'ಪಾಕ್' ಘೋಷಣೆ; ವಿಚಾರಣೆ ವೇಳೆ ಬಿಕ್ಕಳಿಸಿ ಅತ್ತ ಅಮೂಲ್ಯ ಲಿಯೋನಾ
ಬೆಂಗಳೂರು, ಫೆಬ್ರವರಿ 26: ಪಾಕಿಸ್ತಾನ್ ಜಿಂದಾಬಾದ್' ಎಂದು ಘೋಷಣೆ ಕೂಗಿದ್ದಕ್ಕೆ ಬಂಧಿತರಾಗಿರುವ ಅಮೂಲ್ಯ ಲಿಯೋನ್ರನ್ನು 4 ದಿನಗಳ ಕಾಲ ಪೊಲೀಸರ ವಶಕ್ಕೆ ನೀಡಲಾಗಿದೆ. ಪಶ್ಚಿಮ ವಿಭಾಗದ ಬಸವೇಶ್ವರ ನಗರ ಠಾಣೆಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ.
Recommended Video
ಈ ವೇಳೆ ಅಮೂಲ್ಯ ಲಿಯೋನಾಳ ಬಳಿ ಪೊಲೀಸರು ಹತ್ಯೆಯಾದ ಗೌರಿ ಲಂಕೇಶ್ ಹೆಸರು ಪ್ರಸ್ತಾಪ ಮಾಡಿದಾಗ, ಬಿಕ್ಕಳಿಸಿ ಅತ್ತಿದ್ದಾಳೆ ಎಂದು ತಿಳಿದು ಬಂದಿದೆ. ಅಮೂಲ್ಯ ಲಿಯೋನಾ ಗೌರಿ ಚಿಂತನೆಗಳಲ್ಲಿ ತೊಡಗಿಸಿಕೊಂಡು ಅವರಂತೆ ಬೆಳೆಯಬೇಕು ಎಂದು ಆಶಯ ಹೊಂದಿದ್ದಳಂತೆ.
ಪಶ್ಚಿಮ ವಿಭಾಗದ ಡಿಸಿಪಿ ಬಿ ರಮೇಶ್ ಅವರ ನೇತೃತ್ವದಲ್ಲಿ ತನಿಖೆ ನಡೆಯುತ್ತಿದ್ದು, ಜಯನಗರದ ಎನ್ಎಂಕೆಆರ್ವಿ ಕಾಲೇಜಿಗೂ ವಿಚಾರಣೆಗಾಗಿ ಕರೆತರುವ ಸಾದ್ಯತೆ ಇದೆ.
ಪಾಕ್ ಪರ ಘೋಷಣೆ; ಸಮಾವೇಶ ಆಯೋಜಿಸಿದ್ದ ಸಂಘಟಕರಿಗೆ ಪೊಲೀಸ್ ಬುಲಾವ್
ಸ್ನೇಹಿತರ ವಿಚಾರಣೆ
ಬುಧವಾರ ಬಸವೇಶ್ವರ ನಗರ ಪೊಲೀಸ್ ಠಾಣೆಗೆ ಕರೆ ತಂದು ವಿಚಾರಣೆ ನಡೆಸಿದ ಪೊಲೀಸರು, ಪಾಕ್ ಜಿಂದಾಬಾದ್ ಎಂದು ಕೂಗಿದ್ದೇಕೆ ಎಂಬುದರ ಬಗ್ಗೆ ತೀವ್ರ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಅಮೂಲ್ಯಳ ಸ್ನೇಹಿತರನ್ನು ಠಾಣೆಗೆ ಕರೆಯಿಸಿ ಪೊಲೀಸರು ವಿಚಾರಣೆ ನಡೆಸಿದ್ದಾರೆ ಎಂಬುದು ತಿಳಿದು ಬಂದಿದೆ. ಮುಂಜಾಗ್ರತಾ ಕ್ರಮವಾಗಿ ಠಾಣೆಯ ಸುತ್ತ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ.
ಪೊಲೀಸರ ವಶಕ್ಕೆ
ಮಂಗಳವಾರ ರಾತ್ರಿ 5ನೇ ಎಸಿಎಂಎಂ ನ್ಯಾಯಾಧೀಶರ ನಿವಾಸಕ್ಕೆ ಅಮೂಲ್ಯರನ್ನು ಪೊಲೀಸರು ಹಾಜರುಪಡಿಸಿದ್ದರು. ನ್ಯಾಯಾಧೀಶರು ನಾಲ್ಕು ದಿನಗಳ ಕಾಲ ಪೊಲೀಸರ ವಶಕ್ಕೆ ನೀಡಿ ಆದೇಶ ಹೊರಡಿಸಿದ್ದರು. ಪೊಲೀಸರು ಭದ್ರತೆ ದೃಷ್ಠಿಯಿಂದ ವಿಡಿಯೋ ಕಾನ್ಪರೆನ್ಸ್ ಮೂಲಕ ವಿಚಾರಣೆ ನಡೆಸಲು ಕೋರಿದ್ದರು. ಆದರೆ ನ್ಯಾಯಾಧೀಶರು ಪೊಲೀಸರ ಬೇಡಿಕೆಯನ್ನು ತಿರಸ್ಕರಿಸಿದ್ದರು.
ಪಾಕಿಸ್ತಾನ್ ಜಿಂದಾಬಾದ್ ಎಂದಿದ್ದಳು
ಕಳೆದ ಗುರುವಾರ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಸಿಎಎ ವಿರೋಧಿ ಹೋರಾಟದಲ್ಲಿ ಪಾಲ್ಗೊಂಡಿದ್ದ ಅಮೂಲ್ಯ ಲಿಯೋನ್ 'ಪಾಕಿಸ್ತಾನ್ ಜಿಂದಾಬಾದ್' ಎಂದು ಘೋಷಣೆ ಕೂಗಿದ್ದರು. ಆದ್ದರಿಂದ, ಅವರನ್ನು ಬಂಧಿಸಲಾಗಿತ್ತು. ಉಪ್ಪಾರಪೇಟೆ ಠಾಣೆ ಪೊಲೀಸರು ಅಮೂಲ್ಯಳನ್ನು ಬಂಧಿಸಿದ್ದರು.
ನಾಲ್ಕು ದಿನ ಪೊಲೀಸ್ ಕಸ್ಟಡಿಗೆ
ಫೆಬ್ರವರಿ 20ರ ಗುರುವಾರ ಅಮೂಲ್ಯರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಪರಪ್ಪನ ಅಗ್ರಹಾರ ಜೈಲಿನಲ್ಲಿ ಅವರು ಇದ್ದರು. ಪೊಲೀಸರು ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ನೀಡುವಂತೆ ಮನವಿ ಮಾಡಿದ ಹಿನ್ನಲೆಯಲ್ಲಿ 4 ದಿನಗಳ ಕಾಲ ಪೊಲೀಸರ ವಶಕ್ಕೆ ನೀಡಲಾಗಿದೆ.