎಲ್ ಈ ರಿಯಾಯಿತಿಯನ್ನು ಶೇ 5 ಕ್ಕೆ ಇಳಿಸಿ ಆದೇಶ ಹೊರಡಿಸಿದೆ. ಮೆಟ್ರೋ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದೆ ಹಾಗೂ ಪ್ರಯಾಣಿಕರಿಗೆ ಇನ್ನಷ್ಟು ಉತ್ತಮ ಸೇವೆಗಳನ್ನು ನೀಡಲು ಈ ಕ್ರಮ ಅವಶ್ಯಕವಾಗಿತ್ತು ಎಂದು ಬಿಎಂಆರ್ಸಿಎಲ್ ತಿಳಿಸಿದೆ.
ವ್ಯಾಪಕ ವಿರೋಧ
ಬಿಎಂಆರ್ಸಿಎಲ್ ಮೆಟ್ರೋ ಸ್ಮಾರ್ಟ್ ಕಾರ್ಡ್ ರಿಯಾಯಿತಿಯನ್ನು ಕಡಿತಗೊಳಿಸಿರುವುದಕ್ಕೆ ಬಳಕೆದಾರರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಹಲವರು ಬಿಎಂಆರ್ಸಿಎಲ್ಗೆ ಪ್ರಶ್ನೆ ಮಾಡಿದ್ದಾರೆ. ಈಗಾಗಲೇ ಕಾರ್ಡ್ಗೆ ನಿಶ್ಚಿತ ಠೇವಣಿಯಾಗಿ 50 ರುಪಾಯಿ ಪಡೆಯುವುದರಿಂದಲೇ ಮೆಟ್ರೋಕ್ಕೆ ಲಾಭವಾಗುತ್ತಿದೆ. ಶೇ 15 ರಷ್ಟು ರಿಯಾಯಿತಿಯನ್ನು 5 ಕ್ಕೆ ಕಡಿತಗೊಳಿಸಿರುವುದು ಸರಿಯಲ್ಲ. ಇದರಿಂದ ಬಡ ಹಾಗೂ ಮಧ್ಯಮ ವರ್ಗದ ಪ್ರಯಾಣಿಕರಿಗೆ ಹೊರೆ ಆಗಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
4.5 ಲಕ್ಷ ಪ್ರಯಾಣಿಕರು
ಯಲೇಚನಹಳ್ಳಿ-ನಾಗಸಂದ್ರ ಹಾಗೂ ಮೈಸೂರು ರಸ್ತೆ-ಬೈಯಪ್ಪನಹಳ್ಳಿ ಮಾರ್ಗದಲ್ಲಿ ಪ್ರತಿದಿನ 4.5 ಲಕ್ಷ ಪ್ರಯಾಣಿಕರು ಮೆಟ್ರೋ ಕಾರ್ಡ್ ಪಡೆದು ಪ್ರಯಾಣಿಸುತ್ತಾರೆ. ಇದರಿಂದ ಮೆಟ್ರೋ ಲಾಭದಲ್ಲೇ ಇದೆ. ಹೀಗಿದ್ದಾಗೂ 'ದಿನನಿತ್ಯ ಸಂಚರಿಸುವ ಪ್ರಯಾಣಿಕರಿಗೆ ರಿಯಾಯಿತಿ ಕಡಿತ ಮಾಡಿರುವುದು ಸರಿಯಲ್ಲ' ಎಂದು ಮೆಟ್ರೋ ಸ್ಮಾರ್ಟ್ ಕಾರ್ಡ್ ಬಳಕೆದಾರರಾದ ರಾಜಾಜಿನಗರದ ವಿರೇಶ್ ರೋಣದ 'ಒನ್ ಇಂಡಿಯಾ'ದೊಂದಿದೆ ತಮ್ಮ ಅಭಿಪ್ರಾಯ ಹಂಚಿಕೊಂಡರು.