ಬೆಂಗಳೂರಿನಲ್ಲಿ ಭಾರಿ ಮಳೆ: ಧರೆಗುರುಳಿದ ಮರ, ಎಲೆಕ್ಟ್ರಿಕ್ ಕಂಬಗಳು
ಬೆಂಗಳೂರು, ಏಪ್ರಿಲ್ 24: ನಗರದ ಕೆಲವೆಡೆ ಕಳೆದ 30 ನಿಮಿಷಗಳಿಂದ ಗುಡುಗು ಸಹಿತ ಮಳೆ ಬಿಟ್ಟು ಬಿಡದೇ ಸುರಿಯುತ್ತಿದೆ. ಅಲ್ಲಲ್ಲಿ ಮರಗಳು, ಎಲೆಕ್ಟ್ರಿಕ್ ಕಂಬಗಳು ಧರೆಗುರುಳಿವೆ ವಾಹನ ದಟ್ಟಣೆ ಉಂಟಾಗಿದೆ.
ಬಸವೇಶ್ವರನಗರ, ಐಟಿಐ ಲೇಔಟ್, ವೈಯಾಲಿಕಾವಲ್, ಡಾ. ರಾಜಕುಮಾರ್ ರಸ್ತೆ, ಮಾಗಡಿ ರಸ್ತೆ, ಮಹಾಲಕ್ಷ್ಮೀ,ಲೇಔಟ್ ಸುತ್ತಮುತ್ತಲ ಪ್ರದೇಶದಲ್ಲಿ ಭಾರಿ ಮಳೆಯಾಗಿದೆ. ಅಲ್ಲಲ್ಲಿ ನೀರು ನಿಂತು ವಾಹನ ಸಂಚಾರದಲ್ಲಿ ಅಸ್ತವ್ಯಸ್ತವಾಗಿದೆ.
ಮರಗಳು ಬಿದ್ದಿದ್ದು, ಮಾಗಡಿ ರಸ್ತೆ, ಬಸವೇಶ್ವರ ನಗರ ಸುತ್ತಮುತ್ತಲು ಸಂಚಾರದಟ್ಟಣೆ ಏರ್ಪಟ್ಟಿದೆ. ಇನ್ನು ಕೆಲವೆಡೆ ದ್ವಿಚಕ್ರ ವಾಹನಗಳು ಅಲ್ಲಲ್ಲಿ ನಿಲ್ಲಿಸಿರುವುದರಿಂದ ಕೂಡ ವಾಹನ ದಟ್ಟಣೆ ಉಂಟಾಗಿದೆ.
ಬೆಂಗಳೂರು ನಗರ ಸೇರಿ ದಕ್ಷಿಣ ಒಳನಾಡು ಹಾಗೂ ಮಲೆನಾಡಿನ ಜಿಲ್ಲೆಗಳಲ್ಲಿ ವರ್ಷಧಾರೆ ಮುಂದುವರೆದಿದ್ದು, ತಂಪಾದ ವಾತಾವರಣವಿರಲಿದೆ. ಬೆಂಗಳೂರು ನಗರ ಹಾಗೂ ಗ್ರಾಮಾಂತರ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು ಜಿಲ್ಲೆಗಳಲ್ಲಿ ಏ.26ರವರೆಗೆ ಮಳೆ ಮುಂದುವರೆಯುವ ನಿರೀಕ್ಷೆ ಇದೆ.
ಬೆಂಗಳೂರು ನಗರದಲ್ಲಿ ಗರಿಷ್ಠ ಉಷ್ಣಾಂಶ 34.2 ಡಿಗ್ರಿ ಸೆಲ್ಸಿಯಸ್ ಇದ್ದು ಕನಿಷ್ಠ 23.6 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುವ ನಿರೀಕ್ಷೆ ಇದೆ. ಇನ್ನು 48 ಗಂಟೆಗಳ ಕಾಲ ಮೋಡಕವಿದ ವಾತಾವರಣ ಮುಂದುವರೆಯಲಿದೆ.
ಬೆಂಗಳೂರು ನಗರದಲ್ಲಿ ಸೋಮವಾರ ಗರಿಷ್ಠ 34.2 ಡಿಗ್ರಿ ಸೆಲ್ಸಿಯಸ್, ಕನಿಷ್ಠ 23.6 ಡಿಗ್ರಿ ಸೆಲ್ಸಿಯಸ್, ಕೆಐಎಎಲ್ ನಲ್ಲಿ ಗರಿಷ್ಠ 34.8ಡಿಗ್ರಿ ಸೆಲ್ಸಿಯಸ್, ಕನಿಷ್ಠ 22ಡಿಗ್ರಿ ಸೆಲ್ಸಿಯಸ್, ಎಚ್ಎಎಲ್ ನಲ್ಲಿ ಗರಿಷ್ಠ 34.6 ಡಿಗ್ರಿ ಸೆಲ್ಸಿಯಸ್, ಕನಿಷ್ಠ 22.6 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.