ಒನ್ಇಂಡಿಯಾ ಫಲಶ್ರುತಿ : ಆವಲಹಳ್ಳಿ ಜಂಕ್ಷನ್ ನಲ್ಲಿ ಪೇದೆ ಪ್ರತ್ಯಕ್ಷ
Recommended Video
ಬೆಂಗಳೂರು, ಸೆಪ್ಟೆಂಬರ್ 21 : ಗಿರಿನಗರದ ಬಳಿಯಿರುವ ಆವಲಹಳ್ಳಿ ಜಂಕ್ಷನ್ ನಲ್ಲಿ ಟ್ರಾಫಿಕ್ ನಿಯಂತ್ರಿಸುವ ಪೊಲೀಸ್ ಕಾನ್ಸ್ಟೇಬಲ್ ನನ್ನು ನೋಡಿ ದಿನನಿತ್ಯ ಅದೇ ರಸ್ತೆಯಲ್ಲಿ ಅಡ್ಡಾಡುವವರು ಅಕ್ಷರಶಃ ಸಂಭ್ರಮಿಸಿರುತ್ತಾರೆ, ನಿಟ್ಟುಸಿರುಬಿಟ್ಟಿರುತ್ತಾರೆ, ಮತ್ತೆ ಪೇದೆ ಮಾಯವಾಗದಿರಲಿ ಎಂದು ದೇವರಲ್ಲಿ ಹರಕೆ ಹೊತ್ತಿರುತ್ತಾರೆ.
ಆವಲಹಳ್ಳಿ ಜಂಕ್ಷನ್ ನಲ್ಲಿ ಕೆಲಸಕ್ಕೆ ಬಾರದ ಪೊಲೀಸ್!
ಈ ಮಾತುಗಳು ಉತ್ಪ್ರೇಕ್ಷೆಯಾಗಿ ಕಂಡರೂ ಸಾಕಷ್ಟು ಸತ್ಯ ಅಡಗಿದೆ. ಈ ಜಂಕ್ಷನ್ ಬೇರೆ ಜಂಕ್ಷನ್ ಗಳಿಗಿಂತ ಭಿನ್ನವಾಗಿಲ್ಲ. ಬೇರೆ ಚೌಕಗಳಲ್ಲಿ ಇರುವಂತೆ ಇಲ್ಲಿಯೂ ನಿತ್ಯವೂ ವಾಹನ ಜಂಗುಳಿ ಇದ್ದದ್ದೇ. ಆದರೆ, ಇಲ್ಲಿ ಇಲ್ಲದಿದ್ದುದು ಸಂಚಾರ ನಿಯಂತ್ರಿಸುವ ಪೊಲೀಸ್ ಪೇದೆ ಮಾತ್ರ!
ಇಲ್ಲಿ ವಾಹನ ಓಡಿಸುವ ಕಷ್ಟ ಎಂಥದ್ದೆಂದು ಪ್ರತಿದಿನ ಬೆಳಗಿನ ಪೀಕ್ ಗಂಟೆಯಲ್ಲಿ, ಸಂಜೆ ಸಮಯದಲ್ಲಿ ವಾಹನ ಓಡಿಸುವವರಿಗೇ ಗೊತ್ತು, ಅಲ್ಲಿ ನಿಂತು ಸಂಚಾರ ನಿಯಂತ್ರಿಸುವ ಸಾರ್ವಜನಿಕರಿಗೆ ಗೊತ್ತು, ಪೆಟ್ರೋಲ್ ತುಂಬಿಸುವ ಎಸ್ಸಾರ್ ಪೆಟ್ರೋಲ್ ಬಂಕ್ ಹುಡುಗರಿಗೆ ಗೊತ್ತು.
ಕಥೆ 2 : ಆವಲಹಳ್ಳಿ ಪೆಟ್ರೋಲ್ ಬಂಕ್ ವೃತ್ತದ ವೃತ್ತಾಂತ
ಈ ಸಂಗತಿಯನ್ನು ಹೆಚ್ಚುವರಿ ಟ್ರಾಫಿಕ್ ಕಮಿಷನರ್ ಆಗಿರುವ ಹಿತೇಂದ್ರ ಅವರ ಗಮನಕ್ಕೆ ನಮ್ಮ ವೆಬ್ ಸೈಟ್ ಮೂಲಕ ತಂದಾಗ, ಅವರು ತಕ್ಷಣ ಸ್ಪಂದಿಸಿ ಪಶ್ಚಿಮ ವಿಭಾಗದ ಡಿಸಿಪಿ ಅವರ ಗಮನಕ್ಕೆ ತಂದಿದದಾರೆ. ಮರುದಿನದಿಂದಲೇ ಹೆಚ್ಚು ವಾಹನ ಸಂಚಾರ ಇರುವ ಸಮಯದಲ್ಲಿ ಈಗ ಪೊಲೀಸರು ಬಂದು ನಿಯಂತ್ರಿಸುತ್ತಿದ್ದಾರೆ.
ಕೂಡಲೆ ಸ್ಪಂದಿಸಿದ ಹೆಚ್ಚುವರಿ ಟ್ರಾಫಿಕ್ ಕಮಿಷನರ್ ಹಿತೇಂದ್ರ ಮತ್ತು ಪಶ್ಚಿಮ ವಿಭಾಗದ ಡಿಸಿಪಿಯವರಿಗೆ ಧನ್ಯವಾದ ಹೇಳಬೇಕು. ಆದರೆ, ಒಂದು ಸಂಗತಿಯೇನೆಂದರೆ, ಹೀಗೆ ಆಗುತ್ತಿರುವುದು ಇದು ಮೊದಲನೇ ಬಾರಿಯೇನಲ್ಲ. ಹಿಂದೆ ಕೂಡ ಅವರ ಗಮನಕ್ಕೆ ತರಲಾಗಿತ್ತು. ಒಂದೆರಡು ದಿನ ನಿಯಂತ್ರಿಸಿದ್ದರು ಕೂಡ. ನಂತರ ಬಾಲ ಡೊಂಕೆ.
ಇದು ಮರುಕಳಿಸದಿರಲಿ. ನಿತ್ಯವೂ ಅಲ್ಲೊಬ್ಬ ಪೊಲೀಸ್ ಪೇದೆ ಸಂಚಾರ ನಿಯಂತ್ರಿಸುವಂತಾಗಲಿ, ಸಾರ್ವಜನಿಕರಿಗೆ ಸಂಚಾರ ನಿಯಂತ್ರಿಸುವ 'ಹೆಚ್ಚುವರಿ ಜವಾಬ್ದಾರಿ'ಯನ್ನು ಹೆಚ್ಚುವರಿ ಆಯುಕ್ತರು ಹೊರಿಸುವಂತಾಗದಿರಲಿ, ಅಡ್ಡಾಡುವ ಜನರು ಬೈದುಕೊಳ್ಳದೆ ಮನೆಗೆ ಸೇರುವಂತಾಗಲಿ.
ಎಲ್ಲಕ್ಕಿಂತ ಹೆಚ್ಚಾಗಿ, ಆವಲಹಳ್ಳಿಯಿಂದ ಮೈಸೂರು ರಸ್ತೆಯನ್ನು ಸೇರಿಕೊಳ್ಳುವ ರಸ್ತೆ ಏಕಮುಖಿ ಸಂಚಾರದ ರಸ್ತೆಯಾಗಿದ್ದರೂ, ಅಲ್ಲಿ ಒನ್ ವೇ ಬೋರ್ಡನ್ನು ಜಡಿಯಲಾಗಿದ್ದರೂ, ಅಲ್ಲಿ ಪೊಲೀಸ್ ಪೇದೆ ನಿಂತಿದ್ದರೂ, ಏಕಮುಖಿ ಸಂಚಾರವನ್ನು ಬಳಸುವುದು ಏಕೆ? ಪೇದೆ ಆ ರಸ್ತೆಯಲ್ಲಿ ವಾಹನ ಸಾಗಲು ಅವಕಾಶ ನೀಡುವುದು ಏಕೆ?
ಪೊಲೀಸ್ ಪೇದೆ ಇರದ ಸಮಯದಲ್ಲಿ ಎಲ್ಲ ಬದಿಯಿಂದಲೂ ವಾಹನಗಳು ತಾಮುಂದು ನಾಮುಂದು ಎಂದು ನುಗ್ಗುವ ಸಮಯದಲ್ಲಿ, ಕಡಿದಾಗಿರುವ ಆ ಜಂಕ್ಷನ್ ನಲ್ಲಿ ಆ ದೇವರು ಬಂದರೂ ಸರಿಯಾಗಿ ನಿಯಂತ್ರಿಸಲು ಸಾಧ್ಯವಿಲ್ಲ. ಆಕಡೆಯಿಂದ, ಈಕಡೆಯಿಂದ, ಅಲ್ಲಿಂದ, ಇಲ್ಲಿಂದ, ಎಲ್ಲೆಲ್ಲಿಂದಲೂ ವಾಹನಗಳು ಸೇರಿಕೊಂಡು... ರಾಮರಾಮಾ!