'ಪಕ್ಕೆಲುಬು' ಶಿಕ್ಷಕನ 'ಸಾರಿ' ಕ್ಷಮೆಗೆ ಅರ್ಹವಾಗಿಲ್ಲ: ಸುರೇಶ್ ಕುಮಾರ್
ಬೆಂಗಳೂರು, ಜನವರಿ 14: 'ಪಕ್ಕೆಲುಬು' ವಿಡಿಯೋ ಖ್ಯಾತಿಯ ಶಿಕ್ಷಕ ಇಂದು ಶಿಕ್ಷಣ ಸಚಿವರನ್ನು ಭೇಟಿ ಮಾಡಿ ಕ್ಷಮೆ ಕೋರಿ ಅಮಾನತು ರದ್ದು ಮಾಡುವಂತೆ ಮನವಿ ಮಾಡಿದ್ದಾರೆ. ಆದರೆ ಅವರ ಮನವಿಯಲ್ಲಿ 'ಪಾಪಪ್ರಜ್ಞೆ' ಇಲ್ಲವೆಂದು ಸುರೇಶ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
'ಪಕ್ಕೆಲುಬು' ಖ್ಯಾತಿಯ ಶಿಕ್ಷಕ, ಸಚಿವ ಸುರೇಶ್ ಕುಮಾರ್ ಅವರನ್ನು ಭೇಟಿ ಮಾಡಿ ಕ್ಷಮೆ ಕೋರಿರುವ ಬಗ್ಗೆ ಸುರೇಶ್ ಕುಮಾರ್ ಅವರು ಫೇಸ್ಬುಕ್ ನಲ್ಲಿ ಪೋಸ್ಟ್ ಹಾಕಿದ್ದು, 'ಶಿಕ್ಷಕನ ಕ್ಷಮೆಯ ಕೋರಿಕೆ ಕ್ಷಮೆಗೆ ಅರ್ಹವಾಗಿಲ್ಲ' ಎಂದಿದ್ದಾರೆ.
'ಪಕ್ಕೆಲುಬು' ವಿಡಿಯೋ ಹರಿಬಿಟ್ಟ ಶಿಕ್ಷಕನ ವಿರುದ್ಧ ಶಿಕ್ಷಣ ಸಚಿವ ಗರಂ
'ಶಿಕ್ಷಕ ಆ ಮಗುವಿನ ಜೊತೆ ನಡೆಸಿರುವ ಆ ಕೃತ್ಯದ ಕುರಿತು ವಿಚಾರಿಸಿದಾಗ ಇನ್ನೂ ತಾನು ಮಾಡಿರುವುದು ತಪ್ಪು ಎಂದು ಅವರಿಗೆ ಅನಿಸಿಲ್ಲದಿರುವುದು ಸ್ಪಷ್ಟವಾಯಿತು' ಎಂದು ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
'ಕೇವಲ ತನ್ನ ಅಮಾನತ್ತನ್ನು ರದ್ದುಗೊಳಿಸುವ ಉದ್ದೇಶದಿಂದ "ತಪ್ಪಾಯಿತು" ಎಂದು ಹೇಳಿದರೇ ಹೊರತು, ಅವರ ಮುಖದಲ್ಲಿ ಪಶ್ಚಾತ್ತಾಪದ ಲವಲೇಶವೂ ಇರಲಿಲ್ಲ' ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
"ನಿಮ್ಮ ಜೊತೆ ಈಗ ಮಾತನಾಡಿರುವುದನ್ನು ಸೋಷಿಯಲ್ಮೀಡಿಯಾ ಗೆ ಬಿಡಲೇ" ಎಂದು ಕೇಳಿದಾಗ "ದಯವಿಟ್ಟು ಬೇಡ" ಎಂದ ಆ ಶಿಕ್ಷಕರು ಆ ಆತಂಕದಿಂದ ಕೂಡಿದ ಮಗುವಿನ ವಿಡಿಯೋ ಮಾಡಿಕೊಂಡದ್ದು ಏಕೆ? ಸೋಷಿಯಲ್ ಮೀಡಿಯಾ ಗೆ ಬಿಟ್ಟದ್ದು ಏಕೆ?" ಎಂದು ಕೇಳಿದರೆ ಕೊಟ್ಟ ಉತ್ತರ ಹಾಸ್ಯಾಸ್ಪದವಾಗಿತ್ತು ಎಂದಿದ್ದಾರೆ.
ಒನ್ ಇಂಡಿಯಾ ವರದಿಗೆ ಸ್ಪಂದಿಸಿದ ಶಿಕ್ಷಣ ಸಚಿವರು, ಶಾಲೆಗೆ ಅಧಿಕಾರಿಗಳ ಭೇಟಿ
'ಆ ಮಗುವಿನ ಪೋಷಕರಿಗೆ ತೋರಿಸಲೆಂದು ವಿಡಿಯೋ ಮಾಡಿಕೊಂಡದ್ದೆಂದೂ ಮತ್ತು ತನ್ನ #ಎಂಟು ವರ್ಷದ ಮಗ ಅದನ್ನು ಸೋಷಿಯಲ್ ಮೀಡಿಯಾಗೆ ಬಿಟ್ಟದ್ದೆಂದೂ ಆ ಶಿಕ್ಷಕ ಹೇಳಿದ್ದಾರೆ ಆದರೆ ಇದು ಅಮಾನತ್ತಿನಿಂದ ತಪ್ಪಿಸಿಕೊಳ್ಳಲು ಕೊಟ್ಟ ಕಾರಣವೆಂದು ಸಚಿವರಿಗೆ ಅನ್ನಿಸಿದೆ.
'ಮೊದಲೇ ಸಿದ್ದಪಡಿಸಿಕೊಂಡು ಬಂದಿದ್ದ ಪತ್ರದಲ್ಲಿ ತನ್ನ ಮೇಲೆ ಬಂದಿರುವ ಆರೋಪಗಳೆಲ್ಲಾ ಸತ್ಯಕ್ಕೆ ದೂರವೆಂದೂ, ತನ್ನ ಅಮಾನತ್ತನ್ನು ವಾಪಸ್ಸುಪಡೆಯಬೇಕೆದೂ ಹೇಳುವ ವಿನಃ ಒಂದು ಮಾತೂ ಸಹ ಆ ಮಗುವಿನ ಜೊತೆ ತಾನು ಮಾಡಿದ ಆ ಕೃತ್ಯದ ಬಗ್ಗೆ ಇರಲಿಲ್ಲ' ಎಂದು ಸುರೇಶ್ ಕುಮಾರ್ ಬರೆದುಕೊಂಡಿದ್ದಾರೆ.
'ಆ ಮಗುವಿನ ಬಳಿ ಕ್ಷಮೆ ಕೇಳಿ ಆ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಬಿಡಲು ನೀವು ಸಿದ್ದರಿದ್ದೀರಾ?' ಎಂಬ ಸುರೇಶ್ ಕುಮಾರ್ ಮಾತಿಗೆ ಶಿಕ್ಷಕರು ಮರುಮಾತಾಡಿಲ್ಲ.
'ನಾನು ಈಗ ಏನೂ ಹೇಳುವುದಿಲ್ಲ, ಒಂದೆರಡು ದಿನ ಕಳೆಯಲಿ ಎಂದು ಹೇಳಿಕಳಿಸಿದೆ. ಆಗಾದರೂ ಪಶ್ಚಾತ್ತಾಪ ಮೂಡಬಹುದೇ, ನೋಡೋಣ' ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.
ಹೂವಿನಹಡಗಲಿ ತಾಲೂಕಿನ ಕುರುವತ್ತಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಟಿ.ಚಂದ್ರಶೇಖರಪ್ಪ ಅವರು ತಮ್ಮ ಶಾಲೆಯ ವಿದ್ಯಾರ್ಥಿಯೊಬ್ಬ 'ಪಕ್ಕೆಲುಬು' ಪದವನ್ನು ಸರಿಯಾಗಿ ಉಚ್ಛರಿಸಲಾಗದೆ ಕಷ್ಟಪಡುತ್ತಿದ್ದುದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು.
ಇದನ್ನು ಗಮನಿಸಿದ ಸಚಿವ ಸುರೇಶ್ ಕುಮಾರ್, ಶಿಕ್ಷಕನನ್ನು ಅಮಾನತುಗೊಳಿಸುವಂತೆ ಆದೇಶ ನೀಡಿದ್ದರು.