ಪಕ್ಷದ ಕಾರ್ಯಕರ್ತರು ಜನರ ಸಮಸ್ಯೆಗಳಿಗೆ ಧ್ವನಿಯಾಗಬೇಕು: ರಾಧಿಕಾ ನಾಯರ್
ಬೆಂಗಳೂರು, ಏ.20: ಬಿಬಿಎಂಪಿ ವ್ಯಾಪ್ತಿಯ ಜನರ ಸಮಸ್ಯೆಗಳಿಗೆ ನಾವು ಧ್ವನಿಯಾಗಬೇಕು. ಅಂಕಿ ಅಂಶಗಳೊಂದಿಗೆ ಸಮಸ್ಯೆ ಏನು, ಪರಿಹಾರವೇನು ಎಂಬುದನ್ನು ನಾವು ತಿಳಿಸಬೇಕು ಎಂದು ಆಮ್ ಆದ್ಮಿ ಪಾರ್ಟಿಯ ಮುಂಬೈ ಸಮಿತಿ ಸದಸ್ಯೆ ರಾಧಿಕಾ ಶಶಿಧರನ್ ನಾಯರ್ ತಿಳಿಸಿದರು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಕೆಲಸ ನಿಮಿತ್ತ ಬೆಂಗಳೂರಿಗೆ ಬಂದಿದ್ದ ರಾಧಿಕಾ, ಪಕ್ಷದ ಕಾರ್ಯಕರ್ತರೊಂದಿಗೆ ನಡೆದ ಸಂವಾದದಲ್ಲಿ ಅಭಿವೃದ್ಧಿ ಹೊಂದಿರುವ ದೇಶ ಎಂದು ಕರೆಯಲ್ಪಡುವ ಎಲ್ಲಾ ದೇಶಗಳಲ್ಲಿಯೂ ಉತ್ತಮ ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯ ಉಚಿತವಾಗಿ ದೊರೆಯುವುದೇ ಮುಖ್ಯ ಕಾರಣವಾಗಿರುತ್ತದೆ. ನಮ್ಮ ಪಕ್ಷವೂ ಕೂಡ ಉತ್ತಮ ಗುಣಮಟ್ಟದ ಶಿಕ್ಷಣ ಹಾಗೂ ಆರೋಗ್ಯ ಸೇವೆ ಒದಗಿಸುವತ್ತ ಗಮನ ಹರಿಸುತ್ತದೆ ಎಂದರು.
ಈ ಬಾರಿ ಲೋಕಸಭೆಗೆ ಸ್ಪರ್ಧಿಸಿರುವ ಜನವಿರೋಧಿ, ಮಹಿಳಾ ವಿರೋಧಿ ಸ್ಪರ್ಧಿಗೆ ನಾವು ಓಟು ಹಾಕಬಾರದು ಎಂದು ತೀರ್ಮಾನಿಸಿದ್ದೇವೆ. ಜನಪರವಾದ ಆಡಳಿತ ಜಾರಿಯಾಗಲು ನಾವು ಈಗಿಂದಲೇ ಬಿಬಿಎಂಪಿ ಚುನಾವಣೆಗೆ ಸ್ಪರ್ಧಿಸಲು ಸಜ್ಜಾಗುತ್ತಿದ್ದೇವೆ ಎಂದು ಬಿಬಿಎಂಪಿ ಚುನಾವಣಾ ಪ್ರಚಾರ ಮುಖ್ಯಸ್ಥೆ ಶಾಂತಲಾ ದಾಮ್ಲೆ ತಿಳಿಸಿದರು.
ಈ ಬಾರಿ ಆಮ್ ಆದ್ಮಿ ಪಾರ್ಟಿಯು ಕರ್ನಾಟಕದಿಂದ ಲೋಕಸಭೆಗೆ ಸ್ಪರ್ಧಿಸದೇ, ಬಿಬಿಎಂಪಿ ಚುನಾವಣೆಗೆ ತಯಾರಿ ಆರಂಭಿಸಿದೆ. ಕಳೆದ ನಾಲ್ಕು ವರ್ಷದ ಆಡಳಿತ ಅನುಭವವನ್ನು ಹೊಂದಿರುವ ದೆಹಲಿ ಸರಕಾರದ ಕಾರ್ಯನೀತಿ, ಬೆಂಗಳೂರಿನಲ್ಲಿಯೂ ಕೂಡ ಆಡಳಿತದಲ್ಲಿ ಸುಧಾರಣೆ ತರಲು ಪ್ರಾಮಾಣಿಕ ಮತ್ತು ಬದ್ಧತೆಯುಳ್ಳ ಪಾಲಿಕೆ ಸದಸ್ಯರಿಂದ ಸಾಧ್ಯ ಎಂಬ ದೃಢ ವಿಶ್ವಾಸ ಆಮ್ ಆದ್ಮಿ ಪಾರ್ಟಿ ಹೊಂದಿದ್ದು, 2020ರಲ್ಲಿ ನಡೆಯಲಿರುವ ಬಿಬಿಎಂಪಿ ಚುನಾವಣೆಗೆ ಈಗಾಗಲೇ ಕಾರ್ಯಪ್ರವೃತ್ತವಾಗಿದೆ.
ಅದರ ಭಾಗವಾಗಿ ಆಮ್ ಆದ್ಮಿ ಪಾರ್ಟಿಯ ಮುಂಬೈ ಸಮಿತಿ ಸದಸ್ಯರಾಗಿರುವ ಪತ್ರಕರ್ತೆ ರಾಧಿಕಾ ನಾಯರ್ ಅವರು, ಅಲ್ಲಿ ನಡೆದಿರುವ ಪ್ರಚಾರಾಂದೋಲನದ ಅನುಭವವನ್ನು ಕಾರ್ಯಕರ್ತರೊಂದಿಗೆ ಹಂಚಿಕೊಂಡರು.
ಈಗಾಗಲೇ ಬಿಬಿಎಂಪಿ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿರುವ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರಿಗೆ ಹಾಗೂ ಆಕಾಂಕ್ಷಿ ಸ್ಪರ್ಧಿಗಳಿಗೆ ಉತ್ತಮ ಸಲಹೆಗಳನ್ನು ನೀಡಿದರು.