ನಮ್ಮ ಮೆಟ್ರೋದಲ್ಲಿ ಜನದಟ್ಟಣೆ, ಬಿದ್ದು ಪ್ರಯಾಣಿಕನ ಸೊಂಟ ಮುರಿತ
ಬೆಂಗಳೂರು, ಜುಲೈ 27: ಸಾಮಾನ್ಯವಾಗಿ ನಮ್ಮ ಮೆಟ್ರೋ ರೈಲಿನಲ್ಲಿ ಪೀಕ್ ಟೈಂನಲ್ಲಿ ಜನದಟ್ಟಣೆ ಇರುತ್ತದೆ. ಹಾಗೆಯೇ ಇಂದು ಕೂಡ ಬೆಳಗ್ಗಿನ ಜಾವ ರೈಲು ತುಂಬಿ ತುಳುಕುತಿತ್ತು. ಈ ಸಂದರ್ಭ ಜನದಟ್ಟಣೆಯ ಮಧ್ಯೆ ಮೆಟ್ರೋ ರೈಲು ಹತ್ತಲು ತೆರಳಿದಾಗ ಬಿದ್ದು ಪ್ರಯಾಣಿಕರೊಬ್ಬರ ಸೊಂಟದ ಮೂಳೆ ಮುರಿದಿದೆ. ಈ ಘಟನೆ ರಾಜಾಜಿನಗರದ ಮೆಟ್ರೊ ನಿಲ್ದಾಣದಲ್ಲಿ ನಡೆದಿದೆ.
ಪ್ರತಿನಿತ್ಯ ಸಂಚರಿಸುವ 59 ವರ್ಷದ ಬಾಲಕೃಷ್ಣ ರೈ ತಮ್ಮ ಕೆಲಸದ ಸ್ಥಳ ಎಂ.ಜಿ.ರಸ್ತೆಗೆ ಹೋಗಲು ಕೆಂಪೇಗೌಡ ನಿಲ್ದಾಣದ ಪ್ಲಾಟ್ ಫಾರಂ 3 ರಲ್ಲಿ ಇಳಿದಿದ್ದಾರೆ. ಇದೇ ವೇಳೆ ಓರ್ವ ಯುವಕ ಜನದಟ್ಟಣೆ ಮಧ್ಯೆ ಇವರನ್ನು ತಳ್ಳಿದ್ದಾನೆ. ಯುವಕ ನೂಕಿದ ರಭಸಕ್ಕೆ ರೈಯವರ ಸೊಂಟದ ಕೆಳಗೆ ಮೂಳೆ ಮುರಿದು ಪ್ಲಾಟ್ ಫಾರಂನಲ್ಲಿ ಬಿದ್ದಿದ್ದರು.
ರಕ್ಷಣಾ ಇಲಾಖೆಯಲ್ಲಿ ಅಕೌಂಟ್ಸ್ ಆಫೀಸರ್ ಆಗಿರುವ ಬಾಲಕೃಷ್ಣ ರೈ ಇದೀಗ ನಗರದ ಹೊಸ್ಮಾಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೆ ಸೋಮವಾರ ಹಿಪ್ ಬದಲಾವಣೆ ಸರ್ಜರಿ ನಡೆಯಲಿದೆ.
ಹೃದ್ರೋಗಿಯಾಗಿರುವ ಬಾಲಕೃಷ್ಣ ರೈಯವರಿಗೆ ಸಕ್ಕರೆ ಕಾಯಿಲೆ ಕೂಡ ಇದೆ. ಹಾಗಾಗಿ ಗುಣಮುಖವಾಗಲು ಕನಿಷ್ಠ 3 ತಿಂಗಳು ಬೇಕಾಗಬಹುದು ಎಂದು ವೈದ್ಯರು ಹೇಳಿದ್ದಾರೆ.
ಇನ್ನು ಇದಕ್ಕೆ ಉತ್ತರಿಸಿರುವ ಮೆಟ್ರೋ ಅಧಿಕಾರಿಯೊಬ್ಬರು, ನಾವು ಸರದಿಯಲ್ಲಿ ನಿಲ್ಲುವ ವ್ಯವಸ್ಥೆಯನ್ನು ಜಾರಿಗೆ ತಂದಿದ್ದೇವೆ. ಪ್ಲಾಟ್ ಫಾರಂ ನಲ್ಲಿ, ಎಸ್ಕಲೇಟರ್ ನಲ್ಲಿ ಜನದಟ್ಟಣೆ ಮಧ್ಯೆ ಓಡಿ ತಮಗೆ ಅಥವಾ ಬೇರೆಯವರಿಗೆ ಗಾಯ ಮಾಡಿಕೊಳ್ಳಬೇಡಿ ಎಂದು ಪ್ರಯಾಣಿಕರಿಗೆ ಪದೇ ಪದೇ ಹೇಳುತ್ತೇವೆ. ಆದರೆ ಅನೇಕ ಪ್ರಯಾಣಿಕರು ನಮ್ಮ ಮಾತು ಕೇಳುವುದಿಲ್ಲ ಎಂದಿದ್ದಾರೆ.