ಮೋದಿ ಜನರಿಗೆ ನರಕ ತೋರಿಸುತ್ತಿದ್ದಾರೆ; ಕಿಡಿಕಾರಿದ ಸಿದ್ದರಾಮಯ್ಯ
ಬೆಂಗಳೂರು, ಜೂನ್ 12: ಅಚ್ಛೇ ದಿನ್ ಬರುತ್ತದೆ ಎಂದು ಭರವಸೆ ನೀಡುತ್ತಲೇ ಬಂದಿದ್ದ ಪ್ರಧಾನಿ ಮೋದಿ ಈಗ ಜನರಿಗೆ ನರಕ ತೋರಿಸುತ್ತಿದ್ದಾರೆ. ಇಂಥ ಬಿಕ್ಕಟ್ಟಿನ ಸಮಯದಲ್ಲಿ ಇಂಧನ ಬೆಲೆ ಏರಿಕೆ ಮೂಲಕ ಜನರನ್ನು ದೋಚುತ್ತಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಲವು ರಾಜ್ಯಗಳಲ್ಲಿ ಲೀಟರ್ ಪೆಟ್ರೋಲ್ ಬೆಲೆ 100 ರೂ ದಾಟಿದ್ದು, ಇಂಧನ ದರ ಏರಿಕೆ ಖಂಡಿಸಿ ಬೆಂಗಳೂರಿನಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ "100 ನಾಟೌಟ್" ಎಂಬ ಅಭಿಯಾನವನ್ನು ಶುಕ್ರವಾರದಿಂದ ಐದು ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ. ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿದ ಸಿದ್ದರಾಮಯ್ಯ ಮೋದಿ ಆಡಳಿತದ ವಿರುದ್ಧ ಕಿಡಿಕಾರಿದರು.
ಕೊರೊನಾ ಸಂಕಷ್ಟ: ನಾನು ಹೀಗೆ ಮಾಡಲಿರಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ಯಾಕೆ?
ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್ ಎಲ್ಲವುಗಳ ಬೆಲೆ ಹೆಚ್ಚುತ್ತಿದೆ. ಪೆಟ್ರೋಲ್, ಡೀಸೆಲ್ ಮೇಲೆ ತೆರಿಗೆ ವಿಧಿಸಿ ಮೋದಿ ಸುಲಿಗೆ ಮಾಡುತ್ತಿದ್ದಾರೆ. ಎಲ್ಲರೂ ಅವರಿಗೆ ಶಾಪ ಹಾಕುವಂತಾಗಿದೆ. ಮೋದಿ ಕಳೆ ಪ್ರಧಾನಿ ಎಂದು ಟೀಕಿಸಿದರು.
ರಾವಣನ ಶ್ರೀಲಂಕಾದಲ್ಲಿ ಪೆಟ್ರೋಲ್ ಬೆಲೆ 59 ರೂ, ರಾಮನ ಭಾರತದಲ್ಲಿ 100 ರೂ ಇದೆ ಎಂಬ ಮಾತನ್ನು ಪುನರುಚ್ಚರಿಸಿರುವ ಅವರು, ಈಗ ರಾಮ ರಾಜ್ಯದಲ್ಲಿ ಬಡವರ ರಕ್ತ ಹೀರಲಾಗುತ್ತಿದೆ. ರಾಮನ ಹೆಸರನ್ನೇ ಹೇಳಿಕೊಂಡು ಓಡಾಡುವ ಬಿಜೆಪಿಯವರಿಗೆ ಇದು ಅರ್ಥವೇ ಆಗುತ್ತಿಲ್ಲ ಎಂದಿದ್ದಾರೆ.
ಇಂಧನ ದರ ಏರಿಕೆ ಖಂಡಿಸಿ ಈ ಹಿಂದೆಯೂ ಮಾತನಾಡಿದ್ದ ಸಿದ್ದರಾಮಯ್ಯ, "ಕೊರೊನಾ ಲಾಕ್ಡೌನ್ ಕಾಲದಲ್ಲಿ ಜನರಿಗೆ ಸರಿಯಾಗಿ ಉದ್ಯೋಗವಿಲ್ಲ. ಇಂತಹ ಸಮಯದಲ್ಲಿ ದರ ಏರಿಕೆ ಮಾಡಿ ಗಾಯದ ಮೇಲೆ ಬರೆ ಹಾಕಿರುವುದನ್ನು ಖಂಡಿಸುತ್ತೇನೆ" ಎಂದಿದ್ದರು. "ಪ್ರಧಾನಿ ನರೇಂದ್ರ ಮೋದಿ ಅಚ್ಛೇದಿನ್ ಆಯೇಗಾ ಎಂದು ಅಧಿಕಾರಕ್ಕೆ ಬಂದರು. ಕಳೆದ ಒಂದು ವರ್ಷದಲ್ಲಿ ಶೇ 30ರಷ್ಟು ಇಂಧನ ಬೆಲೆಯನ್ನು ಏರಿಕೆ ಮಾಡಿದ್ದಾರೆ. ತೈಲ ಬೆಲೆ ಇಷ್ಟು ಏರಿಕೆಯಾಗಿದ್ದು, ಇತಿಹಾಸದಲ್ಲೇ ಮೊದಲು" ಎಂದು ಟೀಕಿಸಿದ್ದರು.
ಪೆಟ್ರೋಲ್, ಡೀಸೆಲ್ ಮತ್ತು ಸಿಲಿಂಡರ್ ಬೆಲೆ ಹೆಚ್ಚಳ ಖಂಡಿಸಿ ಜೂನ್ 11ರಿಂದ 5 ದಿನಗಳ ಕಾಲ ದೇಶಾದ್ಯಂತ ಪೆಟ್ರೋಲ್ ಬಂಕ್ ಮುಂದೆ ಕಾಂಗ್ರೆಸ್ ಪ್ರತಿಭಟನೆ ನಡೆಸಲಿದೆ.