ಜಯಲಲಿತಾ ಸಾವಿನ ಪ್ರಕರಣ; ಶಶಿಕಲಾ ವಿಚಾರಣೆಗೆ ಅನುಮತಿ ಕೋರಿದ ಸಮಿತಿ
ತಮಿಳುನಾಡಿನ ದಿವಂಗತ ಮುಖ್ಯಮಂತ್ರಿ ಜಯಲಲಿತಾ ಸಾವಿನ ವಿಚಾರದ ಬಗ್ಗೆ ತನಿಖೆ ನಡೆಸುತ್ತಿರುವ ಏಕ ವ್ಯಕ್ತಿ ಸಮಿತಿಯಿಂದ ಬೆಂಗಳೂರಿನ ಜೈಲಿನಲ್ಲಿರುವ ವಿ.ಕೆ.ಶಶಿಕಲಾ ಅವರನ್ನು ಪ್ರಶ್ನೆ ಮಾಡಲಾಗುತ್ತದೆ. ನಿವೃತ್ತ ನ್ಯಾಯಮೂರ್ತಿ ಆರ್ಮುಗಸಾಮಿ ಆಯೋಗವು ಈ ಬಗ್ಗೆ ಕರ್ನಾಟಕ ಕಾರಾಗೃಹ ಇಲಾಖೆಗೆ ಪತ್ರ ಬರೆದು, ಅನುಮತಿಗಾಗಿ ಕೇಳಿದೆ.
ಜಯಲಲಿತಾರ ಆಪ್ತರಾಗಿದ್ದ ಶಶಿಕಲಾರ ಹೇಳಿಕೆ ದಾಖಲೆ ಮಾಡಿಕೊಳ್ಳಲಿದ್ದು, ಭೇಟಿ ನಿಗದಿ ಪಡಿಸಲು ತಮಿಳುನಾಡಿನ ಗೃಹ ಕಾರ್ಯದರ್ಶಿ ನಿರಂಜನ್ ಮರ್ದಿ ಅವರಿಗೆ ಪತ್ರ ಬರೆಯಲಾಗಿದೆ. ಇದೇ ಮೊದಲ ಬಾರಿಗೆ ಇಂಥದ್ದೊಂದು ಮನವಿಯನ್ನು ಸಮಿತಿಯಿಂದ ಮಾಡಲಾಗಿದೆ.
ಜಯಲಲಿತಾ ಅವರನ್ನು ಸೆಪ್ಟೆಂಬರ್ 22, 2016ರಂದು ಆಸ್ಪತ್ರೆಗೆ ದಾಖಲು ಮಾಡಿದ ದಿನದಿಂದ ನಿಧನರಾದ ಡಿಸೆಂಬರ್ 5, 2016ರ ವರೆಗೆ 75 ದಿನಗಳ ಕಾಲ ಶಶಿಕಲಾ ಜತೆಯಲ್ಲೇ ಇದ್ದರು. ಜಯಲಲಿತಾಗೆ ನೀಡಿದ ಚಿಕಿತ್ಸೆ ಹಾಗೂ ಸಾವಿನ ಸುತ್ತ ವಿವಾದಗಳು ಹುಟ್ಟಿಕೊಂಡಿದ್ದರಿಂದ ಶಶಿಕಲಾ ಪಾತ್ರದ ಬಗ್ಗೆಯೂ ಚರ್ಚೆ ಶುರುವಾಯಿತು.
ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಶಶಿಕಲಾ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. ತನಗೆ ಸಮಿತಿ ಮುಂದೆ ಹಾಜರಾಗಲು ಹೆಚ್ಚಿನ ಕಾಲಾವಕಾಶ ಬೇಕು ಎಂದು ಕೋರಿ, ತಮ್ಮ ವಕೀಲರ ಮೂಲಕ 50 ಪುಟಗಳ ಅಫಿಡವಿಟ್ ಸಲ್ಲಿಸಿದ್ದರು .
ಜಯಲಲಿತಾ ದಾಖಲಾಗಿದ್ದ ಆಸ್ಪತ್ರೆಯ ಸಿಸಿಟಿವಿ ಕ್ಯಾಮೆರಾಗಳು ಮೇಲಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳ ಸೂಚನೆ ಮೇರೆಗೆ ಸ್ವಿಚ್ ಆಫ್ ಆಗಿತ್ತು ಎಂಬುದು ಬಯಲಾದ ನಂತರ ವಿವಾದ ಭುಗಿಲೆದ್ದಿತ್ತು. ಅದಾದ ನಂತರ ಆಸ್ಪತ್ರೆ ಸಿಬ್ಬಂದಿ ಹಾಗೂ ವೈದ್ಯರು ನೀಡಿದ ಗೊಂದಲದ ಹೇಳಿಕೆಗಳು ಮತ್ತಷ್ಟು ಅನುಮಾನಕ್ಕೆ ಕಾರಣವಾದವು.
ಶಶಿಕಲಾರ ಹೇಳಿಕೆ ದಾಖಲಿಸಿದ ನಂತರ, ಮುಂದಿನ ವರ್ಷದ ಫೆಬ್ರವರಿ ಇಪ್ಪತ್ನಾಲ್ಕರಂದು ಸಮಿತಿಯಿಂದ ವರದಿ ನೀಡುವ ಸಾಧ್ಯತೆ ಇದೆ. ಅಂದು ಜಯಲಲಿತಾರ ಜನ್ಮದಿನ ಕೂಡ ಇದೆ.