ಅಧಿವೇಶನದಲ್ಲಿ ಪಾಕಿಸ್ತಾನ, ಇಮ್ರಾನ್ ಖಾನ್, ಅಫ್ಜಲ್ ಗುರು, ಮಸೂದ್ ಅಜರ್!
ಬೆಂಗಳೂರು, ಫೆಬ್ರವರಿ 18: ಅಧಿವೇಶನ ಆರಂಭವಾಗಿ ಕೆಲ ಹೊತ್ತಿನಲ್ಲೇ ಆಡಳಿತ ವಿಪಕ್ಷಗಳ ನಡುವೆ ಮಾತಿನ ಸಮರ ಪ್ರಾರಂಭವಾಗಿದೆ.
ಸುದ್ದಿ ಮಾಧ್ಯಮಗಳಿಗೆ ನಿಷೇಧ ಹೇರಿರುವ ಬಗ್ಗೆ ಆರಂಭವಾದ ಚರ್ಚೆ ತಿರುವು ಪಡೆದುಕೊಂಡು, ಇಮ್ರಾನ್ ಖಾನ್, ಅಪ್ಜಲ್ ಗುರು, ಮಸೂದ್ ಅಜರ್, ಕನ್ಹಯ್ಯ ಕುಮಾರ್, ಅಮಿತ್ ಶಾ, ಮೋದಿ ಹೆಸರುಗಳೆಲ್ಲವೂ ಸದನದಲ್ಲಿ ಕೇಳಿಬಂತು.
ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಮಾತನಾಡುತ್ತಾ 'ತುಕ್ಡೆ-ತುಕ್ಡೆ ಗ್ಯಾಂಗ್' ಎಂದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ, 'ಯಾವುದು ತುಕ್ಡೆ-ತುಕ್ಡೆ ಗ್ಯಾಂಗ್' ವಿವರಿಸಿ ಎಂದರು. ಇದಕ್ಕೆ ಬಸವರಾಜ ಬೊಮ್ಮಾಯಿ, ನೀವೆ ತುಕ್ಡೆ-ತುಕ್ಡೆ ಗ್ಯಾಂಗ್ ನ ಮುಖ್ಯಸ್ಥರು ಎಂದು ಕಾಂಗ್ರೆಸ್ ಶಾಸಕರನ್ನು ಕೆಣಕಿದರು.
ಇದಕ್ಕೆ ಸಿಟ್ಟಿಗೆದ್ದ ಪ್ರಿಯಾಂಕ್ ಖರ್ಗೆ, 'ಕೇಂದ್ರ ಗೃಹ ಇಲಾಖೆಯೇ ಹೇಳಿದೆ, ತುಕ್ಡೆ-ತುಕ್ಡೆ ಗ್ಯಾಂಗ್ ಎಂಬುದಾವುದೂ ಇಲ್ಲ, ಆ ರೀತಿಯ ಯಾವುದೇ ಗ್ಯಾಂಗ್ ಅಸ್ಥಿತ್ವದಲ್ಲೇ ಇಲ್ಲವೆಂದು ಅಮಿತ್ ಶಾ ಕಚೇರಿಯೇ ಹೇಳಿದೆ, ಹಾಗಿದ್ದಮೇಲೆ ಏಕೆ ಸುಮ್ಮನೆ ಸುಳ್ಳು ಹೇಳುತ್ತೀರಿ' ಎಂದು ಮರುವಾಗ್ದಾಳಿ ನಡೆಸಿದರು.
ಗೃಹ ಸಚಿವರಿಗೆ ಪ್ರಿಯಾಂಕ್ ಖರ್ಗೆ ಸವಾಲು
ಪ್ರಿಯಾಂಕ್ ಖರ್ಗೆ ಮಾತಿಗೆ ಮಾತು ಬೆಳೆಸಿದ ಬಸವರಾಜ ಬೊಮ್ಮಾಯಿ, 'ದಾಖಲೆಯೊಂದನ್ನು ತೋರಿಸುತ್ತಾ ನೀವು ತುಕ್ಡೆ-ತುಕ್ಡೆ ಗ್ಯಾಂಗ್ ಸದಸ್ಯರು, ದೇಶದ್ರೋಹಿಗಳನ್ನು ಬಂಧಿಸಿದಾಗ ನೀವು ಅಡ್ಡಿಪಡಿಸುತ್ತೀರಿ' ಎಂದರು. ನಾವು ತುಕ್ಡೆ-ತುಕ್ಡೆ ಗ್ಯಾಂಗ್ ನವರಾಗಿದ್ದರೆ ನಮ್ಮನ್ನು ಬಂಧಿಸಿ ನೋಡೋಣ, ಅದ್ಯಾವ ಆಧಾರದಲ್ಲಿ, ಅದ್ಯಾವ ಸೆಕ್ಷನ್ ಅಡಿ ನಮ್ಮನ್ನು ಬಂಧಿಸುತ್ತೀರಿ ನೋಡೋಣ' ಎಂದು ಪ್ರಿಯಾಂಕ್ ಖರ್ಗೆ ಸವಾಲು ಹಾಕಿದರು.
ಕನ್ಹಯ್ಯ ಕುಮಾರ್ ಗೆ ಬೆಂಬಲ ಕೊಡುತ್ತೀರಿ: ಬೊಮ್ಮಾಯಿ
ಮಾತು ಮುಂದುವರೆಸಿದ ಗೃಹ ಸಚಿವರು, ಅಫ್ಜಲ್ ಗುರು ವನ್ನು ನೇಣಿಗೆ ಹಾಕಿದ್ದಕ್ಕೆ ನೀವು ವಿರೋಧ ವ್ಯಕ್ತಪಡಿಸಿದ್ದೀರಿ. ದೇಶ ವಿರೋಧಿ ಘೋಷಣೆ ಕೂಗಿದ ಕನ್ಹಯ್ಯ ಕುಮಾರ್ ಗೆ ಬೆಂಬಲ ಕೊಡುತ್ತೀರಿ' ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಅಜರ್ ಮಸೂದ್ ಅನ್ನು ಪಾಕ್ ಗೆ ಕೊಟ್ಟವರು ಯಾರು? ದಿನೇಶ್ ಪ್ರಶ್ನೆ
ಈ ಮಧ್ಯೆ ಎದ್ದು ನಿಂತ ದಿನೇಶ್ ಗುಂಡೂರಾವ್, 'ನಾವು (ಕಾಂಗ್ರೆಸ್) ಬಂಧಿಸಿದ್ದ ಮಸೂದ್ ಅಜರ್ ಅನ್ನು ಕರಾಚಿಗೆ ಕರೆದುಕೊಂಡು ಹೋಗಿ ಬಿಟ್ಟು ಬಂದದ್ದು ಯಾರು? ಇತಿಹಾಸ ಗೊತ್ತಿಲ್ಲದೆ ಮಾತನಾಡಬೇಡಿ' ಎಂದು ಗೃಹ ಸಚಿವರಿಗೆ ಇತಿಹಾಸದ ಪಾಠ ಮಾಡಿದರು. ಇವರಿಗೆ ಕಾಂಗ್ರೆಸ್ ಶಾಸಕ ಕೆ.ಜೆ.ಜಾರ್ಜ್ ಸಹ ಸಾಥ್ ನೀಡಿದರು.
ಸುಳ್ಳು ಸುದ್ದಿಯ ಮೇಲೆ ವಾದ: ಕೃಷ್ಣಬೈರೇಗೌಡ ವಾಗ್ದಾಳಿ
ಇಷ್ಟಕ್ಕೆ ಸುಮ್ಮನಾಗದ ಬಸವರಾಜ ಬೊಮ್ಮಾಯಿ ಅವರು, 'ಪಾಕಿಸ್ತಾನದ ಪ್ರೇಮಿಗಳು ನೀವು, ನಿಮ್ಮ ಮಾತು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಮಾತುಗಳನ್ನು ಹೋಲುತ್ತಿದೆ' ಎಂದರು. ಈ ಮಾತಿಗೆ ಎದ್ದು ನಿಂತ ಶಾಸಕ ಕೃಷ್ಣಬೈರೇಗೌಡ, 'ಗೃಹ ಸಚಿವರು ಮಾತನಾಡುವ ಮಾತುಗಳೇ ಇವು, ಸಚಿವ ಸ್ಥಾನದ ಜವಾಬ್ದಾರಿ ಗೊತ್ತಿಲ್ಲದೆ, ಸುಳ್ಳು ಸುದ್ದಿಗಳ ಆಧಾರದಲ್ಲಿ ಸದನದಲ್ಲಿ ಸಚಿವರು ಮಾತನಾಡುತ್ತಿದ್ದಾರೆ' ಎಂದು ಸ್ಪೀಕರ್ ಉದ್ದೇಶಿಸಿ ದೂರಿದರು.
ಬಿಜೆಪಿ ಶಾಸಕರಿಗೆ ಮನವಿ ಮಾಡಿದ ಯಡಿಯೂರಪ್ಪ
ಈ ವೇಳೆಗೆ ಸಿದ್ದರಾಮಯ್ಯ ಎದ್ದು ನಿಂತರು, ಚರ್ಚೆ ಸ್ವಲ್ಪ ಶಾಂತವಾಯಿತು. ಆಡಳಿತ ಪಕ್ಷದ ಕಡೆಯಿಂದ ಯಡಿಯೂರಪ್ಪ ಎದ್ದು ನಿಂತು, 'ಸಿದ್ದರಾಮಯ್ಯ ಅವರಿಗೆ ಮಾತನಾಡಲು ಬಿಡಿ ಎಂದು ಬಿಜೆಪಿ ಶಾಸಕರಲ್ಲಿ ಮನವಿ ಮಾಡಿದಾಗ, ಬಸವರಾಜ ಬೊಮ್ಮಾಯಿ ಸೇರಿದಂತೆ ಎಲ್ಲರೂ ಸುಮ್ಮನಾದರು'.
ಯಡಿಯೂರಪ್ಪ ಅನುಭವ ಹೊಗಳಿದ ಸಿದ್ದರಾಮಯ್ಯ
ಮಾತು ಆರಂಭಿಸಿದ ಸಿದ್ದರಾಮಯ್ಯ, 'ನಿಮಗೆ (ಯಡಿಯೂರಪ್ಪ) ಅನುಭವ ಇದೆ, ಆದರೆ ನಿಮಗೆ (ಬಿಜೆಪಿ ಕೆಲ ಶಾಸಕರಿಗೆ) ಅನುಭವದ ಕೊರತೆ ಇದೆ, ಅದಕ್ಕೆ ಹೀಗಾಗುತ್ತಿದೆ' ಎನ್ನುತ್ತಾ ಮಾತು ಪ್ರಾರಂಭಿಸಿದರು.