'ಒನ್ಇಂಡಿಯಾ' ಕ್ರೀಡಾಕೂಟ: ಕ್ರಿಕೆಟ್ ಹಬ್ಬ ಕಟ್ಟಿಕೊಟ್ಟ ರೋಚಕ ಕ್ಷಣಗಳು
ಬೆಂಗಳೂರು, ಡಿಸೆಂಬರ್ 17: 'ಒನ್ಇಂಡಿಯಾ' ಬಳಗ ಆಯೋಜಿಸಿದ್ದ 'ಒನ್ಇಂಡಿಯಾ ಕ್ರಿಕೆಟ್ ಲೀಗ್' ಟೂರ್ನಿ ಜಯನಗರದ ಶಾಲಿನಿ ಮೈದಾನದಲ್ಲಿ ಮಂಗಳವಾರ ನಡೆಯಿತು. ಸಚಿವ ಆರ್.ಅಶೋಕ್ ಕ್ರೀಡಾಕೂಟವನ್ನು ಉದ್ಘಾಟಿಸಿ ಆಟಗಾರರಿಗೆ ಶುಭ ಕೋರಿದರು.
ಒನ್ಇಂಡಿಯಾ ಮತ್ತು ಸಹೋದರ ಸಂಸ್ಥೆ ಡೈಲಿಹಂಟ್ ನ ಆರು ತಂಡಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದವು. ಸಮಬಲದ ಹೋರಾಟ ಏರ್ಪಟ್ಟು ಕ್ರಿಕೆಟ್ ಪ್ರಿಯರಿಗೆ ಹಲವು ರೋಚಕ ಕ್ಷಣಗಳನ್ನು ಕಟ್ಟಿಕೊಟ್ಟಿತು.
ರೆಡ್ ಬುಲ್ಸ್, ಭಜರಂಗಿ ಬಾಯ್ಸ್, ಬ್ಲಾಕ್ ಪ್ಯಾಂತರ್ಸ್, ಎಲ್ಲೋ ಸೂಪರ್ ಕಿಂಗ್ಸ್, ಬ್ಲೂ ಸ್ಟ್ರೈಕರ್ಸ್ ಮತ್ತು ಡೈಲಿಹಂಟ್ ತಂಡಗಳು ಟೂರ್ನಿಯಲ್ಲಿ ಪ್ರಥಮ ಸ್ಥಾನಕ್ಕಾಗಿ ಸೆಣೆಸಿದವು. ಒನ್ ಇಂಡಿಯಾ, ಡೈಲಿಹಂಟ್ ಬಳಗದ ಸಿಬ್ಬಂದಿಯೇ ಏಳು ತಂಡಗಳಾಗಿ ವಿಂಗಡಣೆಗೊಂಡು ಮೈದಾನದಲ್ಲಿ ಪರಸ್ಪರ ಎದುರಾಗಿದ್ದವು.
ರೆಡ್ಬುಲ್ ಮತ್ತು ಭಜರಂಗಿ ಬಾಯ್ಸ್ ನಡುವೆ ನಡೆದ ಮೊದಲ ಪಂದ್ಯವೇ ರೋಚಕ ಅಂತ್ಯವನ್ನು ಕಂಡಿತು. ಕೊನೆಯ ಎಸೆತದ ವರೆಗೆ ವಿಜಯಲಕ್ಷ್ಮಿ ಚಂಚಲೆಯಾಗಿದ್ದು, ಕೊನೆಯ ಎಸೆತದಲ್ಲಿ ಜಯ ಭಜರಂಗಿ ಬಾಯ್ಸ್ ಪಾಲಾಯಿತು.
ಎಂಟು ಓವರ್ಗೆ 103 ರನ್ ಚಚ್ಚಿದ ಆಟಗಾರರು
ಎರಡನೇ ಪಂದ್ಯದಲ್ಲಿ ಡೈಲಿ ಹಂಟ್ನ ಆಟಗಾರರು ಭರ್ಜರಿ ಆಟ ಪ್ರದರ್ಶಿಸಿ, ಕೇವಲ ಎಂಟು ಓವರ್ಗಳಲ್ಲಿ 103 ರನ್ ಗಳಿಸಿದರು. ಡೈಲಿಹಂಟ್ ಬ್ಯಾಟ್ಸ್ಮನ್ಗಳ ಬ್ಯಾಟಿನಿಂದ ಸಿಡಿದ ಚೆಂಡು ಹಲವು ಬಾರಿ ಕ್ರೀಡಾಂಗಣ ದಾಟಿ ಹಾರಿತು. ಡೈಲಿಹಂಟ್ ಗೆ ಬ್ಲ್ಯಾಕ್ ಪ್ಯಾಂಥರ್ಸ್ ಸುಲಭದ ತುತ್ತಾಯಿತು.
ಗುಣಮಟ್ಟದ ಕ್ರಿಕೆಟ್ ಪ್ರದರ್ಶಿಸಿದ ಎಲ್ಲೋ ಸೂಪರ್ ಕಿಂಗ್ಸ್ ಮತ್ತು ಬ್ಲೂ ಸ್ಟ್ರೈಕರ್
ಮುಂದಿನ ಪಂದ್ಯ ಎಲ್ಲೋ ಸೂಪರ್ ಕಿಂಗ್ಸ್ ಮತ್ತು ಬ್ಲೂ ಸ್ಟ್ರೈಕರ್ ನಡುವೆ. ಬ್ಲೂ ಸ್ಟ್ರೈಕರ್ ಅವರ ಗುಣಮಟ್ಟದ ಕ್ರಿಕೆಟ್ ಮುಂದೆ ಎಲ್ಲೋ ಸೂಪರ್ ಕಿಂಗ್ಸ್ ತಲೆಬಗ್ಗಿಸಬೇಕಾಯಿತು. ತಾಳ್ಮೆಯ ಆಟವಾಡಿದ ಬ್ಲೂ ಸ್ಟ್ರೈಕರ್ ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಮೂರರಲ್ಲೂ ಎಲ್ಲೋ ಸೂಪರ್ ಕಿಂಗ್ಸ್ ಅವರನ್ನು ಹಿಂದಿಕ್ಕಿ ಪಂದ್ಯವನ್ನು ಗೆದ್ದುಕೊಂಡರು.
ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಭಜರಂಗಿ ಬಾಯ್ಸ್ ಮತ್ತು ಬ್ಲೂ ಸ್ಟ್ರೈಕರ್
ಸೆಮಿಫೈನಲ್ ಪಂದ್ಯ ಭಜರಂಗಿ ಬಾಯ್ಸ್ ಮತ್ತು ಬ್ಲೂ ಸ್ಟ್ರೈಕರ್ ನಡುವೆ ನಡೆಯಿತು. ಎರಡೂ ತಂಡಗಳು ಅತ್ಯುತ್ತಮ ಬೌಲಿಂಗ್ ಪ್ರದರ್ಶನವನ್ನು ಈ ಪಂದ್ಯದಲ್ಲಿ ನೀಡಿದವು. ಅತ್ಯಂತ ರೋಚಕ ಅಂತ್ಯ ಕಂಡ ಈ ಪಂದ್ಯದಲ್ಲಿ ಬಜರಂಗಿ ಬಾಯ್ಸ್ ಕೇವಲ ಒಂದು ರನ್ನಿಂದ ಸೋಲು ಕಾಣುವಂತಾಯಿತು. ಬ್ಲೂ ಸ್ಟ್ರೈಕರ್ಸ್ ಫೈನಲ್ ಪ್ರವೇಶಿಸಿದರು.
ಪಾರಮ್ಯ ಮೆರೆದ ಡೈಲಿಹಂಟ್
ಫೈನಲ್ ಪಂದ್ಯದಲ್ಲಿ ಮತ್ತೆ ಡೈಲಿಹಂಟ್ ತಂಡ ಪಾರಮ್ಯ ಮೆರೆಯಿತು. ಮೊದಲು ಬ್ಯಾಟ್ ಮಾಡಿದ ಬ್ಲೂ ಸ್ಟ್ರೈಕರ್ಸ್ ತಂಡವನ್ನು ಕಡಿಮೆ ಮೊತ್ತಕ್ಕೆ ಡೈಲಿಹಂಟ್ ಬೌಲರ್ಗಳು ಕಟ್ಟಿಹಾಕಿದರು. ನಂತರ ಬ್ಯಾಟಿಂಗ್ ಗೆ ಇಳಿದ ಡೈಲಿಹಂಟ್ ಬ್ಯಾಟ್ಸ್ಮನ್ ಗಳು ಕೆಲವೇ ಓವರ್ಗಳಲ್ಲಿ ಜಯದ ರನ್ನುಗಳನ್ನು ಭಾರಿಸಿ ಟೂರ್ನಿಯನ್ನು ತಮ್ಮ ಹೆಸರಿಗೆ ಮಾಡಿಕೊಂಡರು.
ಪುರುಷರಿಗೆ ಕಡಿಮೆ ಇಲ್ಲದಂತೆ ಬ್ಯಾಟ್ ಬೀಸಿದ ವನಿತೆಯರು
ಈ ಮಧ್ಯೆ ಒನ್ ಇಂಡಿಯಾದ ಮಹಿಳಾ ಸಿಬ್ಬಂದಿ ಸಹ ಕ್ರಿಕೆಟ್ ಪ್ರತಿಭಾ ಪ್ರದರ್ಶನ ಮಾಡಿದರು. ಬ್ಲೂ ಮತ್ತು ವೈಟ್ ಎಂದು ಎರಡು ತಂಡವಾಗಿ ವಿಂಗಡಣೆಗೊಂಡ ವನಿತೆಯರು. ಪುರುಷರಷ್ಟೆ ಸಕ್ಷಮವಾಗಿ ಬ್ಯಾಟ್ ಬೀಸಿದರು. ಮೊದಲು ಬ್ಯಾಟ್ ಮಾಡಿದ ವೈಟ್ ತಂಡ ಆರು ಓವರ್ಗೆ 54 ರನ್ ಭಾರಿಸಿ ಸವಾಲಿನ ಮೊತ್ತವನ್ನೇ ಪೇರಿಸಿದ್ದರು. ಸವಾಲು ಬೆನ್ನತ್ತಿದ ಬ್ಲೂ ತಂಡ ಇನ್ನೂ ಮೂರು ಚೆಂಡು ಉಳಿದಿರುವಂತೆಯೇ ಗುರಿ ತಲುಪಿ ಗೆಲುವಿನ ನಗೆ ಬೀರಿತು.
ಹಾಜರಿದ್ದ ಪ್ರಮುಖರು ಇವರು
ಕ್ರೀಡಾಕೂಟದಲ್ಲಿ ಒನ್ ಇಂಡಿಯಾ ಪ್ರಧಾನ ಸಂಪಾದಕ ಎ.ಕೆ.ಖಾನ್, ಡೈಲಿಹಂಟ್ ಸುದ್ದಿ ವಿಭಾಗ ಮುಖ್ಯಸ್ಥ ರಾವಣನ್ , ಒನ್ಇಂಡಿಯಾ ಕನ್ನಡ ವಿಭಾಗದ ಸಂಪಾದಕ ಪ್ರಶಾಂತ್, ಒನ್ ಇಂಡಿಯಾ ಅಡ್ಮಿನ್ ವಿಭಾಗದ ಮುಖ್ಯಸ್ಥ ಬಾಲರಾಜ್ ತಂತ್ರಿ, ಮಾನವ ಸಂಪನ್ಮೂಲ ವಿಭಾಗದ ಮಹೇಶ್ ಉಪಸ್ಥಿತರಿದ್ದರು.