ತಡರಾತ್ರಿ ಸಿದ್ದರಾಮಯ್ಯ-ಪರಮೇಶ್ವರ್ ಭೇಟಿ: ಅಸಮಾಧಾನ ಹೊರಕ್ಕೆ?
ಬೆಂಗಳೂರು, ಜೂನ್ 07: ಅಹಿಂದ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದ ದಲಿತ ಮುಖಂಡರು, ಪರಮೇಶ್ವರ್ ವಿಚಾರಕ್ಕೆ ಸಿದ್ದರಾಮಯ್ಯ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
ಪರಮೇಶ್ವರ್ ಅವರನ್ನು ಪಕ್ಷದಲ್ಲಿಯಾಗಲಿ, ಸರ್ಕಾರದಲ್ಲಿಯಾಗಲಿ ಗೌರವಯುತವಾಗಿ ನಡೆಸಿಕೊಳ್ಳುತ್ತಿಲ್ಲವೆಂದು ದಲಿತ ಮುಖಂಡರು ಸಿದ್ದರಾಮಯ್ಯ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಸಿದ್ದರಾಮಯ್ಯ ವಿರುದ್ಧ ಕತ್ತಿ ಝಳಪಿಸುತ್ತಿದ್ದಾರೆ ಕಾಂಗ್ರೆಸ್ ಮುಖಂಡರು
ದಲಿತ ರಾಜಕಾರಣಿ ಪರಮೇಶ್ವರ್ ಅವರಿಗೆ ಸಲ್ಲಬೇಕಾದ ಗೌರವಗಳು, ಪಕ್ಷದಲ್ಲೇ ಆಗಲಿ ಸರ್ಕಾರದಲ್ಲೇ ಆಗಲಿ ಸಲ್ಲದೇ ಹೋದರೆ ದಲಿತ ಸಂಘಟನೆಗಳು ಪರ್ಯಾಯ ಮಾರ್ಗ ಹುಡುಕಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ದಲಿತ ಸಂಘಟನೆ ಮುಖಂಡರು ಸಿದ್ದರಾಮಯ್ಯ ಅವರಿಗೆ ನೀಡಿದ್ದಾರೆ ಎನ್ನಲಾಗಿದೆ.
ಸಿದ್ದರಾಮಯ್ಯ ಅವರ ಭೇಟಿ ಮಾಡಿದ ದಲಿತ ಮುಖಂಡರು
ದಲಿತ ಮುಖಂಡರ ಭೇಟಿ ನಂತರ ಕೂಡಲೇ ಪರಮೇಶ್ವರ್ ಅವರನ್ನು ಕಾವೇರಿ ನಿವಾಸಕ್ಕೆ ಕರೆಸಿಕೊಂಡ ಸಿದ್ದರಾಮಯ್ಯ ಅವರು, ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಆ ಸಂದರ್ಭದಲ್ಲಿಯೂ ಸಹ ಪರಮೇಶ್ವರ್ ಅವರು ಸಿದ್ದರಾಮಯ್ಯ ಎದುರು ತಮ್ಮ ಅಸಮಾಧಾನ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.
ರಾಜಣ್ಣ ಅವರ ತಡೆಯುವ ಪ್ರಯತ್ನ ಮಾಡಿಲ್ಲ
ಸಿದ್ದರಾಮಯ್ಯ ಅವರ ಪರಮ ಬೆಂಬಲಿಗ ರಾಜಣ್ಣ ಅವರು ಪರಮೇಶ್ವರ್ ಅವರ ವಿರುದ್ಧ ಪುಂಖಾನುಪುಂಖವಾಗಿ ಟೀಕೆಗಳನ್ನು ಮಾಡುತ್ತಲೇ ಇದ್ದಾರೆ, ಆದರೆ ಅವರನ್ನು ತಡೆಯುವ ಯತ್ನವನ್ನು ಸಿದ್ದರಾಮಯ್ಯ ಮಾಡಿಲ್ಲವೆಂದು ಪರಮೇಶ್ವರ್ ಬೇಸರ ವ್ಯಕ್ತಪಡಿಸಿದ್ದಾರೆ.
ದರ್ಶನ್ ಸ್ಟೈಲ್ ನಲ್ಲಿ ಡೈಲಾಗ್ ಹೇಳಿದ ಸಿದ್ದರಾಮಯ್ಯ: ವಿರೋಧಿಗಳಿಗೆ ಎಚ್ಚರಿಕೆ!
'ನ್ಯಾಯಯುತವಾಗಿ ಸಿಗಬೇಕಾದರ ಗೌರವ ಕೊಡಿ'
ತಮಗೆ ನ್ಯಾಯಯುತವಾಗಿ ಸಿಗಬೇಕಾದ ಗೌರವ, ಆದರ, ಸ್ಥಾನಗಳು ಪಕ್ಷ ಹಾಗೂ ಸರ್ಕಾರದಲ್ಲಿ ದೊರೆಯುತ್ತಿಲ್ಲವೆಂಬುದನ್ನೂ ಪರಮೇಶ್ವರ್ ಅವರು ಸಿದ್ದರಾಮಯ್ಯ ಎದುರು ಸಿಟ್ಟಿನಿಂದಲೇ ಮಾತನಾಡಿದ್ದಾರೆ ಎಂದು ಕೆಲವು ವಾಹಿನಿಗಳು ವರದಿ ಮಾಡಿವೆ.
ಗೃಹ ಖಾತೆಯನ್ನು ಎಂ.ಬಿ.ಪಾಟೀಲ್ಗೆ ನೀಡಲಾಯಿತು
ಪರಮೇಶ್ವರ್ ಅವರ ಬಳಿ ಇದ್ದ ಗೃಹ ಖಾತೆಯನ್ನು ಎಂ.ಬಿ.ಪಾಟೀಲ್ ಅವರಿಗೆ ನೀಡಲಾಗಿದೆ. ಪರಮೇಶ್ವರ್ ಅವರನ್ನು ಕೇವಲ ನೆಪಕ್ಕೆಂಬಂತೆ ಡಿಸಿಎಂ ಮಾಡಲಾಗಿದೆ. ಅಲ್ಲದೆ ಸಿದ್ದರಾಮಯ್ಯ ಆಪ್ತ ರಾಜಣ್ಣ ಪರಮೇಶ್ವರ್ ಅವರ ಬಗ್ಗೆ ಪದೇ-ಪದೇ ಟೀಕೆ ಮಾಡುತ್ತಲೇ ಇದ್ದಾರೆ ಇದು ಪರಮೇಶ್ವರ್ ಅವರಿಗೆ ಮತ್ತು ಬೆಂಬಲಿಗರಿಗೆ ಬೇಸರ ತರಿಸಿದೆ.