ಅಂತೂ-ಇಂತೂ ಪಾದರಾಯನಪುರ ಕಾರ್ಪೋರೇಟರ್ ಆಸ್ಪತ್ರೆಗೆ ಶಿಫ್ಟ್!
ಬೆಂಗಳೂರು, ಮೇ.30: ಪಾದರಾಯನಪುರ ಬೆಂಗಳೂರಿನ ಮಟ್ಟಿಗೆ ನೊವೆಲ್ ಕೊರೊನಾ ವೈರಸ್ ಹಾಟ್ ಸ್ಪಾಟ್. ಇದೇ ವಾರ್ಡ್ ಕಾರ್ಪೋರೇಟರ್ ಇಮ್ರಾನ್ ಪಾಷಾರಿಗೂ ಕೊರೊನಾ ವೈರಸ್ ಸೋಂಕು ತಗಲಿರುವುದು ದೃಢಪಟ್ಟಿದೆ.
ಕೊವಿಡ್-19 ಆಸ್ಪತ್ರೆಗೆ ತೆರಳುವುದಕ್ಕೆ ಆರಂಭದಲ್ಲಿ ತಗಾದೆ ತೆಗೆದಿದ್ದ ಪಾದರಾಯನಪುರ ಕಾರ್ಪೋರೇಟರ್ ಇಮ್ರಾನ್ ಪಾಷಾರನ್ನು ಶನಿವಾರ ಆರೋಗ್ಯ ಅಧಿಕಾರಿಗಳು ವಿಶೇಷ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.
653ನೇ ಸೋಂಕಿತನಿಂದ ನಿಲ್ಲದ ತಲೆನೋವು, ಪಾದರಾಯನಪುರ ಹಿಂದಿಕ್ಕುವತ್ತ ಶಿವಾಜಿನಗರ?
ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಐಸೋಲೇಷನ್ ವಾರ್ಡ್ ನಲ್ಲಿ ಕಾರ್ಪೋರೇಟರ್ ಇಮ್ರಾನ್ ಪಾಷಾರಿಗೆ ಚಿಕಿತ್ಸೆ ನೀಡುವುದಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಕಾರ್ಪೋರೇಟರ್ ಪ್ರಾಥಮಿಕ ಸಂಪರ್ಕದಲ್ಲಿ ಇದ್ದವರನ್ನು ಪತ್ತೆ ಮಾಡಲಾಗುತ್ತಿದೆ.
ಕಿಟ್ ವಿತರಣೆ ವೇಳೆ ಅಂಟಿಕೊಂಡಿತಾ ಕೊರೊನಾ ವೈರಸ್?
ಪಾದರಾಯನಪುರದಲ್ಲಿ ಕೊರೊನಾ ವೈರಸ್ ಕಿಟ್ ಗಳನ್ನು ವಿತರಿಸಲು ತೆರಳಿದ್ದ ವೇಳೆ ಕಾರ್ಪೋರೇಟರ್ ಇಮ್ರಾನ್ ಪಾಷಾರಿಗೆ ಮಹಾಮಾರಿ ಅಂಟಿಕೊಂಡಿತಾ ಎಂಬ ಅನುಮಾನ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ರಕ್ತ ಮತ್ತು ಗಂಟಲು ಮಾದರಿ ಪರೀಕ್ಷೆ ನಡೆಸಿದಾಗ ಸೋಂಕು ತಗಲಿರುವುದು ದೃಢಪಟ್ಟಿತ್ತು.
20ಕ್ಕಿಂತ ಹೆಚ್ಚು ಜನರ ಜೊತೆ ಪ್ರಾಥಮಿಕ ಸಂಪರ್ಕ
ಪಾದರಾಯನಪುರ ಕಾರ್ಪೋರೇಟರ್ ಇಮ್ರಾನ್ ಪಾಷಾ ಒಬ್ಬ ಜನಪ್ರತಿನಿಧಿಯಾಗಿದ್ದು ಸಾಕಷ್ಟು ಜನರ ಜೊತೆ ಸಂಪರ್ಕದಲ್ಲಿರುತ್ತಾರೆ. ಅಂಥವರಿಗೆಲ್ಲ ಮಹಾಮಾರಿ ಅಂಟಿಕೊಂಡಿದೆಯಾ ಎನ್ನುವುದನ್ನು ಮತ್ತೊಮ್ಮೆ ಪರಾಮರ್ಶೆ ನಡೆಸಬೇಕಾಗಿದೆ. ಹೀಗಾಗಿ ಕಾರ್ಪೋರೇಟರ್ ಜೊತೆಗೆ ಪ್ರಾಥಮಿಕ ಸಂಪರ್ಕದಲ್ಲಿದ್ದವರ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತಿದೆ.
ಕಾರ್ಪೋರೇಟರ್ ನಿವಾಸಕ್ಕೆ ಶಾಸಕ ಜಮೀರ್ ಅಹ್ಮದ್
ಪಾದರಾಯನಪುರದಲ್ಲಿ ಇರುವ ಕಾರ್ಪೋರೇಟರ್ ಇಮ್ರಾನ್ ಪಾಷಾ ನಿವಾಸಕ್ಕೆ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಭೇಟಿ ನೀಡಿದರು. ಇದರ ಬೆನ್ನಲ್ಲೇ ವಿಕ್ಟೋರಿಯಾ ಆಸ್ಪತ್ರೆಗೆ ಕಾರ್ಪೋರೇಟರ್ ಇಮ್ರಾನ್ ಪಾಷಾರನ್ನು ಆರೋಗ್ಯಾಧಿಕಾರಿಗಳು ಕರೆದುಕೊಂಡು ಹೋದರು. ನಂತರದಲ್ಲಿ ಇಮ್ರಾನ್ ಪಾಷಾರ ನಿವಾಸಕ್ಕೆ ಸ್ಯಾನಿಟೈಸ್ ಮಾಡಲಾಯಿತು.
ಕಾರ್ಪೋರೇಟರ್ ವಿರುದ್ಧ ಕಿಡಿ ಕಾರಿದ ಆರ್.ಅಶೋಕ್
ಪಾದರಾಯನಪುರ ಕಾರ್ಪೋರೇಟರ್ ಇಮ್ರಾನ್ ಪಾಷಾ ಮೊದಲಿನಿಂದಲೂ ತರಲೆ ಮಾಡುತ್ತಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋರ್ ಕಿಡಿ ಕಾರಿದ್ದಾರೆ. ಕೊರೊನಾ ವೈರಸ್ ಪಾಸಿಟಿವ್ ಎಂದು ದೃಢಪಟ್ಟ ಮೇಲೆ ಆಸ್ಪತ್ರೆಗೆ ಹೋಗಬೇಕು. ಅದನ್ನು ಬಿಟ್ಟು ವಾರ್ಡ್ ಗಳ ಎಲ್ಲ ಕಡೆಯೂ ಓಡಾಡಿದ್ದಾರೆ. ವೈದ್ಯರಿಗೆ ಸರಿಯಾಗಿ ಸಹಕಾರ ಕೊಡುತ್ತಿಲ್ಲ. ಅಧಿಕಾರಿಗಳು ಆತನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ಪಾದರಾಯನಪುರ ಕಾರ್ಪೋರೇಟರ್ ವಿರುದ್ಧ ಸೋಮಣ್ಣ ಸಿಡಿಮಿಡಿ
ಪಾದರಾಯನಪುರ ಕಾರ್ಪೋರೇಟರ್ ಇಮ್ರಾನ್ ಪಾಷಾ ವಿರುದ್ಧ ಸಚಿವ ವಿ.ಸೋಮಣ್ಣ ಸಿಡಿಮಿಡಿಗೊಂಡಿದ್ದಾರೆ. ಕಾರ್ಪೋರೇಟರ್ ಆದ್ರೇನು ಬೇರೆ ಆದ್ರೇನು, ಎಲ್ಲರೂ ಕಾನೂನಿಗೆ ಬೆಲೆ ಕೊಡಬೇಕು. ಎಲ್ಲರೂ ಕಾನೂನು ನಿಯಮ ಪಾಲಿಸಬೇಕು. ಇಂಗ್ಲೆಂಡ್ ಪ್ರಧಾನಿಯೇ ಕ್ವಾರೆಂಟೈನ್ ಆಗಿದ್ದರು, ಇನ್ನು ಕಾರ್ಪೊರೆಡಟರ್ ಯಾವ್ ಲೆಕ್ಕ ಹೇಳಿ. ಕೋತಿ ತಾನು ಕೆಟ್ಟಿತು ಅಂತಾ ಹೊಲವೆಲ್ಲ ಕೆಡಿಸಲು ಹೋಗಬಾರದು. ಇಮ್ರಾನ್ ಪಾಷಾಗೆ ಇನ್ನೂ ಸಣ್ಣವಯಸ್ಸು, ಕಾನೂನಿಗೆ ಬೆಲೆ ಕೊಡುವುದನ್ನು ಕಲಿಯಲಿ ಎಂದು ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.