ಬೆಂಗಳೂರಿನಲ್ಲಿ 'ಸತ್ಯ' ಬಿಚ್ಚಿಡಲಿದ್ದಾರೆ ಪಿ ಚಿದಂಬರಂ!
ಬೆಂಗಳೂರು, ಮಾರ್ಚ್ 11 : ಯುಪಿಎ ಸರಕಾರದಲ್ಲಿ ಅರ್ಥ ಸಚಿವರಾಗಿದ್ದ ಪಿ. ಚಿದಂಬರಂ ಅವರು ಬರೆದಿರುವ 'ಸ್ಪೀಕಿಂಗ್ ಟ್ರುತ್ ಟು ಪವರ್ - ಮೈ ಅಲ್ಟರ್ನೆಟೀವ್ ವ್ಯೂ' ಎಂಬ ಪುಸ್ತಕ ಬೆಂಗಳೂರಿನಲ್ಲಿ ಮಾರ್ಚ್ 11ರಂದು ಬಿಡುಗಡೆಯಾಗುತ್ತಿದೆ.
ಬೆಂಗಳೂರಿನ ರೆಸಿಡೆನ್ಸಿ ರಸ್ತೆಯಲ್ಲಿರುವ ಬಿಷಪ್ ಕಾಟನ್ ಬಾಲಕರ ಶಾಲೆಯ ಆಡಿಟೋರಿಯಂ ನಲ್ಲಿ ಭಾನುವಾರ ಸಂಜೆ 4 ಗಂಟೆಗೆ, ರೂಪಾ ಪಬ್ಲಿಕೇಷನ್ಸ್ ಪ್ರಕಟಿಸಿರುವ ಈ ಪುಸ್ತಕ ಅನಾವರಣಗೊಳ್ಳಲಿದೆ. ಈ ಸಂದರ್ಭದಲ್ಲಿ ಚಿದಂಬರಂ ಅವರು ಸಂಸದ ರಾಜೀವ್ ಗೌಡ ಅವರೊಂದಿಗೆ ಸಂವಾದದಲ್ಲಿಯೂ ಪಾಲ್ಗೊಳ್ಳಲಿದ್ದಾರೆ.
ತಮ್ಮ ಮಗ ಕಾರ್ತಿ ಚಿದಂಬರಂ ಅವರ ಬಂಧನದಿಂದಾಗಿ ವಿವಾದದ ಸುಳಿಯಲ್ಲಿ ಸಿಲುಕಿರುವ ಪಿ. ಚಿದಂಬರಂ ಅವರ ಬತ್ತಳಿಕೆಯಲ್ಲಿ ಏನೇನು ಸತ್ಯಗಳು ಇವೆಯೋ? ಬಲ್ಲವರಾರು? ಆ ಸತ್ಯಗಳನ್ನು ತಿಳಿಯಬಯಸುವವರು ಈ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು.
ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಫೆಬ್ರವರಿ 1ರಂದು ಮಂಡಿಸಿದ ಬಜೆಟ್ಟನ್ನು ತೀವ್ರವಾಗಿ ಟೀಕಿಸಿದ್ದ ಪಿ ಚಿದಂಬರಂ ಅವರು ರಚಿಸಿರುವ ಈ ಪುಸ್ತಕ ಫೆಬ್ರವರಿ 24ರಂದು ಹೈದರಾಬಾದ್ ನಲ್ಲಿ ಈಗಾಗಲೆ ಬಿಡುಗಡೆಯಾಗಿದೆ. ಈ ಬಗ್ಗೆ ಅಲ್ಲಿ ಮುಕ್ತ ಸಂವಾದವನ್ನೂ ಏರ್ಪಡಿಸಲಾಗಿತ್ತು.