ಪಾರ್ವತಮ್ಮ ಸೇರಿ ಮೂವರಿಗೆ ಗೌರವ ಡಾಕ್ಟರೇಟ್ ಪ್ರದಾನ
ಬೆಂಗಳೂರು, ಮೇ 30 : ಚಿಕ್ಕಬಳ್ಳಾಪುರ ಜಿ.ಕೆ. ನಾರಾಯಣ ರೆಡ್ಡಿ, ಚಾಮರಾಜನಗರದ ಎಸ್. ಚಿನ್ನಸ್ವಾಮಿ ಹಾಗೂ ಪಾರ್ವತಮ್ಮ ರಾಜ್ಕುಮಾರ್ ಅವರಿಗೆ ಬೆಂಗಳೂರು ವಿಶ್ವವಿದ್ಯಾಲಯದ ಐವತ್ತನೆಯ ವಾರ್ಷಿಕ ಘಟಿಕೋತ್ಸವದ ಸಮಾರಂಭದಲ್ಲಿ ರಾಜ್ಯಪಾಲ ವಜುಭಾಯಿ ರೂಢಾಬಾಯಿ ವಾಲಾ ಅವರು ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿ ಗೌರವಿಸಿದರು.
ಶನಿವಾರ ಜ್ಞಾನಜ್ಯೋತಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪದವಿಯ ಜೊತೆಗೆ 199 ವಿದ್ಯಾರ್ಥಿಗಳಿಗೆ ಸುವರ್ಣ ಪದಕವನ್ನು 77 ವಿದ್ಯಾರ್ಥಿಗಳಿಗೆ ಬಹುಮಾನವನ್ನು ಹಾಗೂ 212 ಮಂದಿಗೆ ಡಾಕ್ಟರೇಟ್ ಪದವಿಯನ್ನು ಅವರು ನೀಡಿದರು. [ಶಿವಣ್ಣ ಮುಡಿಗೆ ಡಾಕ್ಟರೇಟ್ ಗರಿ]
ಗೌರಿಬಿದನೂರಿನ ಎ.ಇ.ಎಸ್. ನ್ಯಾಷನಲ್ ಕಾಲೇಜಿನ ಸಂಧ್ಯಾ ಜಿ.ಎ. ಬಿ.ಎಸ್ಸಿ ಪದವಿಯಲ್ಲಿ 8 ಸುವರ್ಣ ಪದಕ ಹಾಗೂ 6 ಬಹುಮಾನ ಪಡೆಯುವ ಮೂಲಕ ಅತಿಹೆಚ್ಚು ಪದಕವನ್ನು ತನ್ನದಾಗಿಸಿಕೊಂಡಿದ್ದರೆ, ಭಗವಾನ್ ಮಹಾವೀರ್ ಪ್ರಥಮ ದರ್ಜೆ ಕಾಲೇಜಿನ ಚೈತ್ರಾ ಸಿ ಬಿ.ಕಾಂನಲ್ಲಿ 3 ಸುವರ್ಣ ಪದಕ ಹಾಗೂ 4 ಬಹುಮಾನವನ್ನು ಪಡೆದರು. [ಡಾಕ್ಟರೇಟ್ ಪಡೆದ ಖ್ಯಾತ ತಾರೆಯರು]
ಬೆಂಗಳೂರು ವಿಶ್ವವಿದ್ಯಾಲಯದ ಅರುಣ ಎಸ್.ಎನ್. ಕನ್ನಡ ವಿಭಾಗದಲ್ಲಿ 7 ಸುವರ್ಣ ಪದಕವನ್ನು, ಬೆಂಗಳೂರು ವಿಶ್ವವಿದ್ಯಾಲಯದ ಭರತ್ ಕೆ.ಎಂ. ರಸಾಯನ ಶಾಸ್ತ್ರ ವಿಭಾಗದಲ್ಲಿ 5 ಸುವರ್ಣ ಹಾಗೂ 2 ಬಹುಮಾನವನ್ನು, ಲೀಲಾವತಿ ಡಿ.ಬಿ. ಗಣಿತ ಶಾಸ್ತ್ರದಲ್ಲಿ 5 ಸುವರ್ಣ ಪದಕ ಹಾಗೂ 1 ಬಹುಮಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ. ತಿಮ್ಮೆಗೌಡ ಅವರು ವಿಶ್ವದ್ಯಾಲಯದ ಪ್ರಗತಿಯ ಬಗ್ಗೆ ಮಾಹಿತಿ ನೀಡಿದರು. ಘಟಿಕೋತ್ಸವದ ಸಮಾರಂಭದಲ್ಲಿ ಉನ್ನತ ಶಿಕ್ಷಣ ಸಚಿವ ಆರ್.ವಿ. ದೇಶಪಾಂಡೆ, ನವದೆಹಲಿಯ ವಿಶ್ವ ವಿದ್ಯಾಲಯ ಧನಸಹಾಯ ಆಯೋಗ ಅಧ್ಯಕ್ಷರಾದ ಪ್ರೊ. ವೇದ್ ಪ್ರಕಾಶ್, ಕುಲಸಚಿವರಾದ ಪ್ರೊ. ಕೆ.ಎನ್. ನಿಂಗೇಗೌಡ ಮತ್ತು ಪ್ರೊ. ಕೆ. ಕೆ. ಸೀತಮ್ಮ ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.