ಕನ್ನಡ ಕಡ್ಡಾಯ : ಆನ್ ಲೈನ್ ಅರ್ಜಿಗೆ ರುಜು ಹಾಕಿ
ಕರ್ನಾಟಕದ ಅಂಗಡಿ ಮುಂಗಟ್ಟುಗಳಲ್ಲಿ ಹಾಕಬೇಕಾದ ನಾಮಫಲಕಗಳಲ್ಲಿ ಕನ್ನಡಕ್ಕೆ ಮನ್ನಣೆ ಇರಬೇಕೆಂದು ಈ ಹಿಂದೆ ಕರ್ನಾಟಕ ರಾಜ್ಯ ಸರ್ಕಾರವು ಹೊರಡಿಸಿದ್ದ ಆದೇಶವನ್ನು ರಾಜ್ಯ ಉಚ್ಚ ನ್ಯಾಯಾಲಯ ವಜಾಗೊಳಿಸಿರುವ ಹಿನ್ನೆಲೆಯಲ್ಲಿ, ನಾಡುನುಡಿಯ ಹಿತ ಕಾಪಾಡಲು ಬೇಕಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು. ಕರ್ನಾಟಕದಲ್ಲಿ ಕನ್ನಡವನ್ನು ಆಡಳಿತ ಭಾಷೆಯಾಗಿಸುವ ನಿಟ್ಟಿನಲ್ಲಿ ಪರಿಣಾಮಕಾರಿ ಹೆಜ್ಜೆ ಇಡಬೇಕೆಂದು ಆಗ್ರಹಿಸುತ್ತೇವೆ. ಈ ಮೂಲಕ ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತರುವಂಥಾ ಎಲ್ಲಾ ನಿಯಮಗಳನ್ನು ಧಿಕ್ಕರಿಸಬೇಕು.
ಯಾವುದೇ ಕಾಯ್ದೆ ಕಾನೂನು ಇರುವುದು ಈ ನೆಲದ ಮಕ್ಕಳ ಅನುಕೂಲಕ್ಕಾಗಿಯೇ ಎನ್ನುವುದು ಸರ್ವವಿದಿತ. ಕನ್ನಡದ ಜನರಿಗೆ ಅನುಕೂಲವಾಗಲೆಂಬ ಕಾರಣಕ್ಕಾಗಿಯೇ ಅಂಗಡಿ ಮುಂಗಟ್ಟುಗಳ ನಾಮಫಲಕಗಳು ಕನ್ನಡದಲ್ಲಿರತಕ್ಕದ್ದು ಎನ್ನುವುದು ಸಹಜವಾದ ನ್ಯಾಯ. ಆದರೆ ಭಾರತದ ಸಂವಿಧಾನವು ಇಂಥಾ ಸಹಜ ನ್ಯಾಯವನ್ನು ತುಳಿದುಹಾಕಿಬಿಡಬಹುದಾದ ಅನೇಕ ಕಲಮ್ಮುಗಳನ್ನು ಹೊಂದಿದ್ದು ಅದರ ಆಧಾರದ ಮೇರೆಗೇ ನ್ಯಾಯಾಲಯಗಳು ತೀರ್ಪುಗಳನ್ನು ನೀಡುವುದರಿಂದ ಕರ್ನಾಟಕ ರಾಜ್ಯ ಸರ್ಕಾರವು ಈ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಚಾಣಾಕ್ಷತೆಯಿಂದಲೂ, ಬದ್ಧತೆಯಿಂದಲೂ ತೆಗೆದುಕೊಳ್ಳಬೇಕಾಗಿದೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]
ಸುಗ್ರೀವಾಜ್ಞೆಯ ಮೂಲಕ ತನ್ನ ಆದೇಶವನ್ನು ಎತ್ತಿ ಹಿಡಿದು ಸೂಕ್ತವಾಗಿ ಜಾರಿಗೊಳಿಸತಕ್ಕದ್ದು. ರಾಜ್ಯದಲ್ಲಿ ಕಾರ್ಯನಿರ್ವಹಿಸುವ ಯಾವುದೇ ಸಂಸ್ಥೆ, ಇಲಾಖೆ, ಕಚೇರಿಗಳು ಈ ನಾಡಿನ ಭಾಷೆಯಾದ ಕನ್ನಡದಲ್ಲಿ ನಾಮಫಲಕಗಳನ್ನು ಹಾಕುವುದು ಕಡ್ಡಾಯ ಎನ್ನುವುದರ ಜೊತೆಯಲ್ಲಿಯೇ ಕನ್ನಡದಲ್ಲಿ ಸೇವೆ ನೀಡದಿರುವುದು ಶಿಕ್ಷಾರ್ಹ ಅಪರಾಧ ಎನ್ನುವ ಕಾಯ್ದೆಯನ್ನು ರೂಪಿಸಿ ಜಾರಿಗೊಳಿಸತಕ್ಕದ್ದು.
ಇದೀಗ ಉಚ್ಚನ್ಯಾಯಾಲಯವು ನೀಡಿರುವ ತೀರ್ಪಿನ ಕೂಲಂಕಶ ಅಧ್ಯಯನಕ್ಕಾಗಿ ಸಮಿತಿಯನ್ನು ರಚಿಸಿ ಯಾವ ರೀತಿಯಲ್ಲಿ ಈ ತೀರ್ಪನ್ನು ಎದುರಿಸಬೇಕೆಂದು ಚರ್ಚಿಸಿ ಸೂಕ್ತ ಕಾನೂನು ಹೋರಾಟವನ್ನು ಮುಂದುವರೆಸತಕ್ಕದ್ದು. [ಆ ಆನ್ ಲೈನ್ ಅರ್ಜಿಗೆ ಸಹಿ ಹಾಕಿರಿ]
ಭಾರತದ ಸಂವಿಧಾನದ ಯಾವ ಯಾವ ಕಲಮ್ಮುಗಳು ಕನ್ನಡನಾಡಿನಲ್ಲಿ ಕನ್ನಡದ ಸಾರ್ವಭೌಮತ್ವಕ್ಕೆ ಧಕ್ಕೆ ಉಂಟು ಮಾಡುತ್ತಿವೆಯೋ ಅವುಗಳನ್ನು ಬದಲಿಸಲು ರಾಜ್ಯ ಸರ್ಕಾರವು ಒಂದು ನಿರ್ಣಯವನ್ನು ಮಾಡಿ ವಿಧಾನಸಭೆಯಲ್ಲಿ ಮಂಡಿಸತಕ್ಕದ್ದು. ಸದರಿ ನಿರ್ಣಯದಲ್ಲಿ ಕೇಂದ್ರ ಸರ್ಕಾರವು ರಾಜ್ಯಗಳ ಮೇಲೆ ಸರ್ವಾಧಿಕಾರ ಪ್ರಯೋಗಿಸುತ್ತಿರುವುದನ್ನು ಖಂಡಿಸತಕ್ಕದ್ದು.
ಭಾರತದ ಸಂಸತ್ತಿನಲ್ಲಿ ಈ ಬಗ್ಗೆ ದನಿಯೆತ್ತುವ ಮೂಲಕವೂ, ಇನ್ನುಳಿದ ರಾಜ್ಯಗಳ ಸಹಕಾರವನ್ನು ಪಡೆಯುವ ಮೂಲಕವೂ ರಾಜ್ಯಭಾಷೆಗಳ ಕತ್ತು ಹಿಸುಕುವ ಇಂಥಾ ನಿಯಮಗಳನ್ನು ಬದಲಿಸಲು ಮುಂದಾಗುವುದು.
ಭಾರತದ ಸಂವಿಧಾನದಲ್ಲಿ ಭಾಷಾನೀತಿಯ ಬಗ್ಗೆ ಬರೆಯಲಾದ ವಿಧಿಗಳನ್ನು ಪುನರ್ ಪರಿಶೀಲಿಸಿ ಇವತ್ತಿನ ಹುಳುಕಿನ ಭಾಷಾನೀತಿಯನ್ನು ಕೈಬಿಟ್ಟು ಸಮಾನ ಗೌರವದ, ಸಮಾನ ಅವಕಾಶದ ಹೊಸದೊಂದು ಭಾಷಾ ನೀತಿಯನ್ನು ಭಾರತ ಸರ್ಕಾರ ಅಳವಡಿಸಿಕೊಳ್ಳುವಂತೆ ಕರ್ನಾಟಕ ರಾಜ್ಯ ಸರ್ಕಾರವು ಸೂಕ್ತವಾದ ವೇದಿಕೆಗಳಲ್ಲಿ ದನಿ ಎತ್ತಬೇಕೆಂದು ಕೋರುತ್ತೇವೆ. ವೈವಿಧ್ಯತೆಗೆ ಕೊಡಲಿ ಪೆಟ್ಟಿನಂತೆ ಕಾಣಿಸುವ ಈಗಿನ ಭಾಷಾನೀತಿಯನ್ನು ಬದಲಿಸಿಕೊಳ್ಳಲು ಕೇಂದ್ರದ ಮೇಲೆ ಒತ್ತಡ ಹೇರುವ ಕ್ರಮವನ್ನು ತಾವು ಕೈಗೊಳ್ಳಬೇಕೆಂದು ನಾವುಗಳು ಆಗ್ರಹಿಸುತ್ತೇವೆ.