Breaking: ಪಾಕಿಸ್ತಾನ ಪರ ಘೋಷಣೆ ಕೂಗಿದ ಮತ್ತೊಬ್ಬ ಯುವತಿ
Recommended Video
ಬೆಂಗಳೂರು, ಫೆಬ್ರವರಿ 21: ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷಣೆ ಮೂಲಕ ಅಮೂಲ್ಯ ಲಿಯೋನಾ ವಿವಾದ ಸೃಷ್ಟಿಸಿದ ಮರು ದಿನವೇ ಮತ್ತೊಬ್ಬ ಯುವತಿ ಪಾಕ್ ಪರ ಘೋಷಣೆ ಕೂಗಿದ್ದಾಳೆ.
ಬೆಂಗಳೂರಿನ ಟೌನ್ ಹಾಲ್ ಬಳಿ ಶುಕ್ರವಾರ ನಡೆಯುತ್ತಿದ್ದ ಪ್ರತಿಭಟನೆ ವೇಳೆ ಯುವತಿಯೊಬ್ಬಳು ಪಾಕಿಸ್ತಾನ ಮತ್ತು ಕಾಶ್ಮೀರದ ವಿಚಾರಕ್ಕೆ ಸಂಬಂಧಿಸಿದಂತೆ ಘೋಷಣೆ ಕೂಗಿದ್ದಾಳೆ ಎನ್ನಲಾಗಿದೆ. ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದ ಅಮೂಲ್ಯ ವಿರುದ್ಧ ಹಿಂದೂಪರ ಸಂಘಟನೆಗಳು ಟೌನ್ ಹಾಲ್ ಬಳಿ ಪ್ರತಿಭಟನೆ ನಡೆಸುತ್ತಿದ್ದವು. ಆಗ ಯುವತಿ ಈ ಘೋಷಣೆ ಮಾಡಿದ್ದಾಳೆ ಎನ್ನಲಾಗಿದೆ.
ಪಾಕಿಸ್ತಾನ ಪರ ಅಮೂಲ್ಯ ಲಿಯೋನಾ ಘೋಷಣೆ: ಯಾರು, ಏನು ಹೇಳಿದರು?
ಕೂಡಲೇ ರೊಚ್ಚಿಗೆದ್ದ ಪ್ರತಿಭಟನಾಕಾರರು ಆಕೆಯ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಪ್ರತಿಭಟನೆಯ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು, ಆಕೆಯನ್ನು ವಶಕ್ಕೆ ಪಡೆದುಕೊಂಡ ಎಸ್.ಜೆ. ಪಾರ್ಕ್ ಠಾಣೆ ಪೊಲೀಸರು ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ.
ಸ್ಥಳದಲ್ಲಿ ಬಿಗುವಿನ ವಾತಾವರಣ
ಕನ್ನಡಪರ ಸಂಘಟನೆಗಳು ನಡೆಸುತ್ತಿದ್ದ ಪ್ರತಿಭಟನೆ ಜಾಗಕ್ಕೆ ಬಂದ ಯುವತಿ ಏಕಾಏಕಿ ಪಾಕಿಸ್ತಾನದ ಪರ ಘೋಷಣೆ ಕೂಗಿದ್ದಾಳೆ. ಆಕೆ ಅಪ್ರಾಪ್ತ ವಯಸ್ಸಿನವಳು ಎಂದು ಹೇಳಲಾಗಿದೆ. ಆಕೆ ಉದ್ದೇಶಪೂರ್ವಕವಾಗಿಯೇ ಈ ರೀತಿ ಕೂಗಿದ್ದಾಳೆ ಎನ್ನಲಾಗಿದೆ. ಆಕೆಯ ಘೋಷಣೆ ಕೇಳುತ್ತಿದ್ದಂತೆಯೇ ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಯಿತು. ಕೆಲವರು ಆಕೆಗೆ ಹೊಡೆಯಲು ಮುಂದಾದರು. ಇನ್ನು ಕೆಲವರು ಆಕೆಯನ್ನು ರಕ್ಷಿಸಿ ಪೊಲೀಸರ ವಶಕ್ಕೆ ಒಪ್ಪಿಸಿದರು.
ಆಯೋಜಕರಿಂದ ಆಕ್ಷೇಪ
ಹಿಂದೂ ಸಂಘಟನೆ ವತಿಯಿಂದ ಪ್ರತಿಭಟನೆ ಹಮ್ಮಿಕೊಂಡಿದ್ದರು. ಪ್ರತಿಭಟನೆ ಮುಗಿಯುವ ವೇಳೆ ಮಧ್ಯಾಹ್ನ 12.45ರ ವೇಳೆ ಯುವತಿಯೊಬ್ಬಳು ಪ್ಲೇ ಕಾರ್ಡ್ ಹಿಡಿದುಕೊಂಡು ಕುಳಿತಿದ್ದಳು. ಅದರಲ್ಲಿ ಆಕ್ಷೇಪಾರ್ಹ ಬರಹ ಇರುವುದನ್ನು ಕಂಡ ಪ್ರತಿಭಟನಾ ಆಯೋಜಕರು ಅಲ್ಲಿಂದ ತೆರಳುವಂತೆ ಆಕೆಗೆ ಸೂಚಿಸಿದರು. ಪೊಲೀಸರು ಮಧ್ಯಪ್ರವೇಶಿಸಿ ಆಕೆಯನ್ನು ಹಿಡಿದುಕೊಂಡು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಆಕೆ ವಿರುದ್ಧ ಆಯೋಜಕರು ದೂರು ನೀಡಿದರೆ ಪ್ರಕರಣ ದಾಖಲಿಸುತ್ತೇವೆ. ಇಲ್ಲದಿದ್ದರೆ ಪ್ರತಿಭಟನೆಯಗೆ ಅಡ್ಡಿಪಡಿಸಿದ್ದಕ್ಕಾಗಿ ಸ್ವಯಂಪ್ರೇರಣೆಯಿಂದ ದೂರು ದಾಖಲಿಸುತ್ತೇವೆ ಎಂದು ಡಿಸಿಪಿ ಚೇತನ್ ಸಿಂಗ್ ರಾಠೋಡ್ ತಿಳಿಸಿದ್ದಾರೆ.
ಘೋಷಣೆ ಕೂಗಿದ್ದಕ್ಕೆ ದಾಖಲೆ ಇಲ್ಲ
ಆಕೆ ಹಿಡಿದಿದ್ದ ಭಿತ್ತಿ ಪತ್ರದಲ್ಲಿ ಮುಕ್ತಿ ದಲಿತ, ಮುಕ್ತಿ ಮುಸ್ಲಿಂ, ಮುಕ್ತಿ ಕಾಶ್ಮೀರ ಎಂಬ ಬರಹ ಬರೆದಿತ್ತು. ಅದನ್ನು ಪ್ರತಿಭಟನೆಯ ಸಂಘಟಕರು ಗುರುತಿಸಿದ್ದಾರೆ. ಆದರೆ ಆಕೆ ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾಳೆ ಎಂಬುದಕ್ಕೆ ನಮ್ಮ ಬಳಿ ಮಾಹಿತಿ ಇಲ್ಲ. ಈ ಬಗ್ಗೆ ವಿಡಿಯೋ ದಾಖಲೆಯನ್ನು ಪರಿಶೀಲನೆ ಮಾಡುತ್ತೇವೆ. ಆಕೆ ಪ್ರತಿಭಟನೆಯ ಸ್ಥಳಕ್ಕೆ ತಡವಾಗಿ ಸೇರಿದ್ದಾರೆ ಎನ್ನುವುದು ತಿಳಿದುಬಂದಿದೆ.
ವಿಚಾರಣೆ ನಡೆಸಿ ಮಾಹಿತಿ
ಆಕೆಯನ್ನು ಮೊದಲು ರಕ್ಷಿಸಿ ಠಾಣೆಗೆ ಕರೆದೊಯ್ಯಲಾಗಿದೆ. ಆಕೆಯ ಹೆಸರು, ಊರು, ಪ್ರತಿಭಟನೆಯಲ್ಲಿ ಭಿತ್ತಿಪತ್ರ ಹಿಡಿದು ಕುಳಿತಿದ್ದಕ್ಕೆ ಕಾರಣ ಮುಂತಾದವುಗಳನ್ನು ತಿಳಿದುಕೊಳ್ಳಲು ಆಕೆಯನ್ನು ವಿಚಾರಣೆ ಮಾಡುತ್ತೇವೆ. ಆಕೆಯನ್ನು ಮೊದಲು ಬಚಾವು ಮಾಡಿ ಇಲ್ಲಿಂದ ಕಳಿಸುವುದು ನಮ್ಮ ಕರ್ತವ್ಯವಾಗಿತ್ತು ಎಂದು ಅವರು ತಿಳಿಸಿದ್ದಾರೆ.
ಪ್ರತಿಭಟನೆಗೆ ಅಡ್ಡಿಪಡಿಸುವುದು ತಪ್ಪು
ಬೇರೆ ಸಮುದಾಯ, ಸಂಘಟನೆ ಪ್ರತಿಭಟನೆ ನಡೆಸುವಾಗ ಅಡ್ಡಿ ಪಡಿಸಲು ಯಾರೂ ಹೋಗಬಾರದು. ಅವರು ಪ್ರತಿಭಟನೆ ಮಾಡಲು ಬೇರೆ ದಿನ ಸಮಯ ಬೇಕಾದರೆ ನೀಡಲಾಗುತ್ತದೆ. ಬೇರೆಯವರ ಪ್ರತಿಭಟನೆಯಲ್ಲಿ ಶಾಮೀಲಾಗಿ ತಮ್ಮ ವಿಚಾರಧಾರೆ ಬಗ್ಗೆ ಅಡ್ಡಿ ಮಾಡಬಾರದು ಇದು ತಪ್ಪು ಎಂದು ಹೇಳಿದ್ದಾರೆ.