ಮೋದಿ ಮುಖ ನೋಡಿ ಮತ ಹಾಕಿ ಅನ್ನೋದು ಕಷ್ಟದ ಕೆಲಸವಲ್ಲ, ಆದರೆ...: ಪರಮೇಶ್ವರ್ ವ್ಯಂಗ್ಯದ ಬಾಣ
ಬೆಂಗಳೂರು, ಆಗಸ್ಟ್ 14: ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸಿ ನೀವು ಕೇಳಿದಷ್ಟು ಪರಿಹಾರ ಕೊಡಲು ಸರ್ಕಾರದ ಬಳಿಕ ನೋಟ್ ಪ್ರಿಂಟ್ ಮಾಡುವ ಯಂತ್ರ ಇಲ್ಲ ಎಂಬ ಹೇಳಿಕೆ ನೀಡುವ ಮೂಲಕ ವಿವಾದ ಸೃಷ್ಟಿಸಿರುವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧ ವಿರೋಧಪಕ್ಷಗಳ ನಾಯಕರು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಪತ್ರಿಕೆಗಳಲ್ಲಿ ಜಾಹೀರಾತು ಹಾಕಿಸಲು ಎಲ್ಲ ದುಡ್ಡು ಖರ್ಚಾಗಿರಬೇಕು ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಲೇವಡಿ ಮಾಡಿದ್ದಾರೆ. ನೀವು ನೋಟು ಪ್ರಿಂಟ್ ಹಾಕಿಸುವುದೇನೋ ಬೇಡ, ಬೇಕಾದಷ್ಟು ಪರಿಹಾರವನ್ನು ಕೇಂದ್ರದಿಂದ ಪಡೆದುಕೊಳ್ಳಿ ಎಂದು ಸಲಹೆ ನೀಡಿದ್ದಾರೆ.
ಮೋದಿ ಮುಖ ನೋಡಿ ನಮಗೆ ಮತ ಹಾಕಿ ಎಂದು ಚುನಾವಣಾ ಪ್ರಚಾರದ ವೇಳೆ ರಾಜ್ಯದ ಬಿಜೆಪಿ ನಾಯಕರು ಮತದಾರರನ್ನು ಕೋರುತ್ತಿದ್ದರು. ಅದೇನೂ ಕಷ್ಟದ ಕೆಲಸ ಆಗಿರಲಿಲ್ಲ. ಈಗ ಮೋದಿ ಅವರ ಬಳಿ ಹೋಗಿ ಕಷ್ಟದಲ್ಲಿರುವ ಜನರ ನೆರವಿಗೆ ಬನ್ನಿ ಎಂದು ಕೇಳುವುದು ಕಷ್ಟ. ಇದನ್ನು ಯಾವಾಗ ಮಾಡುತ್ತೀರಿ? ಎಂದು ಬಿಜೆಪಿ ನಾಯಕರನ್ನು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.
ಭಾವಚಿತ್ರ ಹಾಕಿಸಲು ಖರ್ಚಾಗಿರಬೇಕು
ಎಲ್ಲ ಪತ್ರಿಕೆಗಳ ಮುಖಪುಟದಲ್ಲೂ ತಮ್ಮ ಭಾವಚಿತ್ರವನ್ನು ದೊಡ್ಡದಾಗಿ ಹಾಕಿಸಲಿಕ್ಕೆ ಇದ್ದ ಎಲ್ಲ ದುಡ್ಡು ಖರ್ಚಾಗಿರಬೇಕು. ಅದಕ್ಕೇ ಪ್ರವಾಹ ಪರಿಹಾರಕ್ಕೆ ಬೇಕಾದಷ್ಟು ಹಣವಿಲ್ಲ, ಪ್ರಿಂಟು ಮಾಡಲು ಸಾಧ್ಯವಿಲ್ಲ ಅಂದಿದ್ದೀರಿ. ಯಡಿಯೂರಪ್ಪ ಅವರೇ, ರಾಜ್ಯಕ್ಕೆ ಬೇಕಾದಷ್ಟು ಪರಿಹಾರವನ್ನು ಕೇಂದ್ರದಿಂದ ಪಡೆದುಕೊಳ್ಳಿ. ಹಣ ಪ್ರಿಂಟು ಮಾಡುವುದೇನೂ ಬೇಡ! ಎಂದು ಪರಮೇಶ್ವರ್ ಹೇಳಿದ್ದಾರೆ.
ಮೋದಿ ಅವರನ್ನು ಯಾವಾಗ ಕೇಳುತ್ತೀರಿ?
ಚುನಾವಣೆ ಸಮಯದಲ್ಲಿ ಮೋದಿಯವರ ಮುಖ ನೋಡಿ ನಮಗೆ ಮತ ಹಾಕಿ ಎಂದು ಜನರನ್ನು ಕೇಳುವುದೇನೂ ಕಷ್ಟದ ಕೆಲಸವಲ್ಲ.
ಜನರಿಗೆ ಕಷ್ಟ ಎದುರಾದಾಗ ಅದೇ ಮೋದಿಯವರ ಮುಂದೆ ಹೋಗಿ, ನಿಮ್ಮ ಮುಖ ನೋಡಿ ಜನ ನಮಗೆ ಮತ ಹಾಕಿದ್ದಾರೆ, ಅವರ ಕಷ್ಟದಲ್ಲಿ ಅವರ ನೆರವಿಗೆ ಬನ್ನಿ ಎಂದು ಕೇಳುವುದು ಕಷ್ಟದ ಕೆಲಸ. ಬಿಜೆಪಿ ನಾಯಕರೇ, ಇದನ್ನು ಯಾವಾಗ ಮಾಡುತ್ತೀರಿ? ಎಂದು ಪ್ರಶ್ನಿಸಿದ್ದಾರೆ.
ಟ್ವಿಟ್ಟರ್ ನಲ್ಲಿ ಯಡಿಯೂರಪ್ಪರ ಕಾಲೆಳೆದ ಪ್ರಿಯಾಂಕ್ ಖರ್ಗೆ
ಕಾಗಕ್ಕ ಗುಬ್ಬಕ್ಕನ ಕತೆ ಹೇಳುತ್ತಿದ್ದರು
ಬಹುಮತದ ಜೊತೆಗೆ ಸರಿಯಾಗಿ ನಡೆಯುತ್ತಿದ್ದ ನಮ್ಮ ಸರ್ಕಾರವನ್ನು ಬೀಳಿಸಿ, ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಪಕ್ಷವಿದ್ದರೆ ರಾಜ್ಯಕ್ಕೆ ಬಹಳ ಉಪಯೋಗವಾಗುತ್ತದೆ ಎಂದು ರಾಜ್ಯದ ಜನತೆಗೆ ಕಾಗಕ್ಕ ಗುಬ್ಬಕ್ಕನ ಕತೆ ಹೇಳುತ್ತಿದ್ದ ಬಿಜೆಪಿ ಹಾಗೂ ಅದರ ಬೆಂಬಲಿಗರು ಈಗ ಏನು ಹೇಳುತ್ತಾರೆ ಕೇಳಬೇಕು. ಪ್ರವಾಹ ಪೀಡಿತ ಕರ್ನಾಟಕ ಅನಾಥವಾಗಿದೆ! ಎಂದು ಟೀಕಿಸಿದ್ದಾರೆ.
ಮಿನಿಮಮ್ ಗವರ್ನಮೆಂಟ್ ಇದೇ ಇರಬೇಕು!
ಸ್ವಾತಂತ್ರ್ಯ ದಿನದಂದು ಎಲ್ಲ ಜಿಲ್ಲಾ ಮುಖ್ಯ ಕಚೇರಿಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ರಾಷ್ಟ್ರಧ್ವಜ ಹಾರಿಸಿ ಸಂಭ್ರಮಾಚರಣೆಯ ಅಧ್ಯಕ್ಷತೆ ವಹಿಸುವುದು ಕರ್ನಾಟಕದ ಸಂಪ್ರದಾಯವಾಗಿದೆ.
ಈ ಸಾಲಿನ ಸ್ವಾತಂತ್ರ್ಯ ದಿನದಂದು ಮೊದಲ ಬಾರಿಗೆ ಜಿಲ್ಲೆಗಳಲ್ಲಿ ಧ್ವಜ ಹಾರಿಸಲು ಮಂತ್ರಿಗಳೇ ಇರದಂತಾಗಿದೆ. ಮಿನಿಮಮ್ ಗವರ್ನಮೆಂಟ್ ಎಂದರೆ ಇದೇ ಇರಬೇಕು! ಎಂದು ಪರಮೇಶ್ವರ್ ವ್ಯಂಗ್ಯವಾಡಿದ್ದಾರೆ.