ಪೊಲೀಸ್ ಆದೇಶ ಮೀರಿ ಕಿಸ್ ಮಾಡ್ತಾರಂತೆ...
ಬೆಂಗಳೂರು, ನ. 26: ರಾಜ್ಯದಲ್ಲಿ ವಿವಿಧ ಸಂಘಟನೆಗಳು ಹಾಗೂ ಸರ್ಕಾರದ ವಿವಿಧ ಸಚಿವರಿಂದಲೂ ವಿರೋಧಿಸಲ್ಪಟ್ಟಿದ್ದ 'ಕಿಸ್ ಆಫ್ ಲವ್' ಕಾರ್ಯಕ್ರಮಕ್ಕೆ ಪೊಲೀಸರು ಅನುಮತಿ ನೀಡಲು ನಿರಾಕರಿಸಿದ್ದರಿಂದ ಎಲ್ಲರೂ ನಿಟ್ಟುಸಿರಿಟ್ಟಿದ್ದರು. ಆದರೆ, ಇದು ಇಲ್ಲಿಗೇ ಮುಗಿದಿಲ್ಲ.
ಟೌನ್ ಹಾಲ್ ಎದುರು ಕಿಸ್ ಆಫ್ ಲವ್ ಆಯೋಜಿಸಿದ್ದ ರಚಿತಾ ತನೇಜಾ ಕಾರ್ಯಕ್ರಮದಿಂದ ಹಿಂದೆ ಸರಿದ ಹಿನ್ನೆಲೆಯಲ್ಲಿ ಯಾರೂ ಕಾರ್ಯಕರ್ತರು ಕೂಡ ಹಿಂಜರಿದಿದ್ದರು. ಆದರೆ, ಕೇರಳ ಮೂಲದವರು ಎನ್ನಲಾದ ಫರ್ಮಿಸ್ ಹಶಿಮ್ ಬೆಂಗಳೂರಿನಲ್ಲಿ ಪೊಲೀಸರ ಆದೇಶವನ್ನು ಮೀರಿ ಕಿಸ್ ಆಫ್ ಲವ್ ಆಯೋಜಿಸುವುದಾಗಿ ಸವಾಲು ಹಾಕಿದ್ದಾರೆ. [ಸಂಘಟನೆಯಿಂದ ಹಿಂದೆ ಸರಿದ ರಚಿತಾ ತನೇಜಾ]
ಕಿಸ್ ಆಫ್ ಲವ್ಗೆ ಸೇರುವ ಜನರ ರಕ್ಷಣೆಯ ಕುರಿತು ನಾವು ಆತಂಕಗೊಂಡಿದ್ದೇವೆ. ಈ ಅಂಶ ಗಮನದಲ್ಲಿಸಿಕೊಂಡು ಚರ್ಚಿಸಿ ಮತ್ತೆ ಕಿಸ್ ಆಫ್ ಲವ್ ಆಯೋಜಿಸಲು ಸ್ಥಳ ಮತ್ತು ಸಮಯ ನಿಗದಿಪಡಿಸುವುದಾಗಿ ತಿಳಿಸಿದ್ದಾರೆ.
ಕಿಸ್ ಆಫ್ ಲವ್ ಕಾರ್ಯಕ್ರಮ ಆಯೋಜನೆಯಿಂದ ದಂಗೆ ಉಂಟಾಗಬಹುದೆಂಬ ವಾದವನ್ನು ಅಲ್ಲಗಳೆದಿರುವ ಫರ್ಮಿಸ್ ಹಶಿಮ್, "ಸ್ಥಳದಲ್ಲಿ ಪೊಲೀಸರು ಇದ್ದು ರಕ್ಷಣೆ ನೀಡಿದರೆ ಯಾವ ಸಮಸ್ಯೆ ಉಂಟಾಗುತ್ತದೆ" ಎಂದು ಪ್ರಶ್ನಿಸಿದ್ದಾರೆ. [ಮುತ್ತು ಕೊಟ್ರೆ ಏನಾಗ್ತದೆ]
ಯಾರು ಈ ಫರ್ಮಿಸ್ ಹಶಿಮ್?: ಕೇರಳ ಮೂಲದ ಫರ್ಮಿಸ್ ಹಶಿಮ್ ಕೊಚಿಯಲ್ಲಿ ನಡೆದ ಕಿಸ್ ಆಫ್ ಲವ್ ಸಂಘಟಕರು ಎನ್ನಲಾಗಿದೆ. ತಮ್ಮ ಫೇಸ್ ಬುಕ್ ಪುಟದಲ್ಲಿ ತಮ್ಮನ್ನು 'ಮಾಜಿ ವಿಮಾನ ನಿಲ್ದಾಣ ಅಭಿಯಂತರ' ಎಂದು ಹೇಳಿಕೊಂಡಿದ್ದಾರೆ. ಕ್ಯಾಲಿಕಟ್ನ ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ಕಲಿತಿರುವುದಾಗಿ ಪರಿಚಯಿಸಿಕೊಂಡಿದ್ದಾರೆ.
ಫೇಸ್ ಬುಕ್ ಪುಟದ ತುಂಬ ಕಿಸ್ ಆಫ್ ಲವ್ ಕಾರ್ಯಕ್ರಮ ಬೆಂಬಲಿಸಿ ಹೇಳಿಕೆಗಳು ಹಾಗೂ ಛಾಯಾಚಿತ್ರಗಳನ್ನು ಹಾಕಿಕೊಂಡಿದ್ದಾರೆ. ಅಲ್ಲದೆ, ಯುವಕನೋರ್ವ ಯುವತಿಯನ್ನು ಚುಂಬಿಸುತ್ತಿರುವ ಛಾಯಾಚಿತ್ರಕ್ಕೆ "Down with moral policing! Right in front of Thevara Police station, Kochi" (ನೈತಿಕ ಪೊಲೀಸ್ಗಿರಿಗೆ ಧಿಕ್ಕಾರ! ಕೊಚಿಯ ತೇವರಾ ಪೊಲೀಸ್ ಠಾಣೆ ಎದುರು ಚುಂಬಿಸಿದ್ದು) ಎಂದು ಕಾಮೆಂಟ್ ಹಾಕಿಕೊಂಡಿದ್ದಾರೆ. [ಕಿಸ್ ಆಫ್ ಲವ್ ವಿರುದ್ಧ ಒನಕೆ ಚಳವಳಿ]
ಅನುಮತಿ ಏಕೆ ನಿರಾಕರಿಸಲಾಗಿತ್ತು?: ರಾಜ್ಯಾದ್ಯಂತ ಕಿಸ್ ಆಫ್ ಲವ್ಗೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸರ್ಕಾರ ಲೆಕ್ಕಾಚಾರದಲ್ಲಿ ತೊಡಗಿದ್ದರೂ, ಪೊಲೀಸರು ಅನುಮತಿ ನಿರಾಕರಿಸಿದ್ದರು.
ಈ ಕುರಿತು ಮಾಧ್ಯಮಕ್ಕೆ ಹೇಳಿಕೆ ನೀಡಿದ್ದ ಪೊಲೀಸ್ ಆಯುಕ್ತ ಎಂ.ಎನ್. ರೆಡ್ಡಿ, "ಕಿಸ್ ಆಫ್ ಲವ್ ಕಾರ್ಯಕ್ರಮವು ಭಾರತೀಯ ಸಂವಿಧಾನದ ದಂಡ ಸಂಹಿತೆಯ 294 (ಎ) ಪರಿಚ್ಛೇದಕ್ಕೆ ವಿರುದ್ಧವಾಗಿದೆ. ಅಲ್ಲದೆ, ಈ ಕಾರ್ಯಕ್ರಮಕ್ಕೆ ಅನುಮತಿ ನೀಡಿದರೆ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ಬರುವ ಸಂಭವವಿದೆ" ಎಂದು ತಿಳಿಸಿದ್ದರು. [ಪ್ರಣವಾನಂದ ಶ್ರೀ ಎಚ್ಚರಿಕೆ]
"ಅಲ್ಲದೆ, ಕಿಸ್ ಆಫ್ ಲವ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಕಾರ್ಯಕರ್ತರ ಸಂಖ್ಯೆ ಹಾಗೂ ಸಮಯದ ಕುರಿತು ವಿವರ ಕೇಳಿದ್ದೆವು. ಅಲ್ಲದೆ, ಯಾವುದೇ ಅಹಿತಕರ ಘಟನೆ ನಡೆದರೆ ಜವಾಬ್ದಾರಿ ಹೊರಲು ಸಿದ್ಧವಿದ್ದೀರಾ ಎಂದೂ ಪ್ರಶ್ನಿಸಲಾಗಿತ್ತು. ಆದರೆ, ಇದಕ್ಕೆ ಅವರು ಉತ್ತರಿಸಿರಲಿಲ್ಲ. ಆದ್ದರಿಂದ ಅನುಮತಿ ನಿರಾಕರಿಸಲಾಗಿದೆ" ಎಂದು ಪೊಲೀಸ್ ಆಯುಕ್ತರು ಸ್ಪಷ್ಟಪಡಿಸಿದ್ದರು.