ವೈದ್ಯಕೀಯ ಶಿಕ್ಷಣ ಇಲಾಖೆ ಆ ತಪ್ಪಿನಿಂದ ರಾಜ್ಯದಲ್ಲಿ ಆಕ್ಸಿಜನ್ ಸಮಸ್ಯೆ !
ಬೆಂಗಳೂರು, ಮೇ. 01: ರಾಜ್ಯದಲ್ಲಿ ಆಕ್ಸಿಜನ್ ಇಲ್ಲದೇ ಎಷ್ಟೋ ಕೊರೊನಾ ಸೋಂಕಿತರು ಹಾಸಿಗೆ ಮೇಲೆ ಜೀವ ಬಿಡುತ್ತಿದ್ದಾರೆ. ಎಷ್ಟೇ ಖರ್ಚಾದರೂ ಪರವಾಗಿಲ್ಲ ಎಂದು ಕೈಯಲ್ಲಿ ನೋಟಿನ ಕಂತೆ ಹಿಡಿದು ಕೇಳಿದರೂ ಯಾವ ಆಸ್ಪತ್ರೆಯಲ್ಲೂ ವೆಂಟಿಲೇಟರ್ ಸಿಗುತ್ತಿಲ್ಲ. ಉಸಿರು ಉಳಿಸುವ ಆಕ್ಸಿಜನ್ ಅಂತೂ ಮೊದಲೇ ಸಿಗುತ್ತಿಲ್ಲ. ಈ ಸಮಸ್ಯೆಯ ಮೂಲ ಹುಡುಕಿದರೆ ಕಣ್ಣೆದುರು ಕಾಣುವುದು ವೈದ್ಯಕೀಯ ಶಿಕ್ಷಣ ಇಲಾಖೆಯ ಬೇಜವಾಬ್ಧಾರಿತನ !
ಹೌದು. ಕರ್ನಾಟಕ ರಾಜ್ಯದ ವೈದ್ಯಕೀಯ ಶಿಕ್ಷಣ ಇಲಾಖೆ ಮಾಡಿಕೊಂಡು ಬಂದಿರುವ ಮಹಾ ಪ್ರಮಾದದಿಂದ ಇವತ್ತು ಇಡೀ ರಾಜ್ಯವೇ ಆಕ್ಸಿಜನ್ ಸಮಸ್ಯೆ ಎದುರಿಸುತ್ತಿದೆ. ನೆರೆ ರಾಜ್ಯ ಕೇರಳದ ಜನ ಪ್ರತಿನಿಧಿಗಳಿಗೆ ಜನರ ಮೇಲೆ ಇರುವಷ್ಟು ಕಾಳಜಿ ನಮ್ಮ ರಾಜ್ಯವನ್ನಾಳುತ್ತಿರುವ ಜನ ಪ್ರತಿನಿಧಿಗಳಿಗೆ ಇದ್ದಿದ್ದರೆ ಪರಿಸ್ಥಿತಿ ಹೀಗೆ ಆಗುತ್ತಿರಲಿಲ್ಲ. ಯಾವುದೋ ಕಂಪನಿಯ ಮುಂದೆ ಆಕ್ಸಿಜನ್ ಕೊಡಿ ಎಂದು ಭಿಕ್ಷೆ ಬೇಡುವ ಪರಿಸ್ಥಿತಿ ಬರುತ್ತಿರಲಿಲ್ಲ. ಬದಲಿಗೆ ನಾವೇ ಇತರೆ ರಾಜ್ಯಗಳಿಗೆ ಬೇಕಾದರೆ ಆಕ್ಸಿಜನ್ ಪೂರೈಕೆ ಮಾಡಬಹುದಿತ್ತು. ಅಂತಹ ಬಹುದೊಡ್ಡ ಪ್ರಮಾದವನ್ನು ವೈದ್ಯಕೀಯ ಶಿಕ್ಷಣ ಇಲಾಖೆ ಮಾಡಿಕೊಂಡಿದೆ. ಅದರ ಸಮಗ್ರ ವಿವರ ಇಲ್ಲಿದೆ ನೋಡಿ.
ಕೇರಳದಲ್ಲಿ ಆಕ್ಸಿಜನ್ ಸಮಸ್ಯೆ ಇಲ್ಲ ಯಾಕೆ : ನೆರೆ ರಾಜ್ಯ ಕೇರಳದಲ್ಲಿ ಈವರೆಗೂ ಆಕ್ಸಿಜನ್ ಕೊರತೆ ಕಾಣಿಸಿಕೊಂಡಿಲ್ಲ. ಯಾಕೆಂದರೆ ಕೇರಳದಲ್ಲಿರುವ ಮೆಡಿಕಲ್ ಕಾಲೇಜುಗಳು ಕಡ್ಡಾಯವಾಗಿ ಆಕ್ಸಿಜನ್ ಉತ್ಪಾದನೆ ಮಾಡಬೇಕು. ಮೆಡಿಕಲ್ ಆಸ್ಪತ್ರೆ ಮತ್ತು ಕಾಲೇಜಿಗೆ ಆಗುವಷ್ಟು ಆಕ್ಸಿಜನ್ನ್ನು ಸ್ವತಃ ಮೆಡಿಕಲ್ ಕಾಲೇಜುಗಳೇ ಉತ್ಪಾದನೆ ಮಾಡಬೇಕು. ಇಲ್ಲದಿದ್ದರೆ ಯಾವ ಮೆಡಿಕಲ್ ಕಾಲೇಜುಗಳು ಕಾರ್ಯ ನಿರ್ವಹಣೆ ಮಾಡಲು ಅಲ್ಲಿನ ಸರ್ಕಾರ ಅನುಮತಿಯೇ ಕೊಡುವುದಿಲ್ಲ. ಇಂತದ್ದೊಂದು ಷರತ್ತನ್ನು ಕೇರಳದಲ್ಲಿ ವಿಧಿಸಲಾಗಿತ್ತು. ಹೀಗಾಗಿ ಅಲ್ಲಿನ ಬಹುತೇಕ ಮೆಡಿಕಲ್ ಕಾಲೇಜುಗಳು ಅಗತ್ಯ ಇರುವಷ್ಟು ಆಕ್ಸಿಜನ್ ಆ ಕಾಲೇಜುಗಳಲ್ಲೇ ಉತ್ಪಾದನೆಯಾಗುತ್ತಿದೆ. ಹಿಗಾಗಿ ಕೊರೊನಾ ಸೋಂಕು ಪರಕಾಷ್ಠೆ ತಲುಪಿದರೂ ಕೇರಳದಲ್ಲಿ ಆಕ್ಸಿಜನ್ ಕೊರತೆ ಕಾಣಿಸಿಕೊಂಡಿಲ್ಲ.
ರಾಜ್ಯದ ಸ್ಥಿತಿ ಏನು ? :
ಕರ್ನಾಟಕ ರಾಜ್ಯದಲ್ಲಿ ಲೆಕ್ಕ ಹಾಕಿದರೆ ಸರ್ಕಾರಿ ವೈದ್ಯಕೀಯ ಕಾಲೇಜು ಸೇರಿದಂತೆ 60 ಕ್ಕೂ ಹೆಚ್ಚು ವೈದ್ಯಕೀಯ ಕಾಲೇಜುಗಳಿವೆ. ಪ್ರತಿ ಕಾಲೇಜು ಆಸ್ಪತ್ರೆ ಕಡ್ಡಾಯ ಹೊಂದಿರಬೇಕು. ಕನಿಷ್ಠ ನೂರು ರೋಗಿಗಳಿಗೆ ಚಿಕಿತ್ಸೆ ನೀಡುವ ಹಾಸಿಗೆಗಳನ್ನು ಆಸ್ಪತ್ರೆ ಹೊಂದಿರಬೇಕು. ಈ ಎಲ್ಲಾ ವೈದ್ಯಕೀಯ ಕಾಲೇಜುಗಳು ವೈದ್ಯಕೀಯ ಶಿಕ್ಷಣ ಇಲಾಖೆ ವ್ಯಾಪ್ತಿಗೆ ಬರುತ್ತವೆ. ಈ ಆಸ್ಪತ್ರೆಗಳು ತನ್ನ ಅಗತ್ಯಕ್ಕೆ ತಕ್ಕಂತೆ ಆಕ್ಸಿಜನ್ ಪೂರೈಕೆ ಘಟಕಗಳನ್ನು ಹೊಂದಿದ್ದರೆ ಮಾತ್ರ ಅನುಮತಿ ಕೊಡುತ್ತೇವೆ. ಇಲ್ಲದಿದ್ದರೆ ವೈದ್ಯಕೀಯ ಕಾಲೇಜಿಗೆ ಅನುಮತಿ ನೀಡುವುದಿಲ್ಲ ಎಂದು ಕೇರಳ ಮಾದರಿಯಲ್ಲಿ ಸಣ್ಣ ನಿರ್ಬಂಧ ವಿಧಿಸಿದ್ದರೂ ರಾಜ್ಯದಲ್ಲಿ ಆಕ್ಸಿಜನ್ ಕೊರತೆ ಎದುರಾಗುತ್ತಿರಲಿಲ್ಲ.
ನೆರೆ ರಾಜ್ಯದಲ್ಲಿರುವಂತಹ ಈ ವ್ಯವಸ್ಥೆಯನ್ನು ವೈದ್ಯಕೀಯ ಶಿಕ್ಷಣ ಸಚಿವರು ಯಾಕೆ ಅನುಷ್ಠಾನ ಮಾಡಲಿಲ್ಲ ಎಂಬುದು ಅಚ್ಚರಿ ಮೂಡಿಸುತ್ತದೆ. ರಾಜ್ಯದ ವೈದ್ಯಕೀಯ ಕಾಲೇಜುಗಳಲ್ಲಿ ಆಕ್ಸಿಜನ್ ಉತ್ಪಾದನಾ ಘಟಕ ಹೊಂದಿದ್ದರೆ ಪರಿಸ್ಥಿತಿ ಈ ರೀತಿಯಾಗಿ ಭೀಕರವಾಗುತ್ತಿರಲಿಲ್ಲ. ಆದರೆ ನಮ್ಮ ವ್ಯವಸ್ಥೆಯ ಲೋಪಗಳೇ ಇನ್ನಷ್ಟು ಸಂಕಷ್ಟಗಳಿಗೆ ಎಡೆ ಮಾಡಿಕೊಟ್ಟಿದೆ ಎಂದು ಹೆಸರು ಹೇಳಲು ಇಚ್ಛಿಸದ ಮೆಡಿಕಲ್ ಕಾಲೇಜಿನ ಪ್ರಾಧ್ಯಾಪಕರೊಬ್ಬರು ಒನ್ಇಂಡಿಯಾ ಕನ್ನಡಕ್ಕೆ ತಿಳಿಸಿದರು.
Recommended Video
ಬ್ಲಾಕ್ನಲ್ಲಿ ಆಕ್ಸಿಜನ್ ಮಾರಾಟ : ರೆಮ್ ಡಿಸಿವಿಆರ್ ಚುಚ್ಚು ಮದ್ದು ಯಾವ ರೀತಿ ಕಾಳ ಸಂತೆಯಲ್ಲಿ ಮಾರಾಟ ಆಗುತ್ತಿದೆಯೋ ಅದೇ ರೀತಿ ಆಕ್ಸಿಜನ್ ಕೂಡ ಕಾಳ ಸಂತೆಯಲ್ಲಿ ಮಾರಾಟ ಆರಂಭವಾಗಿದೆ. ಸರ್ಕಾರಕ್ಕೆ ಒಂದು ಸಿಲಿಂಡರ್ 300 ರೂ.ನಿಂದ 400 ರೂ.ಗೆ ಸಿಗುತ್ತಿತ್ತು. ಖಾಸಗಿಯವರಿಗೆ ಒಂದು ಸಿಲಿಂಡರ್ 600 ರೂ.ಗೆ ಸಿಗುತ್ತಿತ್ತು. ಇದೀಗ ಕೊರೊನಾ ಸೋಂಕಿನಿಂದ ಆಕ್ಸಿಜನ್ಗೆ ಎಲ್ಲಿಲ್ಲದ ಬೇಡಿಕೆ ಸೃಷ್ಟಿಯಾಗಿದೆ. ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ. ಆಕ್ಸಿಜನ್ ಕಾಳಸಂತೆಯಲ್ಲಿ ಮಾರಾಟ ಆಗುತ್ತಿರುವ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಖಾಸಗಿ ಆಸ್ಪತ್ರೆಗಳು ದುಬಾರಿ ಬೆಲೆ ಕೊಟ್ಟು ಕಾಳಸಂತೆಯಲ್ಲಿ ಆಕ್ಸಿಜನ್ ಖರೀದಿ ಮಾಡುತ್ತಿವೆ ಎಂದು ಸರ್ಕಾರಿ ವೈದ್ಯರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.