ಚಿತ್ರಕಲಾ ಪರಿಷತ್ತಿನಲ್ಲಿ ರೂಪಾ ಠಕ್ಕರ್ ಕಲಾಕೃತಿ ಪ್ರದರ್ಶನ
ಬೆಂಗಳೂರು, ಜು. 6 : ಖ್ಯಾತ ಕುಂಚ ಕಲಾವಿದೆ ರೂಪಾ ಠಕ್ಕರ್ ಅವರ ಕೈಯಲ್ಲಿ ಅರಳಿರುವ ಕಲಾಕೃತಿಗಳ ಪ್ರದರ್ಶನವನ್ನು ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷರಾದ ಡಾ: ಬಿ. ಎಲ್. ಶಂಕರ್ ಅವರು ಸೋಮವಾರ ಚಿತ್ರಕಲಾ ಪರಿಷತ್ತಿನಲ್ಲಿ ಉದ್ಘಾಟಿಸಿದರು.
ರೂಪಾ ಠಕ್ಕರ್ ಅವರ Art Du Coeur ಎಂಬ ಪುಸ್ತಕ ಕೂಡ ಈ ಸಮಯದಲ್ಲಿ ಬಿಡುಗಡೆಯಾಯಿತು. ಇವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನು ಸಾರ್ವಜನಿಕರು ಜುಲೈ 12ರವರೆಗೆ ಬೆಳಿಗ್ಗೆ 10 ಗಂಟೆಗೆಯಿಂದ ರಾತ್ರಿ 7.30ರವರೆಗೆ ಚಿತ್ರಕಲಾ ಪರಿಷತ್ತಿನಲ್ಲಿ ವೀಕ್ಷಿಸಬಹುದಾಗಿದೆ.
ಅವರು ಬಿಡಿಸಿರುವ ಚಿತ್ರಗಳು ಭಾರತದಲ್ಲಷ್ಟೇ ಅಲ್ಲದೆ ಹೊರ ದೇಶಗಳ ಮನೆ ಮನೆಗಳಲ್ಲಿ ಕಲಾಕೃತಿಗಳಾಗಿ ಅಲಂಕರಿಸಿವೆ. ಬಣ್ಣಗಳು ಮನಸ್ಸಿಗೆ ಉಲ್ಲಾಸವನ್ನು ನೀಡುವುದರಿಂದ ಬಣ್ಣಗಳಿಂದ ನಮ್ಮ ಭಾವನೆಗಳನ್ನು ಹೊರಹಾಕಬಹುದು. ಆದ್ದರಿಂದ ಚಿತ್ರಕಲೆಯ ಹವ್ಯಾಸವನ್ನು ಮುಂದುವರೆಸಿಕೊಂಡು ಹೋಗುತ್ತಿರುವುದಾಗಿ ರೂಪಾ ಅವರು ತಿಳಿಸಿದರು. [ಕಲಾಂ ಮೆಚ್ಚಿದ ತೈಲವರ್ಣ ಚಿತ್ರ ಬಿಡಿಸಿದವರು ಯಾರು?]
ರೂಪಾ ಠಕ್ಕರ್ ಹಿನ್ನೆಲೆ : ದಿವಂಗತ ಕಾದಂಬರಿಗಾರ್ತಿಯಾದ ಗೀತಾ ಕುಲಕರ್ಣಿ ಹಾಗೂ ಕವಿಯಾಗಿದ್ದ ಶೇಷಗಿರಿರಾವ್ ಕುಲಕರ್ಣಿ ಪುತ್ರಿಯಾದ ರೂಪಾ ಅವರು ಧಾರವಾಡದಲ್ಲಿ ವಿದ್ಯಾಭ್ಯಾಸವನ್ನು ಮುಗಿಸಿದ ಬಳಿಕ ಹುಬ್ಬಳ್ಳಿಯ ಠಕ್ಕರ್ ಮನೆತನದ ಉದ್ಯಮಿಯಾದ ಮಧುಕರ್ ಅವರನ್ನು ವಿವಾಹವಾದರು.
ಕಲಾವಿದರಾದ ದಿವಂಗತ ಕೆ.ಟಿ. ಆಳ್ವ ಇವರ ತಾತಾ, ಮತ್ತು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ದಿವಂಗತ ಶಿವರಾಮ ಕಾರಂತರು ಇವರ ದೊಡ್ಡಪ್ಪ, ಮತ್ತು ಮಾವ ಅನಿಲ್ ಖ್ಯಾತ ರಂಗಕರ್ಮಿ. ಇಂತಹ ಖ್ಯಾತ ಸಾಹಿತಿಗಳು ಮತ್ತು ಕಲಾವಿದರ ಒಡನಾಟದಲ್ಲಿ ಬೆಳದ ಕುಡಿ ರೂಪಾ. [ಅಂದು ಉಪನ್ಯಾಸಕಿ, ಇಂದು ಸಾಹಿತ್ಯ ಪ್ರಸಾರಕಿ]
ಗೃಹಿಣಿಯಾಗಿರುವ ರೂಪಾ ಅವರು ತಮಗೆ ಸಹಜವಾಗಿ ಒಲಿದು ಬಂದ ಈ ಕಲೆಯನ್ನು ಯಾವುದೇ ರೀತಿಯ ತರಬೇತಿಯನ್ನು ಪಡೆಯದೆ ತಮ್ಮದೇ ಆದ ಶೈಲಿಯಲ್ಲಿ ತೈಲವರ್ಣ, ಆಕ್ರಿಲಿಕ್ ಮತ್ತು ಮಿಶ್ರ ಮಾಧ್ಯಮಗಳ ಮೂಲಕ ಕಲಾಕೃತಿಗಳನ್ನು ತಯಾರಿಸುತ್ತಾ ಬಂದಿದ್ದಾರೆ.
ಇವರ ಕಲಾಭಿರುಚಿಯನ್ನು ಗುರುತಿಸಿದ ಪತಿ ಹಾಗೂ ಅತ್ತೆ ಮಾವಂದಿರು ಪ್ರೋತ್ಸಾಹಿಸಿದರು. ಅದರ ಪರಿಣಾಮವಾಗಿ ಇಬ್ಬರು ಮಕ್ಕಳ ಲಾಲನೆ ಪಾಲನೆಯನ್ನು ಮಾಡುತ್ತಲೆ ತಮ್ಮ ಹವ್ಯಾಸವನ್ನು ಮುಂದುವರಿಸಿಕೊಂಡು ಬಂದಿರುವ ರೂಪಾರವರು ಈ ವಯಸ್ಸಿನಲ್ಲೂ ಕಲಾವಿದರಾಗಿ ತಮ್ಮನ್ನು ತೊಡಗಿಸಿಕೊಂಡು ಹುಬ್ಬಳ್ಳಿಯಲ್ಲಿ ನೆಲೆಸಿದ್ದಾರೆ.