ಮನೆ- ಮನೆಗೆ ಹೋಗಿ ವ್ಯಾಕ್ಸಿನ್ ಡ್ರೈವ್ ಮಾಡಿದರೆ ಮಾತ್ರ ಕರ್ನಾಟಕಕ್ಕೆ ಉಳಿಗಾಲ!
ಬೆಂಗಳೂರು, ಮೇ. 08: ರಾಜ್ಯದಲ್ಲಿ ರೂಪಾಂತರಿ ಕೊರೊನಾ ವೈರೆಸ್ ಎಲ್ಲೆ ಮೀರಿ ಹರಡುತ್ತಿದೆ. ದಿನಕ್ಕೆ ಸರಾಸರಿ 50 ಸಾವಿರ ಪ್ರಕರಣಗಳು ವರದಿಯಾಗುತ್ತಿವೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ ಸಂಪುರ್ಣ ಲಾಕ್ ಡೌನ್ ಮಾಡುವುದೇ ಕೊನೆಯ ಅಸ್ತ್ರವಲ್ಲ, ಖಾಸಗಿ ಆಸ್ಪತ್ರೆಗಳು ಮತ್ತು ಸರ್ಕಾರ ಒಗ್ಗೂಡಿ ಜನರ ಮನೆ- ಮನೆಗೆ ಹೋಗಿ ವ್ಯಾಕ್ಸಿನ್ ಕೊಡುವ ಅಭಿಯಾನ ತ್ವರಿತವಾಗಿ ಕೈಗೊಳ್ಳಬೇಕು ಎಂದು ತಜ್ಞ ವೈದ್ಯ ಡಾ. ಯು.ಎಸ್. ವಿಶಾಲ್ ರಾವ್ ಸಲಹೆ ಮಾಡಿದ್ದಾರೆ.
ಕೊರೊನಾ ಬಗ್ಗೆ ತಪ್ಪು ಗ್ರಹಿಕೆಯಿಂದ ನಾವು ಬಹುದೊಡ್ಡ ಅನಾಹುತವನ್ನು ಎದುರಿಸುತ್ತಿದ್ದೇವೆ. ಕೊರೊನಾ ಮೊದಲನೇ ಅಲೆ ಬಂದಾಗ ಜನರು ನಿರ್ಲಕ್ಷ್ಯತೆ ವಹಿಸಿದರು. ಇಡೀ ಭಾರತವೇ ಒಂದು ಎಂದು ಪರಿಗಣಿಸದೇ ಒಂದೊಂದು ರಾಜ್ಯ ಒಂದೊಂದು ನಿಯಮ ರೂಪಿಸಿತು. ನಮ್ಮನ್ನು ನೋಡಿ ಇವತ್ತು ಜಗತ್ತೇ ನಗುವಂತಾಗಿದೆ. ಇದು ಮುಖ್ಯವಲ್ಲ. ಆದರೆ ತುರ್ತಾಗಿ ರಾಜ್ಯದಲ್ಲಿ ಮನೆ- ಮನೆಗೂ ತೆರಳಿ ವ್ಯಾಕ್ಸಿನ್ ಹಾಕಬೇಕಾಗಿದೆ. ಆಸ್ಪತ್ರೆಗಳಿಗೆ ಜನರೇ ಬಂದು ವ್ಯಾಕ್ಸಿನ್ ಹಾಕಿಸಿಕೊಳ್ಳುವ ಪ್ರಕ್ರಿಯೆ ಮುಂದುವರೆಸಿದರೆ ಕೊರೊನಾ ಸೋಂಕು ತಡೆಯಲು ವಿಫಲರಾಗುತ್ತೇವೆ ಎಂದು ವಿಶಾಲ್ ರಾವ್ ಒನ್ ಇಂಡಿಯಾ ಕನ್ನಡಕ್ಕೆ ತಿಳಿಸಿದರು.
ರಾಜ್ಯದಲ್ಲಿ ಇರೋ ಬೇಡ್ ಗಳು ಫುಲ್ :
ರಾಜ್ಯದಲ್ಲಿ ದಿನಕ್ಕೆ 50 ಸಾವಿರ ಕೊರೊನಾ ಪಾಸಿಟೀವ್ ಪ್ರಕರಣಗಳು ವರದಿಯಾಗುತ್ತಿವೆ. ನಮ್ಮ ರಾಜ್ಯದಲ್ಲಿ ಸರ್ಕಾರ ಮತ್ತು ಖಾಸಗಿಯವರ ಬಳಿ ಇರುವುದೇ 1.20 ಲಕ್ಷ ಬೆಡ್ ಗಳು ಮಾತ್ರ. ಅದರಲ್ಲಿ 50 ಸಾವಿರ ಐಸಿಯು ವೆಂಟಿಲೇಟರ್ ಬೆಡ್ ಗಳು. ದಿನಕ್ಕೆ ವರದಿಯಾಗುವ 50 ಸಾವಿರ ಬೆಡ್ ಗಳ ಪೈಕಿ ಶೇ. 17 ರಷ್ಟು ಮಂದಿಗೆ ಐಸಿಯು ವೆಂಟಿಲೇಟರ್ ಅಗತ್ಯವಿದೆ. 50 ಸಾವಿರ ಮಂದಿಯ ಪೈಕಿ 8500 ಮಂದಿ ಸೋಂಕಿತರಿಗೆ ಪ್ರತಿ ನಿತ್ಯ ಐಸಿಯು ಬೆಡ್ ಒದಗಿಸಬೇಕಾಗುತ್ತದೆ. ನಮ್ಮಲ್ಲಿರುವ 50 ಸಾವಿರ ಬೆಡ್ ಗಳು ಹದಿನೈದು ದಿನಕ್ಕೆ ಸಾಕಾಗಲ್ಲ. ತಿಂಗಳಿಗೆ 2.55 ಲಕ್ಷ ಮಂದಿಗೆ ಐಸಿಯು ಬೆಡ್ ಒದಗಿಸಿಕೊಡಬೇಕಾಗಿದೆ. ಈ ಸೌಲಭ್ಯ ದಿಢೀರನೆ ಸ್ಥಾಪಿಸಲು ಸಾಧ್ಯವಿಲ್ಲ. ಪರಿಸ್ಥಿತಿ ಕೈ ಮೀರಿದ್ದು, ಜನರ ಎಚ್ಚರಿಕೆ ಮತ್ತು ವ್ಯಾಕ್ಸಿನೇಷನ್ ಕೊರೊನಾ ಸೋಂಕು ಎದುರಿಸಲು ಇರುವ ಏಕೈಕ ಪರಿಹಾರ ಎಂದು ಅವರು ಹೇಳಿದರು.
ಕೊರೊನಾ ಸೋಂಕು ಗಾಳಿಯಲ್ಲಿ ಮೂರು ತಾಸು ಜೀವಂತವಾಗಿರುತ್ತದೆ. ಜನರು ಈಗಲೂ ಮಾಸ್ಕ್ ನ್ನು ಸರಿಯಾಗಿ ಬಳಸುತ್ತಿಲ್ಲ. ಹೀಗಾಗಿ ಕೊರೊನಾ ಸೋಂಕಿಗೆ ತುತ್ತಾಗುತ್ತಿದ್ದಾರೆ. ಈಗಲಾದರೂ ಎಚ್ಚೆತ್ತುಕೊಂಡು ಜನರು ಕಡ್ಡಾಯವಾಗಿ ಮಾಸ್ಕ್ ನ್ನು ಸರಿಯಾಗಿ ಹಾಕುವುದನ್ನು ಕಲಿಯಬೇಕು. ಇಲ್ಲದಿದ್ದರೆ ಈ ಕೊರೊನಾ ಸೋಂಕಿಗೆ ತುತ್ತಾಗಬೇಕಾಗುತ್ತದೆ. ರಾಜ್ಯದಲ್ಲಿ ವೈದ್ಯಕೀಯ ತುರ್ತುಪರಿಸ್ಥಿತಿ ಎದುರಾಗಿದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ತರದಿದ್ದರೆ ಚಿಕಿತ್ಸೆ ಇಲ್ಲದೇ ಸಾವಿರಾರು ಮಂದಿ ಜೀವ ಕಳೆದುಕೊಳ್ಳಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
Recommended Video
ಪೋಲಿಯೋ ಮಾದರಿ ಡ್ರೈವ್ ಅಗತ್ಯ: ರಾಜ್ಯದಲ್ಲಿ ಕಠಿಣ ಲಾಕ್ ಡೌನ್ ಅಗತ್ಯವಿದೆ. ಹಾಗಂತ ಲಾಕ್ ಡೌನ್ ಮಾಡಿ ಸುಮ್ಮನೆ ಕೂತರೆ ಕೊರೊನಾಗೆ ಪರಿಹಾರ ಸಿಗುವುದಿಲ್ಲ. ಬದಲಿಗೆ ಪೋಲಿಯೋ ಅಭಿಯಾನ ಮಾದರಿಯಲ್ಲಿ ಕೊರೊನಾ ವಿರುದ್ಧ ಲಸಿಕೆ ಅಭಿಯಾನ ಜಾರಿಗೆ ತರಬೇಕು. ಇದಕ್ಕಾಗಿ ಖಾಸಗಿ ವೈದ್ಯಕೀಯ ರಂಗ ಮತ್ತು ಸರ್ಕಾರ ಒಗ್ಗೂಡಿ ಜನರ ಜೀವ ರಕ್ಷಣೆಗೆ ಮುಂದಾಗಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರ ಆಲೋಚನೆ ಮಾಡಬೇಕಿದೆ. ಈಗ ವ್ಯಾಕ್ಸನ್ ಡ್ರೈವ್ ನಲ್ಲಿ ಸಾಮಾಜಿಕ ಅಂತರ ಕಣ್ಮರೆಯಾಗಿದೆ. ಹೀಗಾಗಿ ಲಸಿಕೆ ಹಾಕುವ ಜಾಗಗಳೇ ಕೊರೊನಾ ಅಂಟಿಸುವ ಕೇಂದ್ರಗಳಾಗಿ ಪರಿವರ್ತನೆಯಗಬಾರದು ಎಂದು ಅವರು ಸಲಹೆ ಮಾಡಿದ್ದಾರೆ.