Oneindia Impact: ಬುಡಕಟ್ಟು ಜನರ ಹಸಿದ ಹೊಟ್ಟೆ ತುಂಬಿತು
ಬೆಂಗಳೂರು, ಏಪ್ರಿಲ್ 21: ಕೊರೊನಾ ಹಾವಳಿಯಿಂದ ಇಡೀ ದೇಶವೇ ಲಾಕ್ಡೌನ್ ಆಗಿ ಕುಳಿತಿದೆ. ಇದರಿಂದ ಬಡವರು, ಕೂಲಿ ಕಾರ್ಮಿಕರು ಸಾಕಷ್ಟು ಸಂಕಟ ಅನುಭವಿಸುತ್ತಿದ್ದಾರೆ.
ಸರ್ಕಾರ ಹಾಗೂ ಅನೇಕ ಸಂಘ ಸಂಸ್ಥೆಗಳು ಅಂತವರಿಗೆ ಸಹಾಯ ಮಾಡುತ್ತಿವೆ. ಆದರೆ, ಯಾವಾಗೊ ಒಮ್ಮೆ ನಾಡಿಗೆ ಬಂದು ಸಾಕಷ್ಟು ದಿನಸಿ, ಇತರೆ ಆಹಾರ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗಿ ಸಂಗ್ರಹಿಸಿಟ್ಟುಕೊಂಡು ತಿನ್ನುವ ಕಾಡಂಚಿನ ಬುಡಕಟ್ಟು ಜನರ ಬವಣೆಯೂ ಲಾಕ್ಡೌನ್ ಸಂದರ್ಭದಲ್ಲಿ ಹೇಳತೀರದಾಗಿದೆ.
ಕೊರೊನಾ ಸೋಂಕಿನಿಂದ ಮೃತಪಟ್ಟ ವೈದ್ಯರ ಅಂತ್ಯಕ್ರಿಯೆಗೂ ಅಡ್ಡಿ
ಈ ಕುರಿತು ಒನ್ ಇಂಡಿಯಾ ಕನ್ನಡ ಸುದ್ದಿ ವಿಭಾಗ ಹಾಗೂ ವಿಡಿಯೋ ವಿಭಾಗ ಕಾರ್ಮಿಕರಿಗೆ, ಬಡವರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಸಾಕ್ಷಾತ್ ವರದಿಗಳನ್ನು ಬಿತ್ತರಿಸುತ್ತಿದೆ. ವರದಿಗಳನ್ನು ನೋಡಿದ ಹಲವಾರು ದಾನಿಗಳು ಒನ್ಇಂಡಿಯಾ ಮೂಲಕ ದಿನಸಿ ಕಿಟ್ಗಳನ್ನು ತಲುಪಿಸಲು ಮುಂದೆ ಬರುತ್ತಿದ್ದಾರೆ.
ಮಡಿಲು ಸೇವಾ ಟ್ರಸ್ಟ್ ಸಂಸ್ಥೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಬುಡಕಟ್ಟು ಜನರಿರುವ (ಬುಡ್ಗ ಜಂಗಮ) ಬೆಳ್ಳಾಯಪಾಳ್ಯದ ಜನರು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಒನ್ಇಂಡಿಯಾ ಸಂಸ್ಥೆಯ ಗಮನಕ್ಕೆ ತಂದಾಗ, ನಮ್ಮ ಟೀಂ ಅಲ್ಲಿ ಹೋಗಿ ದಾನಿಗಳಿಂದ ಸಂಗ್ರಹಿಸಿದ ದಿನಸಿ ಕಿಟ್ಗಳನ್ನು ಸುಮಾರು 30 ಕ್ಕೂ ಹೆಚ್ಚು ಕುಟುಂಬಗಳಿಗೆ ದಿನಸಿ ಪೊಟ್ಟಣಗಳನ್ನು ನೀಡಿ ದೈರ್ಯ ತುಂಬಿ ಬಂದಿದ್ದಾರೆ.
ಈ ವೇಳೆ ಒನ್ಇಂಡಿಯಾದೊಂದಿಗೆ ತಮ್ಮ ಅನಿಸಿಕೆ ಹಂಚಿಕೊಂಡ ಗ್ರಾಮಸ್ಥರು, ಪೇಟೆಗೆ ಹೋಗಿ ದಿನಸಿ ತರಲು ಆಗುತ್ತಿಲ್ಲ. ಏಕೆಂದರೆ ಎಲ್ಲ ಕೆಲಸಗಳು ಬಂದ್ ಆಗಿವೆ. ಇದರಿಂದ ನಮಗೆ ಆಹಾರ ಸಾಮಗ್ರಿಗಳನ್ನು ಕೊಳ್ಳಲು ಹಣ ಇರಲಿಲ್ಲ. ದಾನಿಗಳು ಈ ಸಂದರ್ಭದಲ್ಲಿ ನೆರವಾಗಿದ್ದಾರೆ. ಇದೇ ರೀತಿ ಸರ್ಕಾರವೂ ಹೆಚ್ಚಿನ ಸಹಾಯ ಮಾಡಬೇಕು ಎಂದು ಮನವಿ ಮಾಡಿದರು. ಈ ವೇಳೆ ಮಡಿಲು ಸೇವಾ ಟ್ರಸ್ಟ್ ಸಿಬ್ಬಂದಿ ಹಾಜರಿದ್ದರು.