ಪಾಕಿಸ್ತಾನ್ ಜಿಂದಾಬಾದ್ ಎಂದ ಅಮೂಲ್ಯ ಲಿಯೋನಾ ಪರಪ್ಪನ ಅಗ್ರಹಾರ ಜೈಲಿಗೆ
ಬೆಂಗಳೂರು, ಫೆಬ್ರವರಿ 21: ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಗುರುವಾರ ನಡೆದ ಸಿಎಎ ವಿರೋಧಿ ಪ್ರತಿಭಟನೆಯಲ್ಲಿ 'ಪಾಕಿಸ್ತಾನ ಜಿಂದಾಬಾದ್' ಎಂದು ಘೋಷಣೆ ಕೂಗಿ ಬಂಧಿತಳಾಗಿರುವ ಯುವತಿ ಅಮೂಲ್ಯ ಲಿಯೋನಾಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಘೋಷಣೆ ಕೂಡಿದ ಅಮೂಲ್ಯಳನ್ನು ಕೂಡಲೇ ಬಂಧಿಸಿದ್ದ ಪೊಲೀಸರು ಆಕೆಯ ವಿರುದ್ಧ ರಾಜದ್ರೋಹ ಪ್ರಕರಣ ದಾಖಲಿಸಿದ್ದರು. ಬಳಿಕ 5ನೇ ಎಸಿಎಂಎಂ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿತ್ತು. ಅಮೂಲ್ಯಳಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ನ್ಯಾಯಾಧೀಶರಾದ ಶಿರಿನ್ ಜೆ. ಅನ್ಸಾರಿ ಆದೇಶಿಸಿದರು.
'ಪಾಕಿಸ್ತಾನ್ ಜಿಂದಾಬಾದ್' ಎಂದ ಅಮೂಲ್ಯ ಲಿಯೋನ್ ಯಾರು?
ಅಮೂಲ್ಯಳನ್ನು ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಸ್ಥಳಾಂತರ ಮಾಡಲಾಗಿದೆ. ಪೊಲೀಸರು ವಾಹನದಲ್ಲಿ ಕರೆಯುವ ವೇಳೆಯೂ ಅಮೂಲ್ಯ ತಮ್ಮ ಪುಂಡಾಟಿಕೆ ಮುಂದುವರಿಸಿದ್ದರು ಎನ್ನಲಾಗಿದೆ.
ಪೊಲೀಸ್ ವಾಹನದಲ್ಲಿ ಕರೆದೊಯ್ಯುವಾಗ ಬೆಂಬಲಿಗನೊಬ್ಬ 'ಹಮ್ ತುಮ್ಹಾರೆ ಸಾಥ್ ಹೇ' ಎಂದು ಕೂಗಿದ. ವಾಹನದೊಳಗೆ ಕುಳಿತಿದ್ದ ಅಮೂಲ್ಯ 'ಸಾಥ್ ಹೇ' ಎಂದು ಕೂಗಿದರು ಎಂದು ಹೇಳಲಾಗಿದೆ.
ಅಮೂಲ್ಯ ಲಿಯೋನಾ ವಿರುದ್ಧ ರಾಜದ್ರೋಹ ಪ್ರಕರಣ ದಾಖಲು
ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಅಮೂಲ್ಯ ವಿರುದ್ಧ ಐಪಿಸಿ ಸೆಕ್ಷನ್ 124ಎ, 153 ಎ ಮತ್ತು 153 ಬಿ ಅಡಿ ಪ್ರಕರಣಗಳನ್ನು ದಾಖಲಿಸಲಾಗಿದೆ. ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಟಿಪ್ಪು ಸುಲ್ತಾನ್ ಯುನೈಟೆಡ್ ಫ್ರೆಂಟ್ ಆಯೋಜಿಸಿದ್ದ ಕಾರ್ಯಕ್ರಮದ ಸಂಪೂರ್ಣ ವಿಡಿಯೋವನ್ನು ಚಿತ್ರೀಕರಣ ಮಾಡಲಾಗಿದೆ. ಇದನ್ನು ಪರಿಶೀಲಿಸಿ ಅಮೂಲ್ಯ ಲಿಯೋನಾಗೆ ಪಾಕಿಸ್ತಾನ ಪರ ಘೋಷಣೆ ಕೂಗಲು ಪ್ರಚೋದನೆ ನೀಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ರಮೇಶ್ ತಿಳಿಸಿದ್ದಾರೆ.