ಪತ್ತೆಯಾದ ವಿಗ್ರಹ: ಹೆದರಿದರೇ ಕಳ್ಳರು ಯಲ್ಲಮ್ಮ ದೇವಿಯ ಶಕ್ತಿಗೆ?
ಬೆಂಗಳೂರು, ನ 21: ಕಳುವಾಗಿದ್ದ ಶತಮಾನಗಳ ಇತಿಹಾಸವಿರುವ ಯಲ್ಲಮ್ಮ ದೇವಿಯ ಪಂಚಲೋಹದ ವಿಗ್ರಹ ದೇವಾಲಯದ ಆವರಣದಲ್ಲಿ ಪತ್ತೆಯಾಗಿದೆ.
ಭಾರೀ ಕಾರಣಿಕ ಹೊಂದಿರುವ ನಗರದ ಮಾಗಡಿ ರಸ್ತೆಯ ಗೋಪಾಲಪುರದಲ್ಲಿರುವ ಯಲ್ಲಮ್ಮ ದೇವಿಯ ವಿಗ್ರಹವನ್ನು ನವೆಂಬರ್ ಹದಿನಾಲ್ಕರಂದು ಕಳ್ಳತನ ಮಾಡಲಾಗಿತ್ತು.
ಶನಿವಾರ (ನ 21) ದೇವಾಲಯದ ಆವರಣದಲ್ಲಿ ವಿಗ್ರಹವನ್ನು ಕಳ್ಳರು ಬಿಸಾಡಿ ಹೋಗಿದ್ದು, ಬೆಳಗ್ಗೆ ದೇವಾಲಯಕ್ಕೆ ಆಗಮಿಸಿದ ಭಕ್ತರು ವಿಗ್ರಹವನ್ನು ನೋಡಿ ದೇವಾಲಯದ ಅರ್ಚಕರಿಗೆ ತಿಳಿಸಿದ್ದಾರೆ.
ಅಪಾರ ಸಂಖ್ಯೆಯಲ್ಲಿ ಭಕ್ತರನ್ನು ಹೊಂದಿರುವ ಯಲ್ಲಮ್ಮ ದೇವಿಯ ಶಕ್ತಿಗೆ ಹೆದರಿ ಕಳ್ಳರು ವಿಗ್ರಹವನ್ನು ವಾಪಸ್ ಮಾಡಿದ್ದಾರೆ ಎನ್ನುವುದು ಭಕ್ತ ವಲಯಗಳಿಂದ ಕೇಳಿ ಬರುತ್ತಿರುವ ಮಾತು. (ಸ್ವಂತ ಮನೆ ಕನ್ನ ಹಾಕಲು ಗೆಳೆಯನಿಗೆ ಕೀ ಕೊಟ್ಳು)
ಅಂದಾಜು ಏಳು ಲಕ್ಷ ಮಾರುಕಟ್ಟೆ ಬೆಲೆ ಹೊಂದಿರುವ ಈ ಪಂಚಲೋಹದ ವಿಗ್ರಹವನ್ನು ಖರೀದಿಸಲು ವ್ಯಕ್ತಿಗಳು ಹಿಂದೇಟು ಹಾಕಿರುವ ಕಾರಣದಿಂದ ಕಳ್ಳರು ವಿಗ್ರಹವನ್ನು ಬಿಸಾಕಿ ಹೋಗಿರುವ ಸಾಧ್ಯತೆಯೂ ಇದೆ.
ವಿಗ್ರಹದ ಮೇಲೆ ಹಾಕಿದ್ದ ಕೃತಕ ಆಭರಣಗಳನ್ನೂ ಕಳ್ಳರು ಬಿಸಾಕಿ ಹೋಗಿದ್ದಾರೆ. ವಿಷಯ ತಿಳಿದು ಮಾಗಡಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಶ್ವಾನದಳ, ಬೆರಳಚ್ಚು ತಜ್ಞರು ಪರಿಶೀಲಿಸಿದ ಬಳಿಕ ವಿಗ್ರಹವನ್ನು ಠಾಣೆಯಲ್ಲಿ ಇರಿಸಿಕೊಂಡಿದ್ದಾರೆ.
ನವೆಂಬರ್ 2013ರಲ್ಲಿ, ರಾಜ್ಯದಲ್ಲಿ ಭಾರಿ ಸಂಚಲವನ್ನುಂಟುಮಾಡಿದ್ದ ಮೂಡಬಿದಿರೆಯ ಜೈನ ಬಸದಿಯ 15 ರತ್ನಖಚಿತ ವಿಗ್ರಹಗಳನ್ನು ಜುಲೈ 6ರ ರಾತ್ರಿ ಕಳ್ಳತನ ಮಾಡಿದ್ದ ಕಳ್ಳರು ಆ ವಿಗ್ರಹಗಳನ್ನೆಲ್ಲಾ ಸ್ಪೀಡ್ ಪೋಸ್ಟ್ ನಲ್ಲಿ ವಾಪಸ್ ಕಳುಹಿಸಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ. (ಮೂಡಬಿದರೆ ಜೈನ ಬಸದಿಯ ವಿಗ್ರಹ ವಾಪಸ್)
ಕಾಲಿವುಡ್ ಖ್ಯಾತ ನಿರ್ದೇಶಕ ಮತ್ತು ನಿರ್ಮಾಪಕರೂ ಆಗಿರುವ ವಿ ಶೇಖರ್, ಸುಮಾರು ಅಂದಾಜು ಮಾರುಕಟ್ಟೆ ಎಂಬತ್ತು ಕೋಟಿ ರೂಪಾಯಿ ಹಿಂದೂ ವಿಗ್ರಹಗಳ ಸ್ಮಗ್ಲಿಂಗ್ ಪ್ರಕರಣದಲ್ಲಿ ಸಿಕ್ಕಿ, ಅರೆಸ್ಟ್ ಆಗಿದ್ದರು. (ಕಾಲಿವುಡ್ ನಿರ್ದೇಶಕ ಬಂಧನ)