ಪಾರ್ಸಿಗಳಿಂದ ಕಾಂಡೋಮ್ ವಿರೋಧಿ ಅಭಿಯಾನ...!
ಮುಂಬಯಿ, ನ. 12: ದೇಶದಲ್ಲಿ ಎಲ್ಲ ಸಮುದಾಯಗಳ ಜನಸಂಖ್ಯೆ ಏರುತ್ತಿದ್ದರೆ, ಪಾರ್ಸಿಗಳು ಮಾತ್ರ ತೀವ್ರವಾಗಿ ಕಡಿಮೆಯಾಗುತ್ತಿದ್ದಾರೆ. ಮುಂಬಯಿ ನಗರದಲ್ಲಿಯೇ ಹೆಚ್ಚಾಗಿ ಕಂಡುಬರುವ ಪಾರ್ಸಿಗಳ ಸಂಖ್ಯೆ 40 ಸಾವಿರಕ್ಕಿಂತ ಕಡಿಮೆಯಾಗುತ್ತಿರುವುದು ಅವರ ಆತಂಕಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಜನಸಂಖ್ಯೆ ಏರಿಕೆಗಾಗಿ ಅವರು 'ಕಾಂಡೋಮ್ ಬಹಿಷ್ಕರಿಸಿ' ಅಭಿಯಾನ ಹಮ್ಮಿಕೊಂಡಿದ್ದಾರೆ.
ಅತ್ಯಂತ ಮುಂದುವರಿದ ಜನಾಂಗ ಹಾಗೂ ಅತ್ಯಂತ ಶ್ರೀಮಂತ ವ್ಯಾಪಾರಿಗಳು ಎಂಬ ಹೆಗ್ಗಳಿಕೆ ಹೊಂದಿರುವ ಪಾರ್ಸಿಗಳ ಸಂಖ್ಯೆ ವಿವಿಧ ಕಾರಣಗಳಿಂದ ಕಡಿಮೆಯಾಗುತ್ತಿದೆ. ಸಮುದಾಯದ ಅನೇಕರು ರತನ್ ಟಾಟಾ ಅವರಂತೆ ಮದುವೆಯಾಗದೆ ಉಳಿದರೆ, ಅನೇಕರು ತಡವಾಗಿ ಮದುವೆಯಾಗುತ್ತಿದ್ದಾರೆ. ಹಲವರು ಇತರೆ ಸಮುದಾಯದವರನ್ನು ವರಿಸಿದ್ದಾರೆ. ಒಂದೇ ಮಗುವಿಗೆ ಸೀಮಿತಗೊಳಿಸುವುದು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪಾರ್ಸಿಗಳಲ್ಲಿ ಮಕ್ಕಳ ಜನನ ಪ್ರಮಾಣ ಕಡಿಮೆಯಾಗಿದೆ. ಇದರಿಂದ ಜನನ ಮತ್ತು ಮರಣ ಅನುಪಾತದಲ್ಲಿ ತೀವ್ರ ಏರುಪೇರು ಕಂಡುಬಂದಿದೆ. ಪ್ರತಿ ವರ್ಷ 800 ಜನ ಮೃತಪಡುತ್ತಿದ್ದರೆ, 200 ಮಕ್ಕಳಷ್ಟೇ ಜನಿಸುತ್ತಿದ್ದಾರೆ. ಈ ಎಲ್ಲ ಕಾರಣಗಳು ಸಮುದಾಯದವರಲ್ಲಿ ಆತಂಕಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಅವರು ಕಾಂಡೋಮ್ ವಿರೋಧಿ ಅಭಿಯಾನದಲ್ಲಿ ತೊಡಗಿದ್ದಾರೆ.
ಮಕ್ಕಳ ಸಂಖ್ಯೆ ಹೆಚ್ಚದಿದ್ದರೆ ಮುಂಬಯಿಯಲ್ಲಿರುವ ದಾದರ್ಸ್ ಪಾರ್ಸಿ ಕಾಲೋನಿಗೆ ನಿಮ್ಮ ಜೀವಿತಾವಧಿಯಲ್ಲಿಯೇ ಬೇರೆ ಹೆಸರು ಬರಲಿದೆ ಅವರು ಎಚ್ಚರಿಕೆ ನೀಡಿದ್ದಾರೆ. ಆದರೆ, ಯಾವುದೇ ಸಮುದಾಯದ ಮನಸ್ಸು ನೋಯಿಸಲು ಇಷ್ಟವಿಲ್ಲದ ಕಾರಣ ಈ ಹೇಳಿಕೆಯನ್ನು ಬಹಿರಂಗಗೊಳಿಸುವುದಿಲ್ಲ ಎಂದು ಪರ್ಜಾರ್ ಸ್ವಯಂ ಸೇವಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಶೇರ್ನಾಜ್ ಕಾಮಾ ಪ್ರತಿಕ್ರಿಯಿಸಿದ್ದಾರೆ.
ಇನ್ನೊಂದು ಜಾಹೀರಾತಿನಲ್ಲಿ "ನಾವು ಶ್ರೇಷ್ಠರಿದ್ದೇವೆ, ನಾವು ಸುಸಂಸ್ಕೃತರಾಗಿದ್ದೇವೆ, ನಾವು ಶಿಕ್ಷಿತರಾಗಿದ್ದೇವೆ, ನಾವು ನಾಶವಾಗುವುದರಲ್ಲಿದ್ದೇವೆ. ಆದ್ದರಿಂದ ಬೇಗ ಮದುವೆಯಾಗಿ ಮತ್ತು ಬೇಗ ಮಕ್ಕಳಿಗೆ ಜನ್ಮ ನೀಡಿ" ಎಂದು ಹೇಳಿದೆ. ಅಲ್ಲದೆ, "ಜವಾಬ್ದಾ ಇರಲಿ, ರಾತ್ರಿ ಕಾಂಡೋಮ್ ಉಪಯೋಗಿಸಬೇಡಿ" ಎಂದು ಟ್ವಿಟ್ಟರ್ ಮೂಲಕವೂ ಗಮನ ಸೆಳೆಯಲಾಗಿದೆ.