ಕೋವಿಡ್19 ಚಿಕಿತ್ಸೆಯಲ್ಲಿ ಹಗರಣ: ಸ್ಪೀಕರ್ ಸಾಹೇಬ್ರ ನಡೆ ಅನುಮಾನಕ್ಕೆ ಎಡೆ
ಬೆಂಗಳೂರು, ಮೇ 28: ಕೋವಿಡ್19 ಚಿಕಿತ್ಸೆಗಾಗಿ ಸರ್ಕಾರದ ವತಿಯಿಂದ ಖರೀದಿಸಲಾದ ವೈದ್ಯಕೀಯ ಉಪಕರಣ, ಔಷಧಿ, ಪಿಪಿಇ ಕಿಟ್ನಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ತನಿಖೆಗೆ ವಿಧಾನಸಭೆಯ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಮುಂದಾಗಿದೆ.
Recommended Video
ಆದರೆ, ಸಮಿತಿಯ ತನಿಖೆಗೆ ಸ್ವತಃ ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರೇ ಸ್ಪಂದಿಸುತ್ತಿಲ್ಲ ಎಂಬ ದೂರುಗಳು ಕೇಳಿ ಬಂದಿವೆ.
ಪಿಪಿಇ ಕಿಟ್ ಉತ್ಪಾದನೆ; ದೇಶಕ್ಕೆ ಮಾದರಿಯಾದ ಬೆಂಗಳೂರು
ತನಿಖೆಯ ಭಾಗವಾಗಿ ಬುಧವಾರ ಸಮಿತಿಯ ಅಧ್ಯಕ್ಷರಾಗಿರುವ ಶಾಸಕ ಎಚ್ ಕೆ ಪಾಟೀಲ್ ಹಾಗೂ ಇತರೆ ಸದಸ್ಯರು ವಿವಿಧ ಆಸ್ಪತ್ರೆಗಳಿಗೆ, ಸ್ಥಳಗಳಿಗೆ ಭೇಟಿ ನೀಡಬೇಕಿತ್ತು. ಆದರೆ, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಈ ಭೇಟಿಯನ್ನು ತಡೆದಿದ್ದಾರೆ.
ಭೇಟಿ ಮಾಡದಂತೆ ಆದೇಶ ಮಾಡಿದ್ದಾರೆ
ಈ ಕುರಿತು ಬುಧವಾರ ಆದೇಶ ಹೊರಡಿಸಿರುವ ಸ್ಪೀಕರ್ ಕಾಗೇರಿ ಅವರು, ಸಾರ್ವಜನಿಕ ಲೆಕ್ಕಪತ್ರ ಸಮಿತಿ ತನಿಖೆ ಹಿನ್ನೆಲೆಯಲ್ಲಿ ಆಸ್ಪತ್ರೆ ಭೇಟಿ ಮಾಡದಂತೆ ಆದೇಶ ಮಾಡಿದ್ದಾರೆ. ಏರ್ ಪೋರ್ಟ್, ರೈಲ್ವೆ ನಿಲ್ದಾಣ, ಕೋವಿಡ್ ಆಸ್ಪತ್ರೆಗಳಿಗೆ, ಕ್ವಾರಂಟೈನ್ ಕೇಂದ್ರಗಳಿಗೆ ಭೇಟಿ ಸಮಿತಿ ಇಂದು ಭೇಟಿ ನೀಡುವುದಿತ್ತು.
ಮುಖ್ಯ ಕಾರ್ಯದರ್ಶಿಯಿಂದ ವರದಿ ಕೇಳಿದ ಸಮಿತಿ
ಅಕ್ರಮದ ಕುರಿತು ತನಿಖೆಗೆ ಮುಂದಾಗಿರುವ ಸಮಿತಿ, ಔಷಧ ಮತ್ತು ಉಪಕರಣಗಳ ಖರೀದಿ ಕುರಿತು ಮುಖ್ಯ ಕಾರ್ಯದರ್ಶಿಯಿಂದ ವರದಿ ಕೇಳಿದೆ. ಆದರೆ, ಮುಖ್ಯ ಕಾರ್ಯದರ್ಶಿ ಅವರು ಇನ್ನೂ ವರದಿ ನೀಡಿಲ್ಲ ಎಂದು ಸಮಿತಿ ಹೇಳಿದೆ. ವರದಿ ಬಂದ ಬಳಿಕ ಮುಂದಿನ ನಿರ್ಧಾರ ಮಾಡುತ್ತೇವೆ ಎಂದು ಸಮಿತಿ ಅಧ್ಯಕ್ಷ ಎಚ್ ಕೆ ಪಾಟೀಲ್ ಹೇಳಿದ್ದಾರೆ.
ಎಚ್ ಕೆ ಪಾಟೀಲ ಅಸಮಾಧಾನ
ಈ ಬಗ್ಗೆ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿರುವ ಎಚ್ ಕೆ ಪಾಟೀಲ್ ಅವರು, 'ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಆಸ್ಪತ್ರೆ, ಏರ್ಪೋರ್ಟ್, ಬಸ್ ನಿಲ್ದಾಣಕ್ಕೆ ಇಂದು ಭೇಟಿ ನೀಡಲು ತೀರ್ಮಾನ ಮಾಡಿದ್ವಿ. ಆದರೆ, ಸ್ಪೀಕರ್ ಕಚೇರಿಯಿಂದ ಅಧಿಸೂಚನೆ ಹೊರಬಿದ್ದಿದೆ. ಲೆಕ್ಕಪತ್ರ ಸಮಿತಿ ಸದಸ್ಯರು ಎಲ್ಲಿಗೂ ಭೇಟಿ ನೀಡಬಾರದು. ಯಾವುದೇ ಸ್ಥಳಗಳಿಗೆ ಹೋಗಬಾರದು ಎಂದು ಆದೇಶ ನೀಡಿದ್ದಾರೆ. ತಪಾಸಣೆ ಅಡ್ಡಿಪಡಿಸುವ ಸ್ಪೀಕರ್ ತೀರ್ಮಾನ ಸರಿಯಲ್ಲ. ಭ್ರಷ್ಟಾಚಾರಕ್ಕೆ ಬೆಂಬಲ ನೀಡಲು ಸ್ಪೀಕರ್ ತೀರ್ಮಾನ ಮಾಡಿದಂತಾಗುತ್ತದೆ, ಸ್ಪೀಕರ್ ಆದೇಶ ಜನದ್ರೋಹಿ ತೀರ್ಮಾನ' ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಭೇಟಿಗೆ ತಡೆ ಯಾಕೆ?
ಶಾಸಕರನ್ನು ಒಳಗೊಂಡ ಲೆಕ್ಕಪತ್ರ ಸಮಿತಿಯ ಕೆಲಸವನ್ನು ಸ್ಪೀಕರ್ ತಡೆದಿರುವುದು ಯಾಕೆ ಎಂಬ ಅನುಮಾನಗಳು ಎದ್ದಿವೆ. ಲೆಕ್ಕಪತ್ರ ಸಮಿತಿ ಅಧ್ಯಕ್ಷ ಎಚ್ ಕೆ ಪಾಟೀಲ ಅವರಿಂದಲೇ ಇಂತಹ ಅನುಮಾನಗಳು ಸ್ಪೀಕರ್ ಮೇಲೆ ವ್ಯಕ್ತವಾಗಿವೆ.