ನೋಟು ನಿಷೇಧ: ಬೆಂಗಳೂರು ಆರ್ ಬಿ ಐ ಎದುರು ಪ್ರತಿಭಟನೆ
ರೂ. 500 ಹಾಗೂ ರೂ. 1,000 ಮುಖಬೆಲೆಯ ನೋಟುಗಳನ್ನು ನಿಷೇಧಿಸಿರುವ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ವಿವಿಧ ಸಂಘಟನೆಗಳು ಬೆಂಗಳೂರಿನ ಆರ್ ಬಿ ಐ ಕಚೇರಿ ಎದುರು ಪ್ರತಿಭಟನೆ ನಡೆಸಿದವು.
ಬೆಂಗಳೂರು, ನವೆಂಬರ್, 17: ಗರಿಷ್ಠ ಮುಖಬೆಲೆಯ ನೋಟುಗಳನ್ನು ಅಮಾನ್ಯ ಮಾಡಿರುವ ಕೇಂದ್ರ ಸರ್ಕಾರದ ಆದೇಶವನ್ನು ಖಂಡಿಸಿ ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ರಿಸರ್ವ್ ಬ್ಯಾಂಕ್ ಎದುರು ಪ್ರತಿಭಟನೆ ನಡೆಸಿದ 40ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಪೊಲೀಸರು ಗುರುವಾರ ಬಂಧಿಸಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಇಬ್ಬರು ಕಾನೂನು ವಿದ್ಯಾರ್ಥಿಗಳನ್ನೂ ಸಹ ಬಂಧಿಸಲಾಯಿತು. ಈ ಕುರಿತು ಪ್ರತಿಕ್ರಿಯೆ ನೀಡಿದ ಡಿಸಿಪಿ (ಕೇಂದ್ರ ವಿಭಾಗ) ಸಂದೀಪ್ ಪಾಟೀಲ್ ಅವರು ಪ್ರತಿಭಟನೆ ಆರಂಭವಾಗುವುದಕ್ಕೂ ಮುಂಚೆ 10 ಮಂದಿ ಪ್ರತಿಭಟನಾಕಾರರನ್ನು ಬಂಧಿಸಲಾಗಿತ್ತು ಎಂದು ತಿಳಿಸಿದರು. [ಹಣ ವಿತ್ ಡ್ರಾ ನಿಯಮಗಳಲ್ಲಿ ರೈತರಿಗೆ ಸಡಿಲಿಕೆ]
ರೂ. 500 ಹಾಗೂ ರೂ. 1000 ಮುಖಬೆಲೆಯ ನೋಟುಗಳನ್ನು ನಿಷೇಧಿಸಿ 2 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಜಾರಿಗೊಳಿಸಿರುವುದರ ಹಿಂದಿನ ಮರ್ಮವಾದರೂ ಏನು? ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.
ಅಷ್ಟೇ ಅಲ್ಲದೇ ನೋಟು ನಿಷೇಧದಿಂದ ಜನ ಚಿಲ್ಲರೆ ಸಮಸ್ಯೆ ಎದುರಿಸುತ್ತಿದ್ದಾರೆ. ಸರ್ಕಾರ ಮೊದಲು 500ರೂ. ನೋಟುಗಳನ್ನು ಚಲಾವಣೆಗೆ ತರಬೇಕು ಮತ್ತು ಹಳೆಯ ನೋಟುಗಳ ವಿನಿಮಯಕ್ಕೆ ನಿಗದಿಮಾಡಿರುವ ಕೊನೆಯ ದಿನಾಂಕವನ್ನು ವಿಸ್ತರಿಸಬೇಕು ಎಂದು ಹೇಳಿದರು.
ಪನಾಮಾ ಮತ್ತು ಸ್ವಿಸ್ ಬ್ಯಾಂಕ್ ಗಳಲ್ಲಿ ಖಾತೆ ಹೊಂದಿರುವ ಕಾಳಧನಿಕರ ಹೆಸರುಗಳನ್ನು ಸರ್ಕಾರ ಪ್ರಕಟಿಸಬೇಕು ಎಂದು ಒತ್ತಾಯಿಸಿದರು.[ಹಣ ವಿನಿಮಯ ಮಿತಿ 2,000 ರೂ.ಗೆ ಇಳಿಕೆ]
ನೋಟು ನಿಷೇಧದ ಪರಿಣಾಮ 40ಕ್ಕು ಹೆಚ್ಚು ಮಂದಿ ಬಲಿಯಾಗಿದ್ದಾರೆ. ಕೂಲಿ ಕಾರ್ಮಿಕರು, ಕೃಷಿಕರು, ವ್ಯಾಪಾರಸ್ಥರು ಹಣವಿಲ್ಲದೆ ಪರದಾಡುತ್ತಿದ್ದಾರೆ ಎಂದು ಆಕ್ರೋ ವ್ಯಕ್ತಪಡಿಸಿದರು.
ಇಡೀ ದೇಶ ಹಣವಿಲ್ಲದೆ ಒದ್ದಾಡುತ್ತಿರಬೇಕಾದರೆ ಬಿಜೆಪಿ ಮುಖಂಡ ಜನಾರ್ದನ ರೆಡ್ಡಿ ಅವರು ಮಾತ್ರ ತಮ್ಮ ಮಗಳ ಮದುವೆಗೆ ಕೋಟಿಗಟ್ಟಲೆ ಹಣ ಸುರಿದಿದ್ದಾರೆ ಇದರ ಮರ್ಮವೇನು ಎಂದು ಪ್ರತಿಭಟನಕಾರರು ಮಾಧ್ಯಮಗಳಿಗೆ ಹೇಳಿದರು.
ಪ್ರತಿಭಟನೆಯಲ್ಲಿ ಸಿಪಿಐ(ಎಂಎಲ್) ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ನ್ಯಾಷನಲ್ ಹಾಕರ್ಸ್ ಫೆಡರೇಶನ್, ಗಾರ್ಮೆಂಟ್ಸ್ ನೌಕರರ ಒಕ್ಕೂಟ, ಎಐಸಿಸಿಟಿಯು, ಸಂಗೊಳ್ಳಿರಾಯಣ್ಣ ಯುವಕರ ವೇದಿಕೆ, ಕರ್ನಾಟಕ ತಮಿಳ್ ಮಕ್ಕಳ್ ಇಯಕ್ಕಂ ಸಂಘಟನೆಗಳ ಸದಸ್ಯರು ಭಾಗವಹಿಸಿದ್ದರು.