ಒನ್ಇಂಡಿಯಾ ಕನ್ನಡ ಫಲಶ್ರುತಿ: ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಪೂರೈಸದ ಜಿಂದಾಲ್ ಗೆ ಶೋಕಾಸ್ ನೋಟಿಸ್ ನೀಡಿದ ಸರ್ಕಾರ
ಬೆಂಗಳೂರು. ಜೂ. 02: ರಾಜ್ಯದಲ್ಲಿ ಕೊರೊನಾ ಸೋಂಕಿನಿಂದ ಜನರು ಪರದಾಡುತ್ತಿದ್ದಾರೆ. ಬಳ್ಳಾರಿಯಲ್ಲಿರುವ ಜಿಂದಾಲ್ ಸ್ಟೀಲ್ ಕಂಪನಿ ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನೇ ಉಲ್ಲಂಘನೆ ಮಾಡಿ ರಾಜ್ಯಕ್ಕೆ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಪೂರೈಕೆ ಮಾಡಿಲ್ಲ. ಈ ಕುರಿತು ಸ್ಪಷ್ಟನೆ ನೀಡುವಂತೆ ಜಿಂದಾಲ್ ಸ್ಟೀಲ್ ಕಂಪನಿಗೆ ರಾಜ್ಯ ಸರ್ಕಾರ ಶೋಕಾಸ್ ನೋಟಿಸ್ ನೀಡಿದೆ. ಸಮರ್ಥ ಉತ್ತರ ನೀಡಿ ಬಾಕಿ ಆಕ್ಸಿಜನ್ ಪೂರೈಕೆ ಮಾಡದಿದ್ದರೆ ವಿಪತ್ತು ನಿರ್ವಹಣಾ ಕಾಯ್ದೆ ಉಲ್ಲಂಘನೆ ಅಡಿ ಜಿಂದಾಲ್ ವಿರುದ್ಧ ಕೇಸು ದಾಖಲಿಸುವುದಾಗಿ ಸರ್ಕಾರ ಎಚ್ಚರಿಕೆ ನೀಡಿದೆ.ಜಿಂದಾಲ್ ಸ್ಟೀಲ್ ರಾಜ್ಯಕ್ಕೆ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಪೂರೈಕೆ ಮಾಡದೇ ದ್ರೋಹ ಎಸಗಿದ್ದ ಬಗ್ಗೆ ಏ. 25 ರಂದು ಒನ್ಇಂಡಿಯಾ ಕನ್ನಡ ವಿಸ್ಕೃತ ವರದಿ ಪ್ರಕಟಿಸಿತ್ತು.
ದಿನಕ್ಕೆ 2500 ಟನ್ ಆಕ್ಸಿಜನ್ ಉತ್ಪಾದಿಸಿದರೂ ರಾಜ್ಯಕ್ಕೆ ಒಂದು ಸಿಲಿಂಡರ್ ಕೊಡದ ಜಿಂದಾಲ್ ಸ್ಟೀಲ್!
ಜಿಂದಾಲ್ಗೆ ಶೋಕಾಸ್ ನೋಟಿಸ್
ಕೊರೊನಾ ಸಂಕಷ್ಟ ಕಾಲದಲ್ಲೂ ಜೆಎಸ್ ಡಬ್ಲೂ ಸ್ಟೀಲ್ ಲಿ. ರಾಜ್ಯಕ್ಕೆ ಪೂರೈಕೆ ಮಾಡಬೇಕಿದ್ದ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಪೂರೈಕೆ ಮಾಡಿಲ್ಲ. ಈ ಕುರಿತು ಅನೇಕ ಸಲ ಎಚ್ಚರಿಸಿದರೂ ಅದರ ಬಗ್ಗೆ ಜಿಂದಾಲ್ ತಲೆ ಕೆಡಿಸಿಕೊಂಡಿರಲಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಕೊರೊನಾ ನಿಯಂತ್ರಣ ರಾಜ್ಯ ಕಾರ್ಯ ನಿರ್ವಿಹಣಾ ಸಮಿತಿಯ ಸದಸ್ಯರು ಜಿಂದಾಲ್ ರಾಜ್ಯಕ್ಕೆ ಮೋಸ ಮಾಡುತ್ತಿರುವ ಬಗ್ಗೆ ಸರ್ಕಾರದ ಗಮನಕ್ಕೆ ತಂದಿದ್ದರು.
ಈ ಕುರಿತು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಅವರು ಜಿಂದಾಲ್ ಸ್ಟೀಲ್ಗೆ ಶೋಕಾಸ್ ನೋಟಿಸ್ ನೀಡಿದ್ದಾರೆ. ಜಿಂದಾಲ್ ಸಂಸ್ಥೆಯ ಉಪ ವ್ಯವಸ್ಥಾಪಕ ನಿರ್ದೇಶಕ ವಿನೋದ್ ನೋವಲ್ ಅವರಿಗೆ ನೋಟಿಸ್ ನೀಡಿದ್ದು, ಒಂದು ದಿನದಲ್ಲಿ ಉತ್ತರ ನೀಡುವಂತೆ ಸೂಚನೆ ನೀಡಲಾಗಿದೆ. ಸರ್ಕಾರದ ಈ ನೋಟಿಸ್ಗೆ ಉತ್ತರ ನೀಡದಿದ್ದರೆ ವಿಪತ್ತು ನಿರ್ವಹಣೆ ಕಾಯ್ದೆ ಉಲ್ಲಂಘನೆ ಅಡಿಯಲ್ಲಿ ಜಿಂದಾಲ್ ಸಂಸ್ಥೆ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸುವುದಾಗಿ ಮಂಜುನಾಥ್ ಪ್ರಸಾದ್ ಎಚ್ಚರಿಕೆ ನೀಡಿದ್ದಾರೆ.
ಜಿಂದಾಲ್ ಆಕ್ಸಿಜನ್ ದೋಖಾ
ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ತಾಂಡವಾಡುತ್ತಿದೆ. ದೇಶದಲ್ಲಿ ಆಕ್ಸಿಜನ್ ಸಮಸ್ಯೆ ತಲೆದೋರಿದಾಗಿ ಕೆಲವು ಸೀಮಿತ ಉದ್ಯಮ ಹೊರತು ಪಡಿಸಿ ಎಲ್ಲಾ ಸ್ಟೀಲ್ ಉತ್ಪಾದನಾ ಸಂಸ್ಥೆಗಳು ಮೆಡಿಕಲ್ ಆಕ್ಸಿಜನ್ ನ್ನು ಸಂಬಂಧಿಸಿದ ರಾಜ್ಯಗಳಿಗೆ ಪೂರೈಕೆ ಮಾಡಬೇಕು. ಕೋವಿಡ್ ಸಾವುಗಳನ್ನು ತಡೆಯಬೇಕು ಎಂದು ಕೇಂದ್ರ ಸರ್ಕಾರ ಕಟ್ಟಪ್ಪಣೆ ಮಾಡಿತ್ತು. ಕೇಂದ್ರ ಸರ್ಕಾರ ನಿರ್ದೇಶನ ಪ್ರಕಾರ, ಪ್ರತಿ ದಿನ ಜಿಂದಾಲ್ ಸ್ಟೀಲ್ ಸಂಸ್ಥೆ ರಾಜ್ಯಕ್ಕೆ 850 ಮೆಟ್ರಿಕ್ ಟನ್ ಆಕ್ಸಿಜನ್ ರಾಜ್ಯಕ್ಕೆ ಪೂರೈಕೆ ಮಾಡಿಕೊಡಬೇಕು. ಆದರೆ, ಜಿಂದಾಲ್ ಸಂಸ್ಥೆ ನಿಗದಿತ ಪ್ರಮಾಣದ ಶೇ. 50 ಕ್ಕಿಂತಲೂ ಕಡಿಮೆ ಲಿಕ್ವಿಡ್ ಆಕ್ಸಿಜನ್ ರಾಜ್ಯಕ್ಕೆ ಪೂರೈಕೆ ಮಾಡುತ್ತಿದೆ.
ಆಕ್ಸಿಜನ್ ಪೂರೈಕೆ
ಆಕ್ಸಿಜನ್ ಪೂರೈಕೆ, ಕೊರತೆ ಉಸ್ತುವಾರಿ ವಹಿಸಿದ್ದ ನೋಡಲ್ ಅಧಿಕಾರಿ ಈ ವಿಷಯವನ್ನು ಕೊರೊನಾ ನಿಯಂತ್ರಣ ರಾಜ್ಯ ಕಾರ್ಯ ನಿರ್ವಹಣಾ ಸಮಿತಿ ಗಮನಕ್ಕೆ ತಂದಿದ್ದಾರೆ. ರಾಜ್ಯಕ್ಕೆ ಪ್ರತಿ ನಿತ್ಯ 850 ಟನ್ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಅಗತ್ಯವಿದೆ. ಆದರಲ್ಲಿ ಶೇ. 70 ರಷ್ಟು (580 ಟನ್ ) ಜಿಂದಾಲ್ ಸಂಸ್ಥೆ ಪೂರೈಕೆ ಮಾಡಬೇಕು. ಪರಿಸ್ಥಿತಿ ಕೈ ಮೀರಿದರೆ ಸ್ಟೀಲ್ ಉತ್ಪಾದನಾ ಘಟಕ ನಿಲ್ಲಿಸಿಯಾದರೂ ಆಕ್ಸಿಜನ್ ಪೂರೈಕೆ ಮಾಡಬೇಕಿತ್ತು. ಜಿಂದಾಲ್ ಸ್ಟೀಲ್ ನಿಯಮ ಗಾಳಿಗೆ ತೂರಿ ಸ್ಟೀಲ್ ಉತ್ಪಾದನೆಯಲ್ಲಿ ತೊಡಗಿಸಿಕೊಂಡಿದೆ. ಈ ಕುರಿತು ನೋಡಲ್ ಅಧಿಕಾರಿ ಅನೇಕ ಸಲ ನೋಟಿಸ್ ನೀಡಿ ಎಚ್ಚರಿಕೆ ನೀಡಿದ್ದರು. ಇಷ್ಟಾಗಿಯೂ ಜಿಂದಾಲ್ ಗೆ ರಾಜ್ಯದ ಜನರ ಸಾವಿಗಿಂತಲೂ ಸ್ಟೀಲ್ ಉತ್ಪಾದನೆಗೆ ಆದ್ಯತೆ ನೀಡಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ಇದೀಗ ಶೋಕಾಸ್ ನೋಟಿಸ್ ನೀಡಿ ಕೇಸು ದಾಖಲಿಸುವ ಎಚ್ಚರಿಕೆ ನೀಡಿದೆ.
Recommended Video
ಒನ್ಇಂಡಿಯಾ ಕನ್ನಡ ಫಲಶೃತಿ
ಜಿಂದಾಲ್ ರಾಜ್ಯಕ್ಕೆ ಅಗತ್ಯ ಇರುವ ಲಿಕ್ವಿಡ್ ಆಕ್ಸಿಜನ್ ಪೂರೈಕೆ ಮಾಡದೇ ಮೋಸ ಮಾಡುತ್ತಿರುವ ಬಗ್ಗೆ ಒನ್ಇಂಡಿಯಾ ಕನ್ನಡ ಏ. 25 ರಂದು ವಿಸ್ತೃತ ವರದಿ ಪ್ರಸಾರ ಮಾಡಿತ್ತು. ರಾಜ್ಯದಲ್ಲಿ ಕೊರೊನಾ ಸೋಂಕು ಪರಕಾಷ್ಠೆಗೆ ತಲುಪಿತ್ತು. ಎಲ್ಲಡೆ ಆಕ್ಸಿಜನ್ ಇಲ್ಲದೇ ಕೊರೊನಾ ಸೋಂಕಿತರು ದಾರಿ ಮಧ್ಯೆ ಜೀವ ಬಿಡುತ್ತಿದ್ದರು. ರಾಜ್ಯಕ್ಕೆ ಪೂರೈಕೆ ಮಾಡಬೇಕಿದ್ದ ಲಿಕ್ವಿಡ್ ಆಕ್ಸಿಜನ್ ಪೂರೈಕೆ ಮಾಡದೇ ಸ್ಟೀಲ್ ಉತ್ಪಾದನೆಯಲ್ಲಿ ತೊಡಗಿತ್ತು. ರಾಜ್ಯದಿಂದ 800 ಕೋಟಿ ರೂ. ತೆರಿಗೆ ಸೌಲಭ್ಯ ಪಡೆದಿದ್ದ ಜಿಂದಾಲ್ ಸ್ಟೀಲ್ ಆಕ್ಸಿನ್ ಪೂರೈಕೆ ವಿಚಾರದಲ್ಲಿ ರಾಜ್ಯಕ್ಕೆ ಮಾಡುತ್ತಿರುವ ದ್ರೋಹ ಕುರಿತ ವರದಿ ಸಂಚಲನ ಮೂಡಿಸಿತ್ತು. ವರದಿ ಹಿನ್ನೆಲೆಯಲ್ಲಿ ಜಿಂದಾಲ್ ಸ್ಟೀಲ್ ಸ್ಪಷ್ಟನೆ ನೀಡಿತ್ತು. ಇದೀಗ ಜಿಂದಾಲ್ ಅಸಲಿ ಮುಖ ಹೊರ ಬಿದ್ದಿದೆ. ಈಗಲೂ ಆಕ್ಸಿಜನ್ ಪೂರೈಕೆ ಮಾಡದೇ ಮೋಸ ಮಾಡಿದರೆ ಅದರ ವಿರುದ್ಧ ಕೇಸು ದಾಖಲಾಗುವ ಸಾಧ್ಯತೆಯಿದೆ.