ಬೆಂಗಳೂರಿಗರಿಗೆ ಹತ್ತಿದ 'ನೀರಾ' ರುಚಿ : ಎಲ್ಲೆಲ್ಲಿ ಸಿಗುತ್ತೆ?
ಬೆಂಗಳೂರು, ಫೆಬ್ರವರಿ 22: ಬೆಂಗಳೂರಲ್ಲಿ ನೀರಾಗೆ ಬೇಡಿಕೆ ಹೆಚ್ಚಾಗಿದ್ದು, ಶೀಘ್ರದಲ್ಲೇ ಎಂಟರಿಂದ ಹತ್ತು ಮಳಿಗೆಗಳು ಆರಂಭವಾಗಲಿವೆ.
ತೆಂಗು ಬೆಳೆಗಾರರ ಪರ್ಯಾಯ ಲಾಭ ತಂದು ಕೊಡುವ ನೀರಾ ಪಾನೀಯಕ್ಕೆ ಉತ್ತಮ ಬೇಡಿಕೆ ಬರುತ್ತಿದೆ.ಹೀಗಾಗಿ ಬೆಂಗಳೂರಲ್ಲಿ ಮಳಿಗೆ ತೆರೆಯಲು ಅಬಕಾರಿ ಇಲಾಖೆ ಒಪ್ಪಿಗೆ ನೀಡಿದ್ದು ಶೀಘ್ರವೇ ಮಳಿಗೆಗಳು ಆರಂಭಗೊಳ್ಳಲಿವೆ.
ನಗರದಲ್ಲಿ ಈಗಾಗಲೇ ಕೆಲವು ಕಡೆಗಳಲ್ಲಿ ನೀರಾ ಮಳಿಗೆ ಪ್ರಾರಂಭವಾಗಿದ್ದು, ಈಗ ಹಾಪ್ಕಾಮ್ಸ್ ಸಹಭಾಗಿತ್ವದಲ್ಲಿ ಬೆಂಗಳೂರು ನಗರದ ಐದು ಭಾಗಗಳಲ್ಲಿ ಮತ್ತು ಖಾಸಗಿಯ ಸಹಭಾಗಿತ್ವದಲ್ಲಿ ಸುಮಾರು ಹತ್ತಕ್ಕೂ ಹೆಚ್ಚು ಕಡೆಗಳಲ್ಲಿ ನೀರಾ ಮಳಿಗೆ ತಲೆ ಎತ್ತಲಿದೆ.
ಈಗ ಲಾಲ್ಬಾಗ್ , ನಗರ ಸಿವಿಲ್ ನ್ಯಾಯಾಲಯ ಆವರಣ ಮತ್ತು ಜೆಪಿ ನಗರದ ಹಾಪ್ಕಾಮ್ಸ್ ನಲ್ಲಿ ಮಾತ್ರ ನೀರಾ ಲಭ್ಯವಾಗುತ್ತಿದ್ದು, ಇನ್ನುಮುಂದೆ ಪೀಣ್ಯ ಎರಡನೇ ಹಂತ, ಮತ್ತಿಕೆರೆಯ ಜೆಪಿ ಪಾರ್ಕ್ , ಹನುಮಂತನಗರ, ಜಯನಗರ ನಾಲ್ಕನೇ ಹಂತ, ಕನಕಪುರ ರಸ್ತೆ, ಮಲ್ಲೇಶ್ವರ, ಕೆಆರ್ ಪುರದಲ್ಲಿ ಮಳಿಗೆ ಪ್ರಾರಂಭವಾಗಲಿದೆ.
ರಾಜ್ಯದಲ್ಲಿ ಮಲೆನಾಡು ನಟ್ಸ್ ಆಂಡ್ ಸ್ಪೈಸ್ ಉತ್ಪಾದಕ ಸಂಘಕ್ಕೆ ಈವರೆಗೂ 15ಕ್ಕೂ ಹೆಚ್ಚು ಮಂದಿ ರೈತರನ್ನು ನೋಂದಣಿ ಮಾಡಲಾಗಿದೆ. ಪ್ರತಿ ವರ್ಷ ಮರವೊಂದಕ್ಕೆ ವಾರ್ಷಿಕ 6 ಸಾವಿರ ನೀಡಲಾಗುತ್ತದೆ.